ಖ್ಯಾತ ಹಿಂದಿ, ಮರಾಠಿ ನಟಿ ಸಂಧ್ಯಾ ಶಾಂತಾರಾಂ ನಿಧನ

KannadaprabhaNewsNetwork |  
Published : Oct 05, 2025, 01:00 AM IST
ಸಂಧ್ಯಾ | Kannada Prabha

ಸಾರಾಂಶ

ಖ್ಯಾತ ಚಿತ್ರ ನಿರ್ಮಾಪಕ ವಿ. ಶಾಂತಾರಾಂ ಅವರ ಪತ್ನಿ, ಹಿರಿಯ ನಟಿ ಸಂಧ್ಯಾ ಶಾಂತಾರಾಂ (94) ವಯೋಸಹಜ ಕಾರಣಗಳಿಂದ ಶುಕ್ರವಾರ ನಿಧನರಾದರು. ಕಳೆದ ನಾಲ್ಕೈದು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಇತ್ತೀಚೆಗೆ ಜ್ವರದಿಂದ ಬಳಲುತ್ತಿದ್ದರು

ಮುಂಬೈ: ಖ್ಯಾತ ಚಿತ್ರ ನಿರ್ಮಾಪಕ ವಿ. ಶಾಂತಾರಾಂ ಅವರ ಪತ್ನಿ, ಹಿರಿಯ ನಟಿ ಸಂಧ್ಯಾ ಶಾಂತಾರಾಂ (94) ವಯೋಸಹಜ ಕಾರಣಗಳಿಂದ ಶುಕ್ರವಾರ ನಿಧನರಾದರು.ಕಳೆದ ನಾಲ್ಕೈದು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಇತ್ತೀಚೆಗೆ ಜ್ವರದಿಂದ ಬಳಲುತ್ತಿದ್ದರು. ಶುಕ್ರವಾರ ರಾತ್ರಿ 10ಕ್ಕೆ ತಮ್ಮ ರಾಜಕಮಲ್‌ ಸ್ಟುಡಿಯೋದಲ್ಲಿ ಕೊನೆಯುಸಿರೆಳೆದರು.1950-60ರ ದಶಕದಲ್ಲಿ ಅಪಾರ ಪ್ರಸಿದ್ಧಿ ಪಡೆದಿದ್ದ ಶಾಂತಾ, ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ದೋ ಆಂಖೇ ಬಾರಾ ಹಾತ್ (1957), ನವರಂಗ್ (1959), ಝನಕ್ ಝನಕ್ ಪಾಯಲ್ ಬಜೆ (1955), ಪಿಂಜ್ರಾ (1972) ಮೊದಲಾದ ಚಿತ್ರಗಳ ಮೂಲಕ ಪ್ರೇಕ್ಷಕರ ಮನೆಮಾತಾಗಿದ್ದರು.

‘ಐ ಲವ್‌ ಮೊಹಮ್ಮದ್‌’ ಪೋಸ್ಟರ್‌ ಹಾಕಿದ 5 ಮಂದಿ ಬಂಧನ

ಮೇರಠ್‌ (ಉ.ಪ್ರ.): ಮೇರಠ್‌ ಬಳಿಯ ರ್ವಾನಾ ಎಂಬಲ್ಲಿ ‘ಐ ಲವ್‌ ಮೊಹಮ್ಮದ್’ ಪೋಸ್ಟರ್‌ ಅಂಟಿಸಿದ ಸಂಬಂಧ 5 ಮಂದಿನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.ಶುಕ್ರವಾರ ಪೋಸ್ಟರ್ ಹಾಕಲಾಗಿತ್ತು. ಶನಿವಾರ ಬೆಳಿಗ್ಗೆ ಇದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟಿಸಿದರು. ಈ ಸಂಬಂಧ ಇದ್ರಿಶ್, ತಸ್ಲೀಮ್, ರಿಹಾನ್, ಗಲ್ಫಾಮ್ ಮತ್ತು ಹರೂನ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ವಿವಾದ ಉಂಟಾಗುತ್ತಿದ್ದಂತೆ ಪೋಸ್ಟರ್‌ ತೆರವು ಮಾಡಲಾಗಿದೆ.

