ಕನ್ನಡಪ್ರಭ ವಾರ್ತೆ ಕೋಲಾರನಮ್ಮ ಚುನಾವಣಾ ವ್ಯವಸ್ಥೆ ಬದಲಾಗುವವರೆಗೂ ಭ್ರಷ್ಟಾಚಾರ ನಿಲ್ಲದು, ಒತ್ತಡಗಳ ನಡುವೆ ಕೆಲಸ ಮಾಡುವ ನೌಕರರನ್ನು ಮಾತ್ರ ದೂರುವುದು ಸರಿಯಲ್ಲ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟರು.ನಗರದಲ್ಲಿ ಶಿಕ್ಷಕ ಗೆಳೆಯರ ಬಳಗ ಏರ್ಪಡಿಸಿದ್ದ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ನೌಕರ ಪುರುಷೋತ್ತಮ್ ದಂಪತಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸಂವಿಧಾನವೇ ಶ್ರೇಷ್ಠ:
ಹಕ್ಕುಗಳನ್ನು ಪ್ರತಿಪಾದಿಸುವಾಗ ಜವಾಬ್ದಾರಿಗಳನ್ನು ಅರಿಯಬೇಕು, ನೌಕರರಿಗೆ ಒತ್ತಡಗಳಿರುವಂತೆ ಅಪೇಕ್ಷೆಗಳು ಇರುತ್ತವೆ. ಒಟ್ಟಾರೆ ಸಂವಿಧಾನವೇ ಶ್ರೇಷ್ಠ ಅದರಡಿಯಲ್ಲೇ ಎಲ್ಲರೂ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದ ಅವರು, ಜನಪರ ಸಂವಿಧಾನ ದೇಶದಲ್ಲಿ ಇರುವುದರಿಂದಲೇ ಅವ್ಯವಸ್ಥೆ,ಜಾತಿಯತೆ, ಭ್ರಷ್ಟಾಚಾರದ ನಡುವೆಯೂ ಒಂದಷ್ಟು ಅಭಿವೃದ್ದಿ ಕಾಣಲು ಸಾಧ್ಯವಾಗಿದೆ ಎಂದರು.ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಹಾಗೂ ಮಾಧ್ಯಮ ತೆರೆದ ಮನಸ್ಸಿನಿಂದ ಇರಬೇಕು, ಜನರಿಗೆ ಈಗಾಗಲೇ ರಾಜಕಾರಣದಲ್ಲಿರುವವರು ಮತ್ತು ನೌಕರರ ಮೇಲೆ ಸಿಟ್ಟಿದೆ, ಅದು ಸರಿಹೋಗಲು ಬದ್ದತೆಯ ಕರ್ತವ್ಯ ನಿರ್ವಹಣೆ ಮಾಡಬೇಕು ಹಾಗೂ ನೌಕರರ ಸಂವಿಧಾನಬದ್ದ ಕರ್ತವ್ಯದಲ್ಲಿ ರಾಜಕಾರಣಿಗಳು ಮೂಗು ತೂರಿಸಬಾರದು ಎಂದರು.ಪಾಲ್ಗೊಳ್ಳುವುದು ಕಡ್ಡಾಯವಾಗಬೇಕಿತ್ತುಸಾಮಾಜಿಕ ಸಮೀಕ್ಷೆಗೆ ಎಲ್ಲರೂ ಪಾಲ್ಗೊಳ್ಳು ಹೈಕೋರ್ಟ್ ಸೂಚಿಸಬೇಕಾಗಿತ್ತು, ಸಮೀಕ್ಷೆ ನಡೆಯದೇ ಸಂವಿಧಾನದ ಆಶಯಗಳಂತೆ ಸೌಲಭ್ಯಗಳು ಹಂಚಿಕೆಯಾಗುವುದು ಹೇಗೆ ಎಂದು ಪ್ರಶ್ನಿಸಿದರು. ಪುರುಷೋತ್ತಮ್ ಅವರ ಸಾಮಾಜಿಕ ಸೇವೆಗಳನ್ನು ಪ್ರಸ್ತಾಪಿಸಿ, ಅಂತಹವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗಲಿ, ಇತರ ನೌಕರರಿಗೆ ಅವರ ಮಾರ್ಗದರ್ಶನ ಸಿಗಲಿ ಎಂದು ಆಶಿಸಿದರು.
ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಮಾತನಾಡಿ, ನಿಸ್ವಾರ್ಥ ವ್ಯಕ್ತಿತ್ವ, ನಗುಮುಖದ ಪುರುಷೋತ್ತಮ್ ಅವರ ಸಾಮಾಜಿಕ ಕಾಳಜಿ ಶ್ಲಾಘನೀಯ, ಬಯಲು ಗ್ರಂಥಾಲಯಕ್ಕೆ ಪುಸ್ತಕ ಕೊಡಿಸುವುದಾಗಿ ತಿಳಿಸಿದ ಅವರು, ಅಗ್ನಿಪಥ್ಗೆ ಉಚಿತ ತರಬೇತಿ ನೀಡಿ ನೂರಾರು ಯುವಕರು ಬದುಕು ಕಟ್ಟಿಕೊಳ್ಳಲು ಸಹಕರಿಸಿದ್ದಾರೆ ಎಂದು ಅಭಿನಂದಿಸಿದರು.ಶೇ.70ರಷ್ಟು ಭ್ರಷ್ಟಾಚಾರ ತಡೆ
ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರುಷೋತ್ತಮ್, ಭ್ರಷ್ಟಾಚಾರ ಎಲ್ಲಾ ಕಡೆ ಇದೆ, ಆದರೆ ತಮ್ಮ ಇಲಾಖೆಯಲ್ಲಿ ಶೇ.೭೦ ಕ್ಕೂ ಹೆಚ್ಚು ಭ್ರಷ್ಟ ಮುಕ್ತವಾಗಿ ಕೆಲಸ ಮಾಡಿದ್ದೇವೆ, ಅಂತಹ ವಾತಾವರಣ ಸೃಷ್ಟಿಸಿದ್ದೆವು. ಕೋಲಾರ ಕ್ರೀಡಾಸಂಘದ ಮೂಲಕ ತರಬೇತಿ ನೀಡಿ ಅನೇಕರು ಸೇನೆಗೆ ಆಯ್ಕೆಯಾಗುವಂತೆ ಮಾಡಿದ್ದಕ್ಕೆ ತೃಪ್ತಿ ಇದೆ, ಬಯಲು ಗ್ರಂಥಾಲಯ ಸ್ಥಾಪಿಸುವ ಮೂಲಕ ಮಕ್ಕಳಲ್ಲಿ ಓದುವ ಅಭ್ಯಾಸ ಹೆಚ್ಚಿಸಲು ಕ್ರಮವಹಿಸಿದ್ದೇನೆ. ಬದಲಾದ ಆಹಾರ ಪದ್ದತಿಯಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದ್ದು, ಈ ಕುರಿತು ಅರಿವು ನೀಡಲು ಕ್ಯಾನ್ಸರ್ ನಿರ್ಮೂಲನಾ ಅಭಿಯಾನ ನಡೆಸುವ ಆಶಯವಿದೆ ಎಂದು ತಿಳಿಸಿದರು.ನೌಕರರಿಗೆ ಆದರ್ಶ ವ್ಯಕ್ತಿ
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಮಾತನಾಡಿ, ಪುರುಷೋತ್ತಮ್ ಅವರ ಶಿಸ್ತುಬದ್ದ ನಡವಳಿಗೆ ನಮಗೆ ಆದರ್ಶ ಎಂದರು. ಗೆಳೆಯರ ಬಳಗದ ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ನಿವೃತ್ತಿ ನಂತರ ಉತ್ತಮ ಆರೋಗ್ಯಕ್ಕಾಗಿ ಹೇಗಿರಬೇಕು ಎಂದು ತಿಳಿಸಿಕೊಟ್ಟರು.ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ, ಶ್ರೀಮತಿ ಪುರುಷೋತ್ತಮ್, ಪತ್ರಕರ್ತ ಕೆ.ಎಸ್.ಗಣೇಶ್,ಕೆಜಿಎಫ್ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಪಿಡಿಒ ನಾಗರಾಜ್,ಗೋವಿಂದ್,ಸರ್ವೆ ರವಿ, ಸುಬ್ರಮಣಿ, ಗೆಳೆಯರ ಬಳಗದ ಚಿಕ್ಕಣ್ಣ, ವೆಂಕಟರಾಂ, ಸೋಮಶೇಖರ್, ಸುನೀಲ್,ಸಂದೀಪ್, ಚಂದು, ಖಜಾನೆ ಮಂಜುನಾಥ್ ಇದ್ದರು. ನೌಕರರ ಸಂಘದ ಉಪಾಧ್ಯಕ್ಷ ಶಿವಕುಮಾರ್ ಸ್ವಾಗತಿಸಿ, ನಿರ್ದೇಶಕ ವೆಂಕಟಾಚಲಪತಿಗೌಡ ನಿರೂಪಿಸಿದರು. ಲಿಖಿತ, ನಾಗಶ್ರೀ ಪ್ರಾರ್ಥಿಸಿದರು..