ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂ.4ರಂದು ಸಂಭವಿಸಿದ್ದ ಕಾಲ್ತುಳಿತ ದುರಂತದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಜನದಟ್ಟಣೆ ನಿರ್ವಹಣೆ ಮತ್ತು ನಿಯಂತ್ರಣದ ಸಲುವಾಗಿ ‘ಕರ್ನಾಟಕ ಜನಸಂದಣಿ ನಿಯಂತ್ರಣ (ಸಾಮೂಹಿಕ ಸಭೆಯ ಸ್ಥಳ ಮತ್ತು ಸಮಾವೇಶ ಜಾಗದಲ್ಲಿ ಜನದಟ್ಟಣೆ ನಿಯಂತ್ರಣ) ಮಸೂದೆ-2025’ ಜಾರಿಗೆ ತರುವ ಸಂಬಂಧ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದೆ.
ಮುಂದಿನ ಸಂಪುಟ ಸಭೆಯಲ್ಲಿ ಕರಡು ಮಸೂದೆ ಮಂಡಿಸಿ ಅಂಗೀಕಾರ ಪಡೆದು ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕರಿಸುವ ಕುರಿತು ಚರ್ಚಿಸಿದೆ ಎಂದು ತಿಳಿದುಬಂದಿದೆ.ಕರಡು ವಿಧೇಯಕದಲ್ಲಿನ ಅಂಶಗಳ ಬಗ್ಗೆ ಗುರುವಾರ ಚರ್ಚಿಸಿದ್ದು, ಕಾನೂನು ಉಲ್ಲಂಘನೆ ಮಾಡಿದವರಿಗೆ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ, 5 ಲಕ್ಷ ರು.ವರೆಗೆ ವಿಸ್ತರಿಸಬಹುದಾದ ದಂಡ ವಿಧಿಸುವ ಪ್ರಸ್ತಾವ ಮಾಡಲಾಗಿದೆ.
ಕ್ರೀಡೆ, ಸರ್ಕಸ್ ಇತ್ಯಾದಿ ವಾಣಿಜ್ಯ ಉದ್ದೇಶಿತ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ಅರ್ಜಿ ಸಲ್ಲಿಸದಿದ್ದರೆ, ಜನದಟ್ಟಣೆ ನಿಯಂತ್ರಿಸುವಲ್ಲಿ, ಪರಿಹಾರ ನೀಡುವಲ್ಲಿ ವಿಫಲವಾದರೆ, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಾವು-ನೋವಿಗೆ ಕಾರಣವಾದರೆ, ಕಾಲ್ತುಳಿತ ಸಂಭವಿಸಿದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ.3 ವರ್ಷಗಳವರೆಗೆ ಜೈಲು, 5 ಲಕ್ಷ ರು.ವರೆಗೆ ದಂಡ. ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಅಸಂಘಟಿತವಾಗಿ ಸೇರುವ ಜನದಟ್ಟಣೆ ನಿಯಂತ್ರಿಸಲು ಮಾತ್ರ ಈ ಕಾನೂನು ಪ್ರಯೋಗ ಎಂದು ಸ್ಪಷ್ಟಪಡಿಸಲಾಗಿದೆ.
ಜಾತ್ರೆಗಳಿಗೆ ಅನ್ವಯವಿಲ್ಲ:
ಜಾತ್ರೆ, ರಥೋತ್ಸವ, ಪಲ್ಲಕಿ ಉತ್ಸವ, ತೆಪ್ಪದ ತೇರು, ಉರೂಸ್ಗೆ ಇದು ಅನ್ವಯವಾಗುವುದಿಲ್ಲ. ರಾಜಕೀಯ ರ್ಯಾಲಿ, ಜಾಥಾ, ಸಮಾವೇಶ, ಪ್ರಾಯೋಜಿತ ಕಾರ್ಯಕ್ರಮ, ಸಾಮೂಹಿಕ ಸಭೆಗಳಿಗೆ ಅನ್ವಯವಾಗುತ್ತದೆ ಎಂದು ತಿಳಿದುಬಂದಿದೆ.
ಜನದಟ್ಟಣೆ ನಿಯಂತ್ರಣದ ಮೂಲಕ ಅವಘಡ ತಪ್ಪಿಸುವ ಕುರಿತು ಸಿದ್ಧಪಡಿಸಿರುವ ಕರ್ನಾಟಕ ಜನಸಂದಣಿ ನಿಯಂತ್ರಣ (ಸಾಮೂಹಿಕ ಸಭೆಯ ಸ್ಥಳ ಮತ್ತು ಸಮಾವೇಶ ಜಾಗದಲ್ಲಿ ಜನದಟ್ಟಣೆ ನಿಯಂತ್ರಣ) ಮಸೂದೆ-2025 ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು.
- ಎಚ್.ಕೆ. ಪಾಟೀಲ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು