ನವದೆಹಲಿ: ದೇಶದಲ್ಲಿ ಬಡವರ ಪ್ರಮಾಣ ಶೇ.8.5ಕ್ಕೆ ಇಳಿಕೆಯಾಗಿದೆ ಎಂದು ಪ್ರಸಿದ್ಧ ಖಾಸಗಿ ಸಂಶೋಧನಾ ಸಂಸ್ಥೆ ಎನ್ಸಿಎಇಆರ್ (ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿ) ನ ಮಾನವ ಅಭಿವೃದ್ಧಿ ಸಮೀಕ್ಷೆಯ ವರದಿ ಹೇಳಿದೆ.
2011-12ನೇ ಸಾಲಿನಲ್ಲಿ ದೇಶದಲ್ಲಿ ಬಡವರ ಸಂಖ್ಯೆ ಶೇ.21ರಷ್ಟಿತ್ತು. ಅದು ಈಗ ಶೇ.8.5ಕ್ಕೆ ಇಳಿಕೆಯಾಗಿದೆ. ತೀವ್ರ ಬಡತನದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದರೂ ‘ಸ್ವಲ್ಪ ಹೆಚ್ಚುಕಮ್ಮಿ ಆದರೆ’ ಮತ್ತೆ ಬಡತನಕ್ಕೆ ಜಾರುವವರ ಸಂಖ್ಯೆ ಈಗಲೂ ಗಣನೀಯವಾಗಿಯೇ ಇದೆ ಎಂದು ವರದಿ ತಿಳಿಸಿದೆ.
ಎನ್ಸಿಎಇಆರ್ ಎಂಬುದು ದೇಶದ ಅತ್ಯಂತ ಹಳೆಯ ಆರ್ಥಿಕ ಹಾಗೂ ಸಾಮಾಜಿಕ ಸಂಶೋಧನೆಗಳಿಗೆ ಸಂಬಂಧಿಸಿದ ಎನ್ಜಿಒ ಆಗಿದೆ. ಇನ್ಫೋಸಿಸ್ನ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಇದರ ಅಧ್ಯಕ್ಷರಾಗಿದ್ದು, ಈ ಸಂಸ್ಥೆಯ ಅರ್ಥಶಾಸ್ತ್ರಜ್ಞರು ಸಿದ್ಧಪಡಿಸಿದ ವರದಿಯಲ್ಲಿ ಭಾರತದಲ್ಲಿ ಬಡವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
ತೆಂಡುಲ್ಕರ್ ಸಮಿತಿಯ ಮಾನದಂಡ:
ದೇಶದಲ್ಲಿ ಹಣದುಬ್ಬರವನ್ನು ಆಧರಿಸಿ ಬಡತನದ ಪ್ರಮಾಣವನ್ನು ಅಳೆಯುವ ತೆಂಡುಲ್ಕರ್ ಸಮಿತಿಯ ಮಾನದಂಡಗಳನ್ನು ಆಧರಿಸಿ ಈ ಸಂಸ್ಥೆ ಬಡವರ ಸಂಖ್ಯೆಯನ್ನು ಅಂದಾಜಿಸಿದೆ. ಇದೇ ಮಾನದಂಡವನ್ನು ಆಧರಿಸಿ ಸರ್ಕಾರಗಳು ಕೂಡ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತವೆ. ಆದರೆ, ಬಡತನವನ್ನು ಅಳೆಯಲು ವಿಶ್ವಬ್ಯಾಂಕ್ ನಿಗದಿಪಡಿಸಿದ ‘ದಿನಕ್ಕೆ 2.15 ಡಾಲರ್ (180 ರು.)ಗಿಂತ ಕಡಿಮೆ ಗಳಿಸುವವರು ಬಡವರು’ ಎಂಬ ಅಂತಾರಾಷ್ಟ್ರೀಯ ಮಾನದಂಡಕ್ಕಿಂತ ತೆಂಡುಲ್ಕರ್ ಸಮಿತಿ ನಿಗದಿಪಡಿಸಿದ ಆದಾಯದ ಮಾನದಂಡ ಕಡಿಮೆಯಿದೆ.
