80-90 ಬಾರಿ ಜನರಿಂದ ತಿರಸ್ಕೃತಗೊಂಡವರು ತಮ್ಮ ರಾಜಕೀಯ ಲಾಭಕ್ಕಾಗಿ ಗೂಂಡಾಗಿರಿ : ಮೋದಿ

KannadaprabhaNewsNetwork |  
Published : Nov 26, 2024, 12:49 AM ISTUpdated : Nov 26, 2024, 04:52 AM IST
ಮೋದಿ | Kannada Prabha

ಸಾರಾಂಶ

‘80-90 ಬಾರಿ ಜನರಿಂದ ತಿರಸ್ಕೃತಗೊಂಡವರು ತಮ್ಮ ರಾಜಕೀಯ ಲಾಭಕ್ಕಾಗಿ ಗೂಂಡಾಗಿರಿ ಮಾಡುವ ಮೂಲಕ ಸಂಸತ್ತನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

 ನವದೆಹಲಿ :  ‘80-90 ಬಾರಿ ಜನರಿಂದ ತಿರಸ್ಕೃತಗೊಂಡವರು ತಮ್ಮ ರಾಜಕೀಯ ಲಾಭಕ್ಕಾಗಿ ಗೂಂಡಾಗಿರಿ ಮಾಡುವ ಮೂಲಕ ಸಂಸತ್ತನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭಕ್ಕೂ ಮುನ್ನ ಸುದ್ದಿಗಾರರನ್ನು ಉದ್ದೇಶಿಸಿ ಭಾಷಣ ಮಾಡಿದ ಮೋದಿ, ‘ಇಂತಹ ಬೆರಳೆಣಿಕೆಯಷ್ಟು ಜನರು ತಮ್ಮ ಉದ್ದೇಶಗಳಲ್ಲಿ ಯಶಸ್ವಿಯಾಗಲಿಲ್ಲ ಆದರೆ ದೇಶದ ಜನರು ಅವರ ಕಾರ್ಯಗಳನ್ನು ಗಮನಿಸಿ ಸೂಕ್ತ ಸಮಯದಲ್ಲಿ ಶಿಕ್ಷೆ ನೀಡಿದ್ದಾರೆ’ ಎಂದು ಹೇಳಿದರು. ಈ ಮೂಲಕ ಇತ್ತೀಚಿನ ಮಹಾರಾಷ್ಟ್ರ ಹಾಗೂ ಹರ್ಯಾಣ ಫಲಿತಾಂಶ ಉಲ್ಲೇಖಿಸಿದರು.‘ಸಂಸತ್ತಿನಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು ಆದರೆ, ದುರದೃಷ್ಟವಶಾತ್, ಕೆಲವು ವ್ಯಕ್ತಿಗಳು ಕೋಲಾಹಲ ಎಬ್ಬಿಸಿ ತಮ್ಮ ರಾಜಕೀಯ ಲಾಭಕ್ಕಾಗಿ ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಮೋದಿ ಹೇಳಿದರು.

‘ಅವರ ತಂತ್ರಗಳು ಅಂತಿಮವಾಗಿ ವಿಫಲವಾದರೂ, ಜನರು ಅವರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಮತ್ತು ಸಮಯ ಬಂದಾಗ ನ್ಯಾಯವನ್ನು ನೀಡುತ್ತಾರೆ’ ಎಂದು ಚಾಟಿ ಬೀಸಿದರು.

