ನವದೆಹಲಿ: ಮಹಿಳಾ ಮೀಸಲು ಮಸೂದೆಯ ಸೋಲನ್ನು ಬಿಜೆಪಿ ಹಾಗೂ ಪ್ರತಿಪಕ್ಷಗಳು ಮುಂಬರುವ 2 ವಿಧಾನಸಭೆ ಚುನಾವಣೆಗಳಲ್ಲಿ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.
‘ಸಂಸತ್ತಿನಲ್ಲಿ 3ನೇ 2ರಷ್ಟುಬೆಂಬಲ ಇಲ್ಲದ ಕಾರಣ ಬಿಜೆಪಿಗೆ ಈ ಮಸೂದೆ ಜಾರಿಯ ಬಗ್ಗೆ ಅನುಮಾನ ಇತ್ತು. ಆದರೂ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಈ ಮಸೂದೆಯನ್ನು ಮುಂದುವರಿಸಿತು. ಈ ಸೋಲನ್ನು ರಾಜಕೀಯ ಲಾಭಕ್ಕೆ ಬಿಜೆಪಿ ಬಳಸಿಕೊಳ್ಳುವ ಸಾಧ್ಯತೆಯಿದೆ’ ಎಂಬ ರಾಜಕೀಯ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಇನ್ನು ಪ್ರತಿಪಕ್ಷಗಳು ಕೂಡ, ‘ಮಹಿಳಾ ಮೀಸಲು ನೆಪದಲ್ಲಿ ಅವೈಜ್ಞಾನಿಕವಾಗಿ ಕ್ಷೇತ್ರ ಮರುವಿಂಗಡಣೆ ಮಾಡಲು ಕೇಂದ್ರ ಹೊರಟಿತ್ತು. ಅದನ್ನು ನಾವು ತಡೆದಿದ್ದೇವೆ’ ಎಂದು ಮತದಾರರ ಮುಂದೆ ಪ್ರಮುಖವಾಗಿ ಬಿಂಬಿಸಲು ಯತ್ನಿಸಬಹುದು ಎಂದೂ ಮೂಲಗಳು ಹೇಳಿವೆ.
ಇದೇ ಏ.23ಕ್ಕೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ. ಇದೇ ವೇಳೆ ಸರ್ಕಾರದ ಮಹತ್ವದ ನಿರ್ಣಯಕ್ಕೆ ಸೋಲಾಗಿರುವುದರಿಂದ ಈ ವಿಷಯ ಪ್ರಮುಖ ಪಾತ್ರ ವಹಿಸಿದೆ. ಡಿಎಂಕೆ, ಟಿಎಂಸಿ ಹಾಗೂ ಕಾಂಗ್ರೆಸ್ಗಳು ಬಿಜೆಪಿ ವಿರುದ್ಧ ಮುಗಿಬಿದ್ದು, ತಮಗೆ ಜಯ ಸಂದಿದೆ ಎಂದು ಹೇಳಲಿವೆ. ಇನ್ನು ಬಿಜೆಪಿ, ‘ವಿಪಕ್ಷಗಳು ಮಹಿಳಾ ವಿರೋಧಿ’ ಎಂದು ಪ್ರಚಾರ ಮಾಡುವುದು ಪಕ್ಕಾ ಎನ್ನಲಾಗಿದೆ.