;Resize=(412,232))
ತಿರುವನಂತಪುರಂ: ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ಕವಚಗಳಿಗೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಅವರನ್ನು ವಿಶೇಷ ತನಿಖಾ ತಂಡದ(ಎಸ್ಐಟಿ) ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ಸಿಪಿಎಂ ಪಕ್ಷದ ಮಾಜಿ ಶಾಸಕರೂ ಆಗಿರುವ ಇವರು, 2019ರಲ್ಲಿ ಕವಚಗಳನ್ನು ಮರುಲೇಪನಕ್ಕಾಗಿ ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿಗೆ ಹಸ್ತಾಂತರಿಸುವಾಗ ಟಿಡಿಬಿಯ ಅಧ್ಯಕ್ಷರಾಗಿದ್ದರು. ಮರುಲೇಪನದ ಬಳಿಕ ಪೊಟ್ಟಿ ಕವಚಗಳನ್ನು ಹಿಂದಿರುಗಿಸುವಾಗ ಸುಮಾರು 4 ಕೆ.ಜಿ. ಚಿನ್ನ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪದ್ಮಕುಮಾರ್ರನ್ನು ಬಂಧಿಸಿ, ಅಪರಾಧ ವಿಭಾಗದ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ. ಅವರನ್ನು ಕೊಲ್ಲಂನ ವಿಚಕ್ಷಣಾ ನ್ಯಾಯಾಲಯದೆದುರು ಹಾಜರುಪಡಿಸಲಾಗುವುದು ಎನ್ನಲಾಗಿದೆ.
ಪಟ್ಟಣಂತಿಟ್ಟ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿನ ಜನದಟ್ಟಣೆ ನಿರ್ವಹಿಸುವ ನಿಟ್ಟಿನಲ್ಲಿ, ಸ್ಪಾಟ್ ಬುಕ್ಕಿಂಗ್ (ಸ್ಥಳಕ್ಕೆ ಆಗಮಿಸಿದ ಬಳಿಕ ದೇವರ ದರ್ಶನಕ್ಕೆ ಪ್ರವೇಶ) ಮಿತಿಯನ್ನು 20000ದಿಂದ 5000ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಮುಂಗಡ ಬುಕ್ಕಿಂಗ್ ಮಾಡಿದ 70000 ಜನರಿಗೆ ಮತ್ತು ಸ್ಪಾಟ್ಬುಕ್ಕಿಂಗ್ ಅವಕಾಶ ಪಡೆದ 5000 ಜನರಿಗೆ ಮಾತ್ರ ನಿತ್ಯ ದೇವರ ದರ್ಶನಕ್ಕೆ ಅವಕಾಶ ಸಿಗಲಿದೆ.
ಈ ನಿರ್ಬಂಧ ನ.24ರವರೆಗೂ ಇರಲಿದೆ. ಜೊತೆಗೆ ಸ್ಪಾಟ್ ಬುಕಿಂಗ್ ವ್ಯವಸ್ಥೆ ನಿಲಕ್ಕಲ್, ವಂದಿಪೆರಿಯಾರ್ನ ಕೇಂದ್ರಕ್ಕೆ ಸೀಮಿತಗೊಳಿಸಲಾಗಿದೆ. ಪಂಪಾ, ಎರುಮೆಲಿ, ಚೆಂಗನೂರುನಲ್ಲಿ ಅವಕಾಶ ಸ್ಥಗಿತಗೊಳಿಸಲಾಗಿದೆ.