ಕರೂರು: ಶನಿವಾರ ತಮಿಳುನಾಡಿನ ಕರೂರಿನಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ಖ್ಯಾತ ತಮಿಳು ನಟ ವಿಜಯ್ ಅವರ ಪ್ರಚಾರ ಸಭೆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ 36 ಜನರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ದುರ್ಘಟನೆಯಲ್ಲಿ ಸುಮಾರು 1000 ಜನರು ಜನ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಏರುವ ಸಂಭವವಿದೆ.
ಹೊಸ ಪಕ್ಷ ಕಟ್ಟಿರುವ ವಿಜಯ್ ಮೊದಲು ನಮಕ್ಕಲ್ನಲ್ಲಿ ಸಭೆ ನಡೆಸಿ, ಬಳಿಕ ನಿಗದಿತ ವೇಳೆಗಿಂತ 6 ತಾಸು ವಿಳಂಬವಾಗಿ ಕರೂರಿಗೆ ಸಂಜೆ ವೇಳೆಗೆ ಬಂದಿದ್ದರು. ಈ ಸ್ಥಳದಲ್ಲಿ ತೆರೆದ ವಾಹನದಲ್ಲಿ ವಿಜಯ್ ಭಾಷಣ ಆರಂಭಿಸಿದ್ದರು.
10 ಸಾವಿರ ಜನರು ಸೇರಲು ಅನುಮತಿ ಇದ್ದ ಸ್ಥಳದಲ್ಲಿ 50 ಸಾವಿರ ಜನರು ಸೇರಿದ್ದರು. ಇವರಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಷ್ಟೇ ಅಲ್ಲ, ನೆಚ್ಚಿನ ನಟನ ನೋಡಲು ಮಕ್ಕಳೂ ನೆರೆದಿದ್ದರು. ಆಗ ವಿಜಯ್ ಅವರ ವಾಹನದತ್ತ ನಾಮುಂದು ತಾಮುಂದು ಎಂದು ಮುನ್ನುಗ್ಗಿದಾಗ ಒಬ್ಬರ ಮೇಲೊಬ್ಬರು ಬಿದ್ದು ಕಾಲ್ತುಳಿತದ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ, ಜನಸಂದಣಿ ಹೇಳತೀರದಾಗಿ ಉಸಿರುಕಟ್ಟಿದ ವಾತಾವರಣ ಉಂಟಾಗಿ ಹಲವಾರು ಜನರು ಪ್ರಜ್ಞೆ ತಪ್ಪಿದ್ದಾರೆ. ಇದರಿಂದ ಅಪಾರ ಸಾವು ನೋವು ಸಂಭವಿಸಿದೆ.
ಕೂಡಲೇ ಸಿಎಂ ಸೂಚನೆ ಮೇರೆಗೆ ರಾಜ್ಯ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಜನರಿಗೆ ನೆರವಾಗಿದ್ದಾರೆ, ಘಟನೆಯಿಂದ ಆಘಾತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ವಿಜಯ್ ಹಾಗೂ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ನೋವು ವ್ಯಕ್ತಪಡಿಸಿದ್ದಾರೆ. ಸ್ಟಾಲಿನ್ ಭಾನುವಾರ ಕರೂರಿಗೆ ಆಗಮಿಸುವ ಸಾಧ್ಯತೆ ಇದೆ.
ಭಾಷಣ ನಿಲ್ಲಿಸಿದ ವಿಜಯ್:
ವಿಜಯ್ ಭಾಷಣದ ವಾಹನ ಸುತ್ತ ಜನಸಂದಣಿ ಹೆಚ್ಚುತ್ತ ಹೋದಂತೆ, ಪಕ್ಷದ ಕಾರ್ಯಕರ್ತರು ಮತ್ತು ನೆಚ್ಚಿನ ನಟನನ್ನು ನೋಡಲು ನೆರೆದಿದ್ದ ಮಕ್ಕಳು ಮೂರ್ಛೆ ಹೋದರು. ಇದರಿಂದಾಗಿ ವಿಜಯ್ ತಮ್ಮ ಭಾಷಣವನ್ನು ನಿಲ್ಲಿಸಿ ಶಾಂತವಾಗಿರಲು ಜನರಿಗೆ ಕರೆ ನೀಡಿದರು ಮತ್ತು ತುರ್ತು ಆ್ಯಂಬುಲೆನ್ಸ್ಗೆ ಮನವಿ ಮಾಡಿದರು.
ಇದಲ್ಲದೆ, ಅಸ್ವಸ್ಥರಾದವರಿಗೆ ಸಹಾಯ ಮಾಡಲು ನೀರಿನ ಬಾಟಲಿಗಳನ್ನು ವಿತರಿಸಲಾಯಿತು ಮತ್ತು ವೈದ್ಯಕೀಯ ತಂಡಗಳನ್ನು ತಕ್ಷಣವೇ ನಿಯೋಜಿಸಲಾಯಿತು, ಕೂಡಲೇ ಆ್ಯಂಬುಲೆನ್ಸ್ಗಳು ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಿದವು.