ವಿಪಕ್ಷ ನಾಯಕರಿಗೆ ತಡೆ:ಈ ನಡುವೆ, ‘ಐ ಲವ್‌ ಮೊಹಮ್ಮದ್’ ಅಭಿಯಾನದ ಮೂಲ ಸ್ಥಳವಾದ ಬರೇಲಿಗೆ ಹೊರಟ ಎಸ್‌ಪಿ ಹಾಗೂ ವಿಪಕ್ಷ ನಾಯಕರನ್ನು ಶನಿವಾರ ಲಖನೌನಲ್ಲೇ ತಡೆಯಲಾಗಿದೆ.

ಅಭಿಯಾನ ನಡೆಸಿದವನ ಕಲ್ಯಾಣ ಮಂಟಪ ಧ್ವಂಸ:ಬರೇಲಿಯಲ್ಲಿ ಐ ಲವ್‌ ಮೊಹಮ್ಮದ್ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಡಾ। ನಫೀಸ್‌ ಎಂಬಾತನ ‘ರಾಜಾ ಪ್ಯಾಲೇಸ್’ ಹೆಸರಿನ ಕಲ್ಯಾಣ ಮಂಟಪವನ್ನು ಅಕ್ರಮ ನಿರ್ಮಾಣದ ಕಾರಣ ನೀಡಿ ಶನಿವಾರ ಬುಲ್ಡೋಜರ್ ಹಚ್ಚಿ ಧ್ವಂಸ ಮಾಡಲಾಗಿದೆ

ಗಾಯಕ ಗರ್ಗ್‌ಗೆ ಆಪ್ತರಿಂದಲೇ ವಿಷಪ್ರಾಶನ: ಸಹೋದ್ಯೋಗಿ ಆರೋಪ

ಗುವಾಹಟಿ: ಸಿಂಗಾಪುರದಲ್ಲಿ ಅಸ್ಸಾಂನ ಖ್ಯಾತ ಗಾಯಕ ಜುಬೀನ್‌ ಗರ್ಗ್ ಅವರ ಅನುಮಾನಾಸ್ಪದ ಸಾವಿನ ಕುರಿತ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಆಘಾತಕಾರಿ ಆರೋಪವೊಂದು ಹೊರಬಿದ್ದಿದೆ. ಜುಬೀನ್‌ಗೆ ಆತನ ಜತೆಗಿದ್ದವರೇ ವಿಷಪ್ರಾಶನ ಮಾಡಿದ್ದಾರೆಂದು ಅವರ ಬ್ಯಾಂಡ್‌ ಮೇಟ್‌ ಶೇಖರ್‌ಜ್ಯೋತಿ ಗೋಸ್ವಾಮಿ ಆರೋಪಿಸಿದ್ದಾರೆ.

ಜುಬೀನ್‌ನ ದೀರ್ಘಕಾಲದ ಮ್ಯಾನೇಜರ್‌ ಸಿದ್ದಾರ್ಥ್‌ ಶರ್ಮಾ ಮತ್ತು ಜುಬೀನ್‌ ಪಾಲ್ಗೊಳ್ಳಬೇಕಿದ್ದ ಉತ್ಸವದ ಆಯೋಜಕ ಶ್ಯಾಮ್‌ಕಾನು ಮಹಾಂತ ಸಿಂಗಾಪುರದಲ್ಲಿ ವಿಷಪ್ರಾಶನ ಮಾಡಿರಬಹುದು ಎಂದು ಗೋಸ್ವಾಮಿ ತನಿಖಾಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ.ಇದನ್ನು ಆಧರಿಸಿ ಅ.1ರಂದು ಸಿದ್ದಾರ್ಥ್‌ ಶರ್ಮಾರನ್ನು ಎಸ್‌ಐಟಿ ತಂಡ ಬಂಧಿಸಿದೆ. ಘಟನೆಗೆ ಪ್ರತ್ಯಕ್ಷ ಸಾಕ್ಷಿಯೂ ಆಗಿರುವ ಗೋಸ್ವಾಮಿ ಎಸ್‌ಐಟಿಗೆ ನೀಡಿರುವ ಹೇಳಿಕೆಯ ವಿವರ ಇದೀಗ ಮಾಧ್ಯಮಗಳಿಗೆ ಬಯಲಾಗಿದೆ.