ನಗರ ಪ್ರದೇಶದಲ್ಲಿ ಬಡತನ ಕಡಿಮೆ:
ಮಂಗಳವಾರ ಬಿಡುಗಡೆಗೊಂಡ ಈ ವರದಿ ಎನ್ಸಿಎಇಆರ್ ಥಿಂಕ್ಟ್ಯಾಂಕ್ನ ಸೊನಾಲ್ಡೆ ದೇಸಾಯಿ ಸಿದ್ಧಪಡಿಸಿದ ವರದಿಯಾಗಿದೆ. ಅದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 2011ರಲ್ಲಿ ಇದ್ದ ಬಡವರ ಸಂಖ್ಯೆ ಶೇ.24.8ರಿಂದ ಈಗ ಶೇ.8.6ಕ್ಕೆ ಇಳಿಕೆಯಾಗಿದೆ. ನಗರ ಪ್ರದೇಶಗಳಲ್ಲಿ ಇದ್ದ ಬಡವರ ಸಂಖ್ಯೆ ಶೇ.13.4ರಿಂದ ಶೇ.8.4ಕ್ಕೆ ಇಳಿಕೆಯಾಗಿದೆ. ಒಟ್ಟಾರೆ 2011ರಲ್ಲಿ ಶೇ.21ರಷ್ಟಿದ್ದ ಬಡವರ ಸಂಖ್ಯೆ ಈಗ ಶೇ.8.5ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಲಾಗಿದೆ.
ಕೆಲ ಸಮಯದ ಹಿಂದೆ ಎಸ್ಬಿಐ ರೀಸರ್ಚ್ ಕೂಡ ದೇಶದ ಬಡವರ ಸಂಖ್ಯೆಯನ್ನು ಅಂದಾಜಿಸಿತ್ತು. ಅದು ಗ್ರಾಮೀಣ ಪ್ರದೇಶದಲ್ಲಿ ಬಡವರ ಸಂಖ್ಯೆ ಶೇ.7.2ಕ್ಕೆ ಹಾಗೂ ನಗರ ಪ್ರದೇಶಗಳಲ್ಲಿ ಬಡವರ ಸಂಖ್ಯೆ ಶೇ.4.6ಕ್ಕೆ ಇಳಿಕೆಯಾಗಿದೆ ಎಂದು ಹೇಳಿತ್ತು. ಇನ್ನು, ನೀತಿ ಆಯೋಗದ ಸಿಇಒ ಬಿ.ವಿ.ಆರ್.ಸುಬ್ರಮಣ್ಯಂ ಅವರು ದೇಶದಲ್ಲಿ ಬಡವರ ಸಂಖ್ಯೆ ಶೇ.5ಕ್ಕೆ ಇಳಿಕೆಯಾಗಿದೆ ಎಂದು ಹೇಳಿದ್ದರು. ಇವೆರಡೂ ಅಂಕಿಸಂಖ್ಯೆಗಿಂತ ಎನ್ಸಿಎಇಆರ್ ಅಂದಾಜಿಸಿದ ಬಡವರ ಸಂಖ್ಯೆ ಜಾಸ್ತಿಯಿದೆ.
ಮತ್ತೆ ಬಡತನ ಏರಬಹುದು:
ಎನ್ಸಿಎಇಆರ್ ವರದಿಯಲ್ಲಿ, ದೇಶದಲ್ಲಿ ಆಹಾರ ಸಬ್ಸಿಡಿ ಹಾಗೂ ಇನ್ನಿತರ ಸರ್ಕಾರಿ ನೆರವುಗಳನ್ನು ನೀಡುತ್ತಿರುವುದರಿಂದ ಬಡತನದ ಪ್ರಮಾಣ ಕಡಿಮೆಯಾಗಿದೆ. ಆದರೆ, ಅನಾರೋಗ್ಯ, ಮದುವೆ, ನೈಸರ್ಗಿಕ ವಿಪತ್ತಿನಂತಹ ಘಟನೆಗಳು ಸಂಭವಿಸಿದರೆ ಮತ್ತೆ ಬಡತನಕ್ಕೆ ಜಾರುವ ಸಾಧ್ಯತೆಯಿರುವವರ ಸಂಖ್ಯೆ ಸಾಕಷ್ಟಿದೆ. ಹೀಗಾಗಿ ಸರ್ಕಾರಗಳು ಸಾಮಾಜಿಕ ಭದ್ರತೆಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ ಎಂದು ಹೇಳಲಾಗಿದೆ.