‘ಸುಗಮ ಕಲಾಪಕ್ಕೆ ಅವಕಾಶ ನೀಡಿ ಎಂದು ಪ್ರತಿಪಕ್ಷದ ಸಹೋದ್ಯೋಗಿಗಳನ್ನು ಪದೇ ಪದೇ ಒತ್ತಾಯಿಸುತ್ತಿದ್ದೇನೆ. ಆದರೆ ಸಾರ್ವಜನಿಕರಿಂದ ನಿರಂತರವಾಗಿ ತಿರಸ್ಕರಿಸಲ್ಪಟ್ಟವರು ತಮ್ಮ ಸಹೋದ್ಯೋಗಿಗಳ ಮಾತುಗಳನ್ನು ನಿರ್ಲಕ್ಷಿಸುತ್ತಾರೆ ಮತ್ತು ಅವರ ಭಾವನೆಗಳನ್ನು ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸುವುದಿಲ್ಲ’ ಎಂದರು,‘ಆದರೆ ಇಂಥ ನಡವಳಿಕೆಗಳು ಹೊಸ ಸಂಸದರ ಹಾಗೂ ಉತ್ತಮ ತಾಜಾ ಐಡಿಯಾಗಳನ್ನು ಹೊರಹಾಕುವ ಸಂಸದರ ಹಕ್ಕುಗಳನ್ನು ಕುಗ್ಗಿಸುತ್ತದೆ ಎಂಬುದು ಅತ್ಯಂತ ಬೇಸರದ ವಿಷಯ.ಇಂಥವರು ಪ್ರಜಾಪ್ರಭುತ್ವದ ತತ್ವಗಳು ಅಥವಾ ಜನರ ಆಶಯಗಳನ್ನು ಗೌರವಿಸುವುದಿಲ್ಲ.’ ಎಂದರು.

ಹೊಸ ಸದಸ್ಯರಿಗೆ ಸದನದಲ್ಲಿ ಮಾತನಾಡುವ ಅವಕಾಶವನ್ನು ಆಗಾಗ್ಗೆ ನಿರಾಕರಿಸಲಾಗುತ್ತದೆ. ಇವರು ಮುಂದಿನ ಪೀಳಿಗೆ ಸಂಸದರು. ಇವರ ಹಕ್ಕು ಮೊಟಕು ಸರಿಯಲ್ಲ. ಇದನ್ನು ಜನ ಗಮನಿಸುತ್ತಾರೆ ಹಾಗೂ ಮತ್ತೆ ಪುನರಾಯ್ಕೆಗೆ ನಿರಾಕರಿಸುತ್ತಾರೆ’ ಎಂದು ಹೇಳಿದರು.

ಮೊದಲ ದಿನವೇ ಅದಾನಿ ಕಾವು: ಕಲಾಪ ಸ್ವಾಹಾ

ನವದೆಹಲಿ : ಸಂಸತ್‌ ಚಳಿಗಾಲ ಅಧಿವೇಶನದ ಮೊದಲ ದಿನವೇ ಕೋಲಾಹಲ ಸೃಷ್ಟಿಯಾಗಿದ್ದು, ಅದಾನಿ ಸೌರ ವಿದ್ಯುತ್‌ ಹಗರಣ ವಿಷಯವು ಕಲಾಪ ಬಲಿಪಡೆದಿದೆ. ಅದಾನಿ ಬಗ್ಗೆ ಚರ್ಚೆ ನಡೆಯಲಿ ಎಂಬ ವಿಪಕ್ಷಗಳ ಆಗ್ರಹಕ್ಕೆ ಮನ್ನಣೆ ಸಿಗದ ಕಾರಣ ಕೋಲಾಹಲ ಸೃಷ್ಟಿಯಾಗಿ ದಿನದ ಮಟ್ಟಿಗೆ ಸದನ ಮುಂದೂಡಲಾಯಿತು.ಬೆಳಗ್ಗೆ ರಾಜ್ಯಸಭೆ ಸಮಾವೇಶಗೊಂಡ ಬಳಿಕ ರೂಲ್‌ 267ರ ಪ್ರಕಾರ ಎಲ್ಲ ವಿಷಯ ಬದಿಗೊತ್ತಿ, ‘ಉದ್ಯಮಿ ಗೌತಮ್‌ ಅದಾನಿ ಭಾರತದಲ್ಲಿ ತಾವು ಉತ್ಪಾದಿಸಿದ ಸೌರ ವಿದ್ಯುತ್‌ ಖರೀದಿಸಬೇಕು ಎಂದು ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಅಮೆರಿಕದಲ್ಲಿ ದೋಷಾರೋಪ ದಾಖಲಾಗಿದೆ. ಇಂಥ ಅದಾನಿಗೆ ಪ್ರಧಾನಿ ನರೇಂದ್ರ ಮೋದಿ ಶ್ರೀರಕ್ಷೆ ನೀಡುತ್ತಿದ್ದಾರೆ. ಈ ಬಗ್ಗೆ ಚರ್ಚೆ ಆಗಲಿ ಎಂದು ಆಗ್ರಹಿಸಿದರು. ಆದರೆ ಸಭಾಧ್ಯಕ್ಷರು ಇದಕ್ಕೆ ಒಪ್ಪದ ಕಾರಣ 2 ಅವಧಿಗೆ ಕಲಾಪ ಮುಂದೂಡಿಕೆ ಆಗಿ ದಿನದ ಕೊನೆಗೆ ದಿನದ ಮಟ್ಟಿಗೆ ಸದನ ಮುಂದೂಡಿದರು.

