ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಪರಿಣಾಮ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಅನಿಶ್ಚಿತತೆ ಮುಂದುವರೆದಿರುವ ಬೆನ್ನಲ್ಲೇ ಡಾಲರ್ ಎದುರು ರುಪಾಯಿ ಮೌಲ್ಯ ಮತ್ತಷ್ಟು ಕುಸಿತ ಕಂಡಿದೆ. ಸೋಮವಾರ ರುಪಾಯಿ ಮೌಲ್ಯ 1 ಪೈಸೆ ಕುಸಿದು 88.10ಕ್ಕೆ ತಲುಪಿದೆ.
ಇದು ಡಾಲರ್ ಎದುರು ರುಪಾಯಿಯ ಇದುವರೆಗಿನ ಸಾರ್ವಕಾಲಿಕ ಕನಿಷ್ಠ ಮೌಲ್ಯವಾಗಿದೆ. ದಿನದ ಆರಂಭದಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಬರೋಬ್ಬರಿ 88.33 ರು.ವರೆಗೂ ಕುಸಿದಿತ್ತಾದರೂ, ದಿನದಂತ್ಯಕ್ಕೆ ಅಲ್ಪ ಚೇತರಿಕೆ ಕಂಡು 88.10 ರು.ನಲ್ಲಿ ಅಂತ್ಯವಾಯಿತು.
ಮುಸ್ಲಿಂ ಮತಕ್ಕೆ ಮಣಿದ ದೀದಿ: ಜಾವೇದ್ ಅಖ್ತರ್ ಕಾರ್ಯಕ್ರಮ ಮುಂದೂಡಿಕೆ
ಕೋಲ್ಕತಾ: ಉರ್ದು ಅಕಾಡೆಮಿಯ ಕಾರ್ಯಕ್ರಮಕ್ಕೆ ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಅವರನ್ನು ಆಹ್ವಾನಿಸಿದ್ದಕ್ಕೆ ಇಸ್ಲಾಮಿಕ್ ಸಂಘಟನೆಗಳ ತೀವ್ರ ವಿರೋಧದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಕಾರ್ಯಕ್ರಮವನ್ನು ಮುಂದೂಡಿದೆ.
ಅಖ್ತರ್ ಧರ್ಮ ಮತ್ತು ದೇವರ ವಿರುರ್ದಧ ಮಾತನಾಡುವ ವ್ಯಕ್ತಿ. ಹೀಗಾಗಿ ಅವರು ಕಾರ್ಯಕ್ರಮಕ್ಕೆ ಬಂದರೆ ಪ್ರತಿಭಟನೆ ನಡೆಸುವುದಾಗಿ ಜಮೀಯತ್ ಉಲೇಮಾ ಎ ಹಿಂದ್ ಮತ್ತು ವಹ್ಯಹಿನ್ ಫೌಂಡೇಷನ್ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮುಸ್ಲಿಮರ ಕೈತಪ್ಪುವ ಭೀತಿಯಲ್ಲಿ ಮತ್ತೊಬ್ಬ ಮುಸ್ಲಿಂ ಸಾಹಿತಿ ಭಾಗಿಯಾಗಬೇಕಿದ್ದ ಕಾರ್ಯಕ್ರಮವನ್ನೇ ದೀದಿ ಸರ್ಕಾರ ಮುಂದೂಡಿದೆ.
