ನವದೆಹಲಿ: ಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಸುಲಭ್ ಶೌಚಾಲಯ ಅಭಿಯಾನದ ರೂವಾರಿ ಬಿಂದೇಶ್ವರ್ ಪಾಠಕ್, ನಟ ಮಿಥುನ್ ಚಕ್ರವರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ 106 ಮಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಪದ್ಮ ಪ್ರಶಸ್ತಿ ನೀಡಿ ಪುರಸ್ಕರಿಸಿದರು.
ಬಿಂದೇಶ್ವರ್ ಪಾಠಕ್ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಮತ್ತು ಪ್ರಖ್ಯಾತ ಭರತನಾಟ್ಯ ಕಲಾವಿದೆ ಪದ್ಮ ಸುಬ್ರಹ್ಮಣ್ಯಮ್ ಅವರಿಗೆ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು.
ನಟ ಮಿಥುನ್ ಚಕ್ರವರ್ತಿ, ಗಾಯಕಿ ಉಷಾ ಉತ್ತುಪ್, ಉತ್ತರಪ್ರದೇಶದ ಮಾಜಿ ರಾಜ್ಯಪಾಲರಾದ ರಾಮ್ ನಾಯಕ್ ಹಾಗೂ ಖ್ಯಾತ ಉದ್ಯಮಿ ಸೀತಾರಾಂ ಜಿಂದಾಲ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕದ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ, ಉದ್ಯಮಿ ಹಾಗೂ ಸಮಾಜ ಸೇವಕಿ ಕಿರಣ್ ನಾಡಾರ್ ಸೇರಿ ಹಲವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗಣರಾಜ್ಯೋತ್ಸವದ ಮುನ್ನಾದಿನ 6 ಜೋಡಿಗಳೂ ಸೇರಿದಂತೆ 132 ಮಂದಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಅದರ ಪೈಕಿ ಸೋಮವಾರ 106 ಮಂದಿಗೆ ಪ್ರಶಸ್ತಿ ನೀಡಲಾಗಿದ್ದು, ಉಳಿದವರಿಗೆ ಮುಂದಿನ ವಾರದಲ್ಲಿ ಪ್ರಶಸ್ತಿ ನೀಡುವುದಾಗಿ ರಾಷ್ಟ್ರಪತಿ ಭವನ ಪ್ರಕಟಿಸಿದೆ.
ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಉಪಸ್ಥಿತರಿದ್ದರು. ನೃತ್ಯ ಮಾಡುತ್ತಲೇ ಪ್ರಶಸ್ತಿ ಸ್ವೀಕರಿಸಿದ ದ್ರೋಣಾ
ಅಸ್ಸಾಂ ಮೂಲದ ಜಾನಪದ ಕಲಾವಿದೆ ದ್ರೋಣಾ ಭುಯ್ಯಾನ್ ತಾವು ಸಾಧನೆ ಮಾಡಿರುವ ದೇವಭಾನಿ ನೃತ್ಯ ಮಾಡುತ್ತಲೇ ಕೆಂಪು ಹಾಸಿನ ಮೇಲೆ ನಡೆದು ಬಂದು ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.