ಮುಂಬೈ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಲಯಕ್ಕೆ ಮರಳಲು ನೆರವಾಗಿದ್ದ ಗ್ಯಾರಂಟಿ ಯೋಜನೆಗಳು ಮಹಾರಾಷ್ಟ್ರದಲ್ಲಿಯೂ ಕೈ ಹಿಡಿಯಬಹುದು ಎನ್ನುವ ನಿರೀಕ್ಷೆಯಿಂದ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ಘೋಷಿಸಿತ್ತು. ಆದರೆ ಮಹಾರಾಷ್ಟ್ರದ ಮತದಾರರು ಭರಪೂರ ಉಚಿತ ಯೋಜನೆಗಳಿಗೆ ಮಣೆ ಹಾಕಲಿಲ್ಲ.
ಚುನಾವಣೆಗೂ ಮುನ್ನ ಮುಂಬೈನಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು. ಈ ಪ್ರಣಾಳಿಕೆಯಲ್ಲಿ ಕರ್ನಾಟಕದ ಮಾದರಿಯಲ್ಲಿಯೇ ಹಲವು ಉಚಿತ ಯೋಜನೆಗಳನ್ನು ಘೋಷಿಸಲಾಗಿತ್ತು. ಕರ್ನಾಟಕದ ಶಕ್ತಿ ಯೋಜನೆಯಂತೆ ಮಹಿಳೆಯರಿಗ ಉಚಿತ ಬಸ್ ಪ್ರಯಾಣ, ಕರ್ನಾಟಕದಲ್ಲಿರುವ ಗೃಹಲಕ್ಷ್ಮೀ ಯೋಜನೆಯಂತೆ, ಮಹಿಳೆಯರಿಗೆ ಮಾಸಿಕ 3 ಸಾವಿರ ರು. ಸಹಾಯಧನ, ರೈತರಿಗೆ 3 ಲಕ್ಷದವರೆಗೆ ರೈತರ ಸಾಲ ಮನ್ನಾ, ಸಾಲ ಕಟ್ಟಿದರೆ 50 ಸಾವಿರ ರು. ಪ್ರೋತ್ಸಾಹಧನ, ಎಲ್ಲರಿಗೂ 25 ಲಕ್ಷ ರು.ರವರೆಗೆ ಆರೋಗ್ಯ ಮತ್ತು ಉಚಿತ ಔಷಧಿ ವಿತರಣೆ, ನಿರುದ್ಯೋಗಿಗಳಿಗೆ ಸರ್ಕಾರದಿಂದ ಮಾಸಿಕ 4 ಸಾವಿರ ನೀಡುವ ಯೋಜನೆಗಳನ್ನು ಘೋಷಿಸಿತ್ತು.ಈ ಉಚಿತ ಯೋಜನೆಗಳು ಮತದಾರರ ಮನ ಗೆಲ್ಲಲು ಸಾಧ್ಯವಾಗಬಹುದು ಎನ್ನುವ ನಿರೀಕ್ಷೆ ಕಾಂಗ್ರೆಸ್ ನಾಯಕರದ್ದಾಗಿತ್ತು. ಆದರೆ ಮತದಾರರು ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಶಾಕ್ ನೀಡಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್ನ ಇತಿಹಾಸದಲ್ಲಿಯೇ ಅತ್ಯಂತ ಕಳಪೆ ಸ್ಥಾನ ಗೆಲ್ಲುವ ಮೂಲಕ ಮುಜುಗರಕ್ಕೀಡಾಗಿದೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ, ಜಾರ್ಖಂಡಲ್ಲೂ ಕಮ್ಮಿ
ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಕಳಪೆ ಪ್ರದರ್ಶನ ಕಂಡಿದ್ದು, 15 ಸ್ಥಾನ ಮಾತ್ರ ಸಂಪಾದಿಸಿದೆ. ಇದು ರಾಜ್ಯದಲ್ಲಿ ಈವರೆಗೆ ಪಡೆದ ಅತಿ ಕಡಿಮೆ ಸ್ಥಾನವಾಗಿದೆ. 101 ಸ್ಥಾನದಲ್ಲಿ ಪಕ್ಷ ಸ್ಪರ್ಧಿಸಿತ್ತು. ಇನ್ನು ಜಾರ್ಖಂಡಲ್ಲಿ ಜೆಎಂಎಂ-ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೂ ಮತ ಗಳಿಕೆಯಲ್ಲಿ ಕಾಂಗ್ರೆಸ್ ಹಿಂದೆ ಬಿದ್ದಿದೆ. ಜೆಎಂಎಂ ಶೇ.23 ಮತ ಪಡೆದರೆ ಕಾಂಗ್ರೆಸ್ ಶೇ.15 ಮತ ಮಾತ್ರ ಪಡೆದಿದೆ. 17 ಸೀಟಲ್ಲಿ ಪಕ್ಷ ಗೆದ್ದಿದೆ.
