ಮುಂಬೈ: ತನ್ನ ಯೋಗ್ಯತೆಗೂ ಮೀರಿದ ಸೌಲಭ್ಯಗಳಿಗೆ ಬೇಡಿಕೆಯಿಟ್ಟು ಹಾಗೂ ನಕಲಿ ದಾಖಲೆ ನೀಡಿ ನೇಮಕಗೊಂಡು ಸುದ್ದಿಯಾಗಿರುವ ಟ್ರೈನೀ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಎಸಗಿದ್ದಾರೆ ಎನ್ನಲಾದ ಅಕ್ರಮಗಳು ಸಾಬೀತಾದರೆ ಸೇವೆಯಿಂದ ವಜಾ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
ಪೂಜಾ ವಿರುದ್ಧ ಈಗ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮನೋಜ್ ದ್ವಿವೇದಿ ತನಿಖೆ ಆರಂಭಿಸಿದ್ದಾರೆ. ಅವರು ದೋಷಿಯೆಂದು ಸಾಬೀತಾದಲ್ಲಿ ಪೂಜಾ ಸೇವೆಯಿಂದ ವಜಾ ಗೊಳ್ಳುವ ಸಾಧ್ಯತೆ ಇದೆ. ಸತ್ಯಸಂಗತಿಯನ್ನು ಮುಚ್ಚಿಟ್ಟು ನೇಮಕವಾದ ಆರೋಪ ನಿಜವಾದರೆ ಆಕೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದ ಅವು ಹೇಳಿವೆ.
ಅಕ್ರಮ ಆರೋಪದ ಬೆನ್ನಲ್ಲೇ ಇತ್ತೀಚೆಗೆ ಪೂಜಾಳನ್ನು ಪುಣೆಯಿಂದ ವಾಶಿಮ್ಗೆ ಎತ್ತಂಗಡಿ ಮಾಡಲಾಗಿತ್ತು.
ಪೂಜಾ ಆಡಿ ಕಾರಿನ ಮೇಲೆ 21 ಟ್ರಾಫಿಕ್ ಉಲ್ಲಂಘನೆ ಕೇಸು, 27 ಸಾವಿರ ರು. ದಂಡ!
ಪುಣೆ: ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಸಂಬಂಧಪಟ್ಟಂತೆ ಟ್ರೈನೀ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಐಷಾರಾಮಿ ‘ಆಡಿ’ ವಿರುದ್ಧ ಈವರೆಗೆ 21 ದೂರುಗಳು ದಾಖಲಾಗಿದ್ದು, ರು.27,000 ದಂಡ ವಿಧಿಸಲಾಗಿದೆ.ಅಜಾಗರೂಕ ಚಾಲನೆ ಮತ್ತು ಸಂಚಾರ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಜಾರಿ ಮಾಡಲಾದ ನೋಟಿಸಿನಲ್ಲಿ, ‘ಖಾಸಗಿ ಕಾರಿಗೆ ಬೀಕನ್ ಲೈಟ್ ಅಳವಡಿಸಿಕೊಂಡು ಮಹಾರಾಷ್ಟ್ರ ಸರ್ಕಾರ ಎಂದು ಬರೆದುಕೊಂಡಿರುವುದ ತಿಳಿದುಬಂದಿದೆ’ ಎಂದು ಉಲ್ಲೇಖಿಸಲಾಗಿದ್ದು, ಅದನ್ನು ಪುಣೆಯಲ್ಲಿರುವ ಆಕೆಯ ನಿವಾಸಕ್ಕೆ ತಲುಪಿಸಲು ಹೋದಾಗ ಅಲ್ಲಿ ಯಾರು ಇರಲಿಲ್ಲ ಎಂದು ತಿಳಿದುಬಂದಿದೆ.
ಈ ಹಿಂದೆಯೇ ಆಕೆಯ ವಿರುದ್ಧ ಹಲವಾರು ದೂರುಗಳು ದಾಖಲಾಗಿದ್ದರೂ ಪುಣೆ ಪೊಲೀಸರು ಏಕೆ ಕ್ರಮ ಕೈಗೊಂಡಿರಲಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ರೈತರನ್ನು ಪಿಸ್ತೂಲು ಹಿಡಿದು ಬೆದರಿಸಿದ್ದ ಪೂಜಾ ತಾಯಿ: ಹಳೇ ವಿಡಿಯೋ ವೈರಲ್
ಪುಣೆ: ವಿವಾದದ ಸುಳಿಯಲ್ಲಿ ಸಿಲುಕಿರುವ ಟ್ರೈನೀ ಐಎಎಸ್ ಪೂಜಾ ಖೇ ಡ್ಕರ್ ತಾಯಿ ಪಿಸ್ತೂಲು ಹಿಡಿದು ರೈತರನ್ನು ಬೆದರಿಸುತ್ತಿರುವ ಹಳೆಯ ವಿಡಿಯೋ ವೈರಲ್ ಆಗಿದೆ.ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದ ಪೂಜಾ ತಂದೆ ದಿಲೀಪ್ ಅನೇಕ ಕಡೆಗಳಲ್ಲಿ ಆಸ್ತಿ ಹೊಂದಿದ್ದು, ರೈತರೊಬ್ಬರ ಜಮೀನನ್ನು ಆಕ್ರಮಿಸಲು ಪ್ರಯತ್ನಿಸಿದ್ದರು. ಆಗ ಕೈಯ್ಯಲ್ಲಿ ಪಿಸ್ತೂಲು ಹಿಡಿದಿರುವ ಪೂಜಾ ತಾಯಿ ಮನೋರಮಾ ಖೇಡ್ಕರ್ ‘ಭೂಮಿ ದಾಖಲೆಗಳಲ್ಲಿ ನನ್ನ ಹೆಸರಿದೆ’ ಎನ್ನುತ್ತ ರೈತನೊಬ್ಬನನ್ನು ಬೆದರಿಸುವುದು ಕಂಡುಬಂದಿದೆ ಹಾಗೂ ಕ್ಯಾಮರಾ ಕಂಡೊಡನೆ ಅದನ್ನು ಮರೆಮಾಚಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಪ್ರಯತ್ನಿಸಿದ ರೈತನನ್ನು ತಡೆಯಲಾಗಿತ್ತು ಎನ್ನಲಾಗಿದೆ.