ಲೋಕಸಭೆಯಲ್ಲೂ ಇದೇ ಪುನರಾವರ್ತನೆ ಆಯಿತು. ಇದರ ಜತೆಗೆ ಸಂಭಲ್‌ ಕೋಮುಗಲಭೆ ಬಗ್ಗೆಯೂ ಚರ್ಚೆಗೆ ಆಗ್ರಹಿಸಿದ ಸದಸ್ಯರು ಘೋಷಣೆ ಕೂಗಿದರು. ಹೀಗಾಗಿ ಕಲಾಪ ಮುಂದೂಡಲಾಯಿತು,ಇನ್ನು ನಾಳೆಯೇ ಕಲಾಪ:

ಮಂಗಳವಾರ ಸಂವಿಧಾನ ಸ್ವೀಕೃತಿ ದಿನದ ಕಾರಣ ಸಂವಿಧಾನ ದಿನಾಚರಣೆ ಸಂಸತ್ತಿನಲ್ಲಿ ನಡೆಯಲಿದೆ. ಹೀಗಾಗಿ ನಿಯಮಿತ ಕಲಾಪಗಳು ಇನ್ನು ಬುಧವಾರ ನಡೆಯಲಿವೆ.

ಇಂದು 75ನೇ ಸಂವಿಧಾನ ದಿನದ ಸಂಭ್ರಮ

ನವದೆಹಲಿ: 75ನೇ ಸಂವಿಧಾನ ದಿನದ ಪ್ರಯುಕ್ತ ದೆಹಲಿಯ ಸಂವಿಧಾನ ಸದನದ (ಹಳೆಯ ಸಂಸತ್‌ ಭವನ) ಸೆಂಟ್ರಲ್‌ ಹಾಲ್‌ನಲ್ಲಿ ಮಂಗಳವಾರ ಸಂವಿಧಾನ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಕಾರ್ಯಕ್ರಮದಲ್ಲಿ ಭಾಗಯಾಗಲಿದ್ದಾರೆ.ಸಂವಿಧಾನ ದಿನದ ಸ್ಮರಣಾರ್ಥ ವಿಶೇಷ ನಾಣ್ಯ, ಸ್ಟ್ಯಾಂಪ್‌, ಸಂಸ್ಕೃತ ಹಾಗೂ ಮೈಥಿಲಿ ಭಾಷೆಗಳ ಸಂವಿಧಾನವನ್ನು ಬಿಡುಗಡೆಗೊಳಿಸಲಾಗುವುದು. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳೊಂದಿಗೆ ಎಲ್ಲಾ ಭಾರತೀಯರು ಸಂವಿಧಾನದ ಪೀಠಿಕೆಯನ್ನು ಓದಲಿದ್ದು, ಇದಕ್ಕಾಗಿ ಎಲ್ಲಾ ಪಂಚಾಯಿತಿಗಳು, ಅಮೃತ ಸರೋವರಗಳಲ್ಲಿ ಸಾಮೂಹಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತದ ಸಂವಿಧಾನ ಸಭೆಯು 1949ರ ನ.26ರಂದು ಸಂವಿಧಾನವನ್ನು ಅಂಗೀಕರಿಸಿದ ನೆನಪಾರ್ಥ ಪ್ರತೀ ವರ್ಷ ಈ ದಿನವನ್ನು ‘ಸಂವಿದಾನ ದಿನ’ವನ್ನಾಗಿ ಆಚರಿಸಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ
ಭೀಕರ ಬಿರುಗಾಳಿ : ಬ್ರೆಜಿಲ್‌ನ ಸ್ಟ್ಯಾಚು ಆಫ್‌ ಲಿಬರ್ಟಿ ಧರೆಗೆ