ಮಹಾ ಫಲಿತಾಂಶದ ಅಸಲಿ ಕಾರಣ ಅರಿಯಲು ಕಾಂಗ್ರೆಸ್ ಯತ್ನ: ಖರ್ಗೆ
ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಳಗೊಂಡ ಮಹಾ ವಿಕಾಸ್ ಅಘಾಡಿ ಕೂಟ ಪರಾಜಿತವಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಇದು ಅನಿರೀಕ್ಷಿತವಾಗಿದೆ. ಕೂಟದ ಸೋಲಿಗೆ ಅಸಲಿ ಕಾರಣವೇನು ಎಂಬುದನ್ನು ಅರಿಯಲು ಪಕ್ಷ ಪ್ರಯತ್ನಿಸುತ್ತಿದೆ. ಛತ್ರಪತಿ ಶಿವಾಜಿ, ಅಂಬೇಡ್ಕರ್ ಅವರ ನಿಜವಾದ ಪರತಿನಿಧಿಗಳು ನಾವಾಗಿದ್ದು, ಈ ಹೋರಾಟವನ್ನು ಮುಂದುವರೆಸುತ್ತೇವೆ’ ಎಂದರು.ಈ ವೇಳೆ ಜಾರ್ಖಂಡ್ ಜಯದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾ, ‘ಜನ ವಿಭಜಕ, ಸುಳ್ಳು ರಾಜಕೀಯವನ್ನು ತಿರಸ್ಕರಿಸಿ ತಮ್ಮ ಹಕ್ಕುಗಳಿಗೆ ಬೆಲೆ ನೀಡಿದ್ದಾರೆ. ರಾಜ್ಯದಲ್ಲಿ ಜವಾಬ್ದಾರಿಯುತ ಸರ್ಕಾರ ರಚಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಬೇಕಿದೆ’ ಎಂದರು.
ನಿರೀಕ್ಷಿತ ಮಹಾ ಫಲಿತಾಂಶ ಇದು: ರಾಹುಲ್ ಬೇಸರ
ನವದೆಹಲಿ: ‘ಮಹಾರಾಷ್ಟ್ರದ ಚುನಾವಣಾ ಫಲಿತಾಂಶ ಅನಿರೀಕ್ಷಿತವಾಗಿದೆ. ಈ ಬಗ್ಗೆ ಕೂಲಂಕುಶವಾಗಿ ವಿಶ್ಲೇಷಣೆ ನಡೆಸುತ್ತೇವೆ’ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಫತಿತಾಂಶ ಘೋಷಣೆಯ ಬಳಿಕ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಇದರೊಂದಿಗೇ ಜಾರ್ಖಂಡ್ನಲ್ಲಿ ಇಂಡಿಯಾ ಕೂಟ ಜಯಗಳಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ರಾಹುಲ್, ‘ಈ ವಿಜಯವು ಸಂವಿಧಾನದೊಂದಿಗೆ ಜಲ, ಅರಣ್ಯ ಹಾಗೂ ಭೂಮಿಯನ್ನು ರಕ್ಷಿಸಿದುದರ ಜಯವಾಗಿದೆ. ಸಿಎಂ ಹೇಮಂತ್ ಸೊರೇನ್, ಕಾಂಗ್ರೆಸ್ ಹಾಗೂ ಜೆಎಂಎಂನ ಕಾರ್ಯಕರ್ತರಿಗೆ ಅಭಿನಂದನೆ’ ಎಂದರು.ಅತ್ತ ವಯನಾಡು ಉಪಚುನಾವಣೆಯಲ್ಲಿ ವಿಜಯಿಯಾದ ಸಹೋದರಿ ಪ್ರಿಯಾಂಕಾ ಗಾಂಧಿಯನ್ನೂ ಅಭಿನಂದಿಸುತ್ತಾ, ‘ಈ ಕ್ಷೇತ್ರವನ್ನು ಪ್ರಗತಿ ಮತ್ತು ಸಮೃದ್ಧಿಯ ಪಥದ ದಾರಿದೀಪವಾಗಿಸಲು ಧೈರ್ಯ, ಸಹಾನುಭೂತಿ ಹಾಗೂ ಸಂಪೂರ್ಣ ಸಮರ್ಪಣೆಯೊಂದಿಗೆ ಪ್ರಿಯಾಂಕಾ ಮುನ್ನಡೆಸಲಿದ್ದಾರೆ’ ಎಂಬ ಭರವಸೆ ವ್ಯಕ್ತಪಡಿಸಿದರು.