ಗೊಂದಲದ ಸಮಯದಲ್ಲಿ, 9 ವರ್ಷದ ಬಾಲಕಿಯೊಬ್ಬಳು ಕಾಣೆಯಾಗಿದ್ದಾಳೆಂದು ವದಂತಿ ಕೇಳಿಬಂತು. ಕೂಡಲೇ ವಿಜಯ್ ಮಗುವನ್ನು ಹುಡುಕಿಕೊಡಿ ಎಂದು ಜನರಿಗೆ ಮನವಿ ಮಾಡಿದ ಪ್ರಸಂಗ ನಡೆಯಿತು.
ರೋದನ:
ಆಸ್ಪತ್ರೆಯ ಹೊರಗೆ ಮೃತರು ಹಾಗೂ ಗಾಯಾಳುಗಳ ಬಂಧುಗಳು ರೋದಿಸುತ್ತಿರುವ ದೃಶ್ಯ ಮಮ್ಮಲ ಮರುಗಿಸುವಂತಿತ್ತು.
ಮೊದಲಲ್ಲ:
ವಿಜಯ್ ಸಭೆಗಳಲ್ಲಿ ನೂಕುನುಗ್ಗಲು ಮೊದಲೇನಲ್ಲ. ಸರ್ಕಾರದ ಷರತ್ತು ಉಲ್ಲಂಘಿಸಿ ಮಕ್ಕಳನ್ನೂ ಕರೆತರುವುದು, ನಟನನ್ನು ನೋಡಲು ನುಗ್ಗುವುದು ಈ ರೀತಿಯ ಅನೇಕ ಪ್ರಸಂಗಗಳು ಹಿಂದೆ ನಡೆದಿದ್ದವು. ಪಕ್ಷಗಳ ಇಂಥ ಅವ್ಯವಸ್ಥೆಯ ರ್ಯಾಲಿಗಳ ವಿರುದ್ಧ ಒಮ್ಮೆ ಮದ್ರಾಸ್ ಹೈಕೋರ್ಟ್ ಕೂಡ ಚಾಟಿ ಬೀಸಿತ್ತು.
ನಾಯ್ಡು ರ್ಯಾಲಿ ವೇಳೆ 9 ಸಾವು:
2022ರ ಡಿ.9ರಂದು ಅಂದು ವಿಪಕ್ಷದಲ್ಲಿದ್ದ ಇಂದಿನ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ನೆಲ್ಲೂರು ಜಿಲ್ಲೆಯ ಪ್ರಚಾರ ಸಭೆಯಲ್ಲಿ ಇದೇ ರೀತಿ ಕಾಲ್ತುಳಿತ ಸಂಭವಿಸಿ 9 ಮಂದಿ ಸಾವನ್ನಪ್ಪಿದ್ದರು. ಇದೇ ವರ್ಷಾರಂಭದಲ್ಲಿ ತಿರುಮಲದಲ್ಲಿ ಕಾಲ್ತುಳಿತ ಸಂಭವಿಸಿ 6 ಭಕ್ತರು ಅಸುನೀಗಿದ್ದರು.ಸಂತ್ರಸ್ತರಿಗೆಲ್ಲಾ ಶಕ್ತಿ ಸಿಗಲಿತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ರ್ಯಾಲಿಯಲ್ಲಿ ನಡೆದ ದುರದೃಷ್ಟಕರ ಘಟನೆಯಿಂದ ದುಃಖವಾಗಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.ನರೇಂದ್ರ ಮೋದಿ, ಪ್ರಧಾನಿ
ಘಟನೆಯಿಂದ ದುಃಖವಾಗಿದೆ
ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ರ್ಯಾಲಿಯಲ್ಲಿ ನಡೆದ ದುರದೃಷ್ಟಕರ ಘಟನೆಯಿಂದ ದುಃಖವಾಗಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.
ನರೇಂದ್ರ ಮೋದಿ, ಪ್ರಧಾನಿ
ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ, ಖ್ಯಾತ ತಮಿಳು ನಟ ವಿಜಯ್ ಚುನಾವಣಾ ಪ್ರಚಾರದ ಭಾಗವಾಗಿ ಶನಿವಾರ ಸಂಜೆ ಕರೂರಿಗೆ ಆಗಮಿಸಿದ್ದರು
ಈ ವೇಳೆ ಅವರನ್ನು ನೋಡಲು ನೂಕು ನುಗ್ಗಲು ಉಂಟಾಗಿ ಒಬ್ಬರ ಮೇಲೆ ಒಬ್ಬರು ಬಿದ್ದು ಕಾಲ್ತುಳಿತ. ಪರಿಣಾಮ ಮಕ್ಕಳು ಸೇರಿ 34 ಜನರು ಬಲಿ
ಈ ಹಿಂದೆಯು ವಿಜಯ್ ಸಭೆಗಳಿಗೆ ಷರತ್ತು ಉಲ್ಲಂಘಿಸಿ ಮಕ್ಕಳ ಕರೆತರುವ, ನೂಕುನುಗ್ಗಲಿನ ಘಟನೆ ನಡೆದಿತ್ತು. ಇದಕ್ಕೆ ಕೋರ್ಟ್ ಕಿಡಿಕಾರಿತ್ತು