ಸಾರಾಂಶ
ರಾಜ್ಯದ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳ ಚಟುವಟಿಕೆಗಳಿಗೆ ಅವಕಾಶವಿಲ್ಲ ಎನ್ನುವುದು ಹೊಸದೇನಲ್ಲ. 2013ರಲ್ಲಿ ಜಗದೀಶ್ ಶೆಟ್ಟರ್ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲೇ ಆದೇಶ ಆಗಿದೆ.
ಬೆಂಗಳೂರು : ರಾಜ್ಯದ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳ ಚಟುವಟಿಕೆಗಳಿಗೆ ಅವಕಾಶವಿಲ್ಲ ಎನ್ನುವುದು ಹೊಸದೇನಲ್ಲ. 2013ರಲ್ಲಿ ಜಗದೀಶ್ ಶೆಟ್ಟರ್ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲೇ ಆದೇಶ ಆಗಿದೆ. ಅದೇ ಆದೇಶವನ್ನು ನಮ್ಮ ಸರ್ಕಾರ ಮಾಡಿದ್ದಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಕಲಬುರಗಿಯಲ್ಲಿ ಆರೆಸ್ಸೆಸ್ ಹಾಗೂ ಭೀಮ್ ಆರ್ಮಿ ಪಥಸಂಚಲನಕ್ಕೆ ಅವಕಾಶ ನಿರಾಕರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಖಾಸಗಿ ಸಂಘ ಸಂಸ್ಥೆಗಳು ಸರ್ಕಾರಿ ಜಾಗಗಳಲ್ಲಿ ಚಟುವಟಿಕೆ ನಡೆಸಲು ಅವಕಾಶ ಕೊಡಬಾರದು ಅಂತ ಕಳೆದ ಸಚಿವ ಸಂಪುಟದಲ್ಲಿ ತೀರ್ಮಾನ ಆಗಿತ್ತು. ಈ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರದಲ್ಲೂ ಆದೇಶ ಮಾಡಲಾಗಿದೆ. ಇದು ಯಾವುದೇ ಒಂದು ಸಂಘಟನೆಗೆ ಅನ್ವಯ ಎಲ್ಲ. ಎಲ್ಲ ಖಾಸಗಿ ಸಂಘಟನೆಗಳಿಗೂ ಆಗುತ್ತದೆ. ಆದರೆ, ಅವರು ಮಾಡಿದಾಗ ಯಾವ ಪ್ರಶ್ನೆ ಮಾಡಲಿಲ್ಲ, ಅದು ತಮಗೆ ಸಮಸ್ಯೆ ಆಗುತ್ತದೆ ಎಂದೆ ನಮ್ಮ ಸರ್ಕಾರ ಮಾಡಿದ್ದಕ್ಕೆ ಪ್ರಶ್ನಿಸುತ್ತಿದ್ದಾರೆ. ಆದೇಶದ ಬಳಿಕ ಸ್ವಾಭಾವಿಕವಾಗಿ ಅನುಮತಿ ವಾಪಸ್ ಪಡೆಯಬೇಕು. ಸರ್ಕಾರಿ ಆದೇಶದ ನಂತರವೂ ಅನುಮತಿ ನೀಡಿದರೆ ಅಧಿಕಾರಿ ವಿರುದ್ಧ ಕ್ರಮ ಆಗಲಿದೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬರೆದಿರುವ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅವರು ಬರೆದಿರುವ ಪತ್ರದ ಅಂಶವನ್ನು ಗಮನಿಸಿದ್ದೇವೆ. ಇಂತಹ ವಿಚಾರಗಳ ಬಗ್ಗೆ ಪರಿಶೀಲನೆ ಮಾಡಲು ಸಮಿತಿಯೊಂದನ್ನು ರಚಿಸಲಿದ್ದೇವೆ ಎಂದರು.
ಉದ್ಯಮಿಗಳು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವ ಪ್ರಶ್ನೆಗೆ, ಸರ್ಕಾರವನ್ನು ಟೀಕಿಸುವುದು, ಎಚ್ಚರಿಸುವ ಕೆಲಸ ಮಾಡಲಿ. ಕಿರಣ್ ಮಜುಂದಾರ್ ಶಾ ಅವರಂತಹ ಪ್ರಭಾವಿಗಳು ಮಾಧ್ಯಮಗಳಲ್ಲಿ ಮಾತನಾಡುವುದು ಬಹಳ ಸುಲಭ. ಆದರೆ, ತಾವು ನೀಡುವ ಹೇಳಿಕೆಗಳ ಪರಿಣಾಮ ಏನಾಗುತ್ತದೆ, ಪ್ರಭಾವ ಏನಾಗುತ್ತದೆ ಎಂದು ಯೋಚಿಸಿ ಮಾತನಾಡಬೇಕು. ಸಮಸ್ಯೆ ಇದ್ದರೆ ಸರ್ಕಾರ, ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಿ ಎಂದರು.
ಪಿಡಿಓ ಪ್ರವೀಣ್ ಕುಮಾರ್ ಅಮಾನತು ವಿಚಾರ ಕುರಿತು, ಸರ್ಕಾರಿ ನೌಕರರು ಯಾವುದೇ ಸಂಘಟನೆಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು, ಸದಸ್ಯರಾಗಬಾರದು ಎಂದು ಸರ್ಕಾರದ ಆದೇಶದಲ್ಲೇ ಇದೆ. ಆದರೂ ಇದನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಆಗಬೇಕು ಆಗಿದೆ ಎಂದು ಹೇಳಿದರು.