ದಾಳಿ ನಿಲ್ಲಿಸಲು ಟ್ರಂಪ್‌ ಸೂಚಿಸಿದ್ದರೂ ಗಾಜಾದಲ್ಲಿ ಇಸ್ರೇಲ್ ದಾಳಿ: 6 ಬಲಿ

ಗಾಜಾ ಸಿಟಿ: ಗಾಜಾ ಶಾಂತಿ ಯೋಜನೆಯ ಕೆಲವು ಅಂಶಗಳಿಗೆ ಹಮಾಸ್‌ ಉಗ್ರರು ಒಪ್ಪಿಗೆ ನೀಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಾಳಿ ನಿಲ್ಲಿಸುವಂತೆ ಇಸ್ರೇಲ್‌ಗೆ ಕರೆ ನೀಡಿದ್ದರು. ಇದರ ಹೊರತಾಗ್ಯೂ ಇಸ್ರೇಲಿ ಪಡೆಗಳು ಶನಿವಾರ ಗಾಜಾ ಪಟ್ಟಿಯಲ್ಲಿ ಗುಂಡಿನ ದಾಳಿ ನಡೆಸಿದ್ದು, 6 ಜನ ಸಾವಿಗೀಡಾಗಿದ್ದಾರೆ.‘ಗಾಜಾ ನಗರದ ಮನೆಯೊಂದರಲ್ಲಿ ಇಸ್ರೇಲಿ ಪಡೆಗಳು ಹಾರಿಸಿದ ಗುಂಡಿಗೆ ನಾಲ್ವರು ಸಾವನ್ನಪ್ಪಿದರೆ, ದಕ್ಷಿಣದ ಖಾನ್ ಯೂನಿಸ್‌ನಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ’ ಎಂದು ಗಾಜಾ ವೈದ್ಯಕೀಯ ಕಾರ್ಯಕರ್ತರು ಮತ್ತು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಜಪಾನ್‌ಗೆ ಸನೈ ಟಕಾಯ್ಚಿ ಮೊದಲ ಮಹಿಳಾ ಪ್ರಧಾನಿ?

ಟೋಕಿಯೋ: ಜಪಾನ್‌ನ ಆಡಳಿತ ಪಕ್ಷವು ದೇಶದ ಮಾಜಿ ಆರ್ಥಿಕ ಭದ್ರತಾ ಸಚಿವೆ ಸನೈ ಟಕಾಯ್ಚಿ ಅವನ್ನು ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಿದೆ. ಹೀಗಾಗಿ ಅವರು ಶೀಘ್ರ ಪ್ರಧಾನಿ ಪಟ್ಟಕ್ಕೆ ಏರುವ ಸಾಧ್ಯತೆ ಇದ್ದು, ದೇಶದ ಮೊದಲ ಮಹಿಳಾ ಪ್ರಧಾನಿ ಎನ್ನಿಸಿಕೊಳ್ಳಲಿದ್ದಾರೆ.ಟಕಾಯ್ಚಿ ಅವರು ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ನಾಯಕಿಯಾಗಿದ್ದು, ಬಲಪಂಥೀಯ ಸಿದ್ಧಾಂತದವರಾಗಿದ್ದಾರೆ. ಜೊತೆಗೆ ಚೀನಾ ವಿರುದ್ಧ ನಿಲುವು ಹೊಂದಿದ್ದಾರೆ. ಪಕ್ಷದ ಆಂತರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಜುನಿಚಿರೋ ಕೋಯ್ಝುಮಿ ಅವರ ಪುತ್ರ ಕೃಷಿ ಸಚಿವ ಶಿಂಜಿರೋ ಕೋಯ್ಝುಮಿ ಅವರನ್ನು ಸೋಲಿಸಿ ಟಕಾಯ್ಚಿ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಪುರುಷ ಪ್ರಧಾನ ದೇಶದ ಮೊದಲ ಮಹಿಳಾ ಪ್ರಧಾನಿಯಾಗುವ ಸಾಧ್ಯತೆಯಿದೆ.

ಇತ್ತೀಚೆಗೆ ಇಶಿಬಾ ರಾಜೀನಾಮೆಯಿಂದ ಪ್ರಧಾನಿ ಹುದ್ದೆ ತೆರವಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