ನವದೆಹಲಿ: ಕೇಂದ್ರ ಸರ್ಕಾರದ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಚಿಂತನೆಗೆ ಡಿಎಂಕೆ ಬಳಿಕ ಇದೀಗ ಕಾಂಗ್ರೆಸ್ನಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕ್ಷೇತ್ರ ಮರುವಿಂಗಡಣೆಯಿಂದ ಜನಸಂಖ್ಯಾ ನಿಯಂತ್ರಣಾ ಕ್ರಮವನ್ನು ಯಶಸ್ವಿಯಾಗಿ ಜಾರಿಗೆ ತಂದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಕರ್ನಾಟಕದಲ್ಲಿ ಎರಡು ಸೇರಿ ಒಟ್ಟು 9 ರಾಜ್ಯಗಳಲ್ಲಿ ಒಂದರಿಂದ ಎಂಟರಷ್ಟು ಲೋಕಸಭಾ ಕ್ಷೇತ್ರಗಳು ಕಡಿತವಾಗಲಿವೆ ಎಂದು ಹೇಳಿದೆ.
ಜೈರಾಂ ರಮೇಶ್ ಅವರು ತಮ್ಮ ವಾದಕ್ಕೆ 2001 ಮತ್ತು 2011ರ ಜನಗಣತಿ ಆಧಾರಿತ ಮಿಲನ್ ವೈಷ್ಣವಿ ಮ್ತು ಜಮೈ ಹಿನ್ಸ್ಟಂನ್ ಅವರ ವಿಶ್ಲೇಷಣೆಯನ್ನು ಉಲ್ಲೇಖಿಸಿದ್ದಾರೆ. ಒಂದು ವೇಳೆ 2026ರ ಜನಗಣತಿಯನ್ನು ತೆಗೆದುಕೊಂಡರೆ ಲೋಕಸಭಾ ಕ್ಷೇತ್ರಗಳ ಹಂಚಿಕೆ ಹೇಗೆ ಬದಲಾಗುತ್ತದೆ ಎಂದು ಆ ವಿಶ್ಲೇಷಣೆಯಲ್ಲಿ ವಿವರಿಸಲಾಗಿದೆ.
ಕುಟುಂಬ ಯೋಜನೆಯನ್ನು ಆರಂಭದಲ್ಲೇ ಪರಿಣಾಮಕಾರಿಯಾಗಿ ಜಾರಿಗೆ ತಂದ ರಾಜ್ಯಗಳು ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಲಿವೆ. ರಾಷ್ಟ್ರದ ಉದ್ದೇಶಕ್ಕಾಗಿ ಕುಟುಂಬ ಯೋಜನೆ ಜಾರಿಗೆ ತಂದ ರಾಜ್ಯಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ಜೈರಾಂ ರಮೇಶ್ ಹೇಳಿಕೊಂಡಿದ್ದಾರೆ.ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕಳೆದ ಶನಿವಾರವಷ್ಟೇ ಕೇರಳ, ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ, ಪಂಜಾಬ್, ಒಡಿಶಾದ ಸಿಎಂಗಳು ಮತ್ತು ಪಕ್ಷಗಳ ಮುಖ್ಯಸ್ಥರಿಗೆ ಪತ್ರ ಬರೆದು ಜಂಟಿ ಕ್ರಿಯಾ ಸಮಿತಿ ರಚಿಸಿ ಹೋರಾಟದ ರೂಪುರೇಷೆ ನಿರ್ಧರಿಸಲು ಕೈಜೋಡಿಸುವಂತೆ ಮನವಿ ಮಾಡಿದ್ದರು.