ಮೀಸಲು ಹೋರಾಟಗಾರ ಜಾರಂಗೆಗೆ ಜಾಗ ಖಾಲಿ ಮಾಡಲು ಹೈ ತಾಕೀತು
ಪುಣೆ/ಮುಂಬೈ: ಮರಾಠರಿಗೆ ಇತರೆ ಹಿಂದುಳಿದ ವರ್ಗದಡಿ ಮೀಸಲಿಗೆ ಆಗ್ರಹಿಸಿ ಮನೋಜ್ ಜಾರಂಗೆ ನಡೆಸುತ್ತಿರುವ ಉಪವಾಸ 4ನೇ ದಿನಕ್ಕೆ ಕಾಲಿಟ್ಟಿರುವ ನಡುವೆಯೇ ‘ಹೋರಾಟ ನಿಯಮ ಉಲ್ಲಂಘಿಸಿದೆ. ಪ್ರತಿಭಟನೆಗೆ ನಿಗದಿಪಡಿಸಿದ ಅಜಾದ್ ಮೈದಾನದಲ್ಲಿ ಮಾತ್ರವೇ ಪ್ರತಿಭಟ ನಾಕಾರರು ಪ್ರತಿಭಟಿಸುತ್ತಿಲ್ಲ. ದಕ್ಷಿಣ ಮುಂಬೈನ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಪ್ರತಿಭಟಿಸುತ್ತಿದ್ದಾರೆ. ಇದರಿಂದ ಇಡೀ ನಗರ ಸ್ಥಬ್ಧವಾಗಿದೆ. ಜನರಿಗೆ ತೊಂದರೆಯಾಗಿದೆ ಎಂದು ಕಿಡಿಕಾರಿರುವ ಬಾಂಬೆ ಹೈಕೋರ್ಟ್ ಮಂಗಳವಾರ ಮಧ್ಯಾಹ್ನದೊಳಗೆ ಪ್ರತಿಭಟನೆ ಸ್ಥಳ ಖಾಲಿ ಮಾಡಬೇಕು’ ಎಂದು ಎಚ್ಚರಿಸಿದೆ. ಈ ನಡುವೆ ‘ಜಾರಂಗೆ ಹೋರಾಟ ಕುರಿತ ಹೈಕೋರ್ಟ್ ನಿರ್ದೇಶನ ಪಾಲಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಹೇಳಿದ್ದಾರೆ. ಅಲ್ಲದೆ ಮೀಸಲು ಬಗ್ಗೆ ಕಾನೂನು ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಬಯಸುತ್ತೇವೆ’ ಎಂದಿದ್ದಾರೆ.
ಬಿಡುಗಡೆಯಾದ 17 ದಿನಕ್ಕೆ ₹500 ಕೋಟಿ ಸಂಗ್ರಹಿಸಿದ ರಜನೀಕಾಂಗತ್ ‘ಕೂಲಿ’
ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯಭೂಮಿಕೆಯ ‘ಕೂಲಿ’ ಚಲನಚಿತ್ರ ಬಿಡುಗಡೆಗೊಂಡ 17ನೇ ದಿನಕ್ಕೆ ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 504 ಕೋಟಿ ರು. ಗಳಿಸಿದೆ. ಮೊದಲ ದಿನ ಜಾಗತಿಕವಾಗಿ 151 ಕೋಟಿ ರು. ಗಳಿಸಿದ್ದ ‘ಕೂಲಿ’ ಸಿನಿಮಾ ಆ.31ರ ಹೊತ್ತಿಗೆ 504 ಕೋಟಿ ರು. ಬಾಚಿದೆ. ಸ್ಥಳೀಯ ಗಲ್ಲಾ ಪೆಟ್ಟಿಗೆಯಲ್ಲಿ 327 ಕೋಟಿ ರು. ಸಂಗ್ರಹಿಸಿದೆ.
ಆ.14ರಂದು ಬಿಡುಗಡೆಗೊಂಡಿದ್ದ ಈ ಸಿನಿಮಾದಲ್ಲಿ ತೆಲುಗಿನ ನಾಗಾರ್ಜುನ, ಕನ್ನಡದ ಉಪೇಂದ್ರ, ರಚಿತಾ ರಾಮ್, ಸೌಬಿನ್ ಶಾಹಿರ್, ಶ್ರುತಿ ಹಾಸನ್, ಸತ್ಯರಾಜ್, ಬಾಲಿವುಡ್ನ ಅಮಿರ್ ಖಾನ್ ತೆರೆ ಹಂಚಿಕೊಂಡಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನವಿದೆ.