ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ

KannadaprabhaNewsNetwork | Published : Mar 5, 2024 1:35 AM

ಸಾರಾಂಶ

10ನೇ ತರಗತಿ ಎನ್ನುವುದು ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯವಾದ ಸಂಗತಿ. ನಿರಂತರ ಪರಿಶ್ರಮ, ಸರಿಯಾದ ವೇಳಾಪಟ್ಟಿ, ಪರಿಣಾಮಕಾರಿ ಅಧ್ಯಯನ ಮಾಡಿ ಸಕಾರಾತ್ಮಕ ಮನೋಭಾವನೆಯಿಂದ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಯಶಸ್ಸು ಸಾಧ್ಯವಾಗುತ್ತದೆ ಎಂದು ಶ್ರೀ ಸಿದ್ದರಾಮೇಶ್ವರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಸ್ವಪ್ನಾ ಜೋಶಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಳಗಾವಿ

10ನೇ ತರಗತಿ ಎನ್ನುವುದು ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯವಾದ ಸಂಗತಿ. ನಿರಂತರ ಪರಿಶ್ರಮ, ಸರಿಯಾದ ವೇಳಾಪಟ್ಟಿ, ಪರಿಣಾಮಕಾರಿ ಅಧ್ಯಯನ ಮಾಡಿ ಸಕಾರಾತ್ಮಕ ಮನೋಭಾವನೆಯಿಂದ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಯಶಸ್ಸು ಸಾಧ್ಯವಾಗುತ್ತದೆ ಎಂದು ಶ್ರೀ ಸಿದ್ದರಾಮೇಶ್ವರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಸ್ವಪ್ನಾ ಜೋಶಿ ಅಭಿಪ್ರಾಯಪಟ್ಟರು.

ನಗರದ ಶ್ರೀ ಸಿದ್ಧರಾಮೇಶ್ವರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಡಾ.ಸ ಜ ನಾಗಲೋಟಿಮಠ ವಿಜ್ಞಾನ ಕೇಂದ್ರ, ಶ್ರೀ ಸಿದ್ಧರಾಮೇಶ್ವರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯ, ಜಯಭಾರತ ಫೌಂಡೇಶನ್ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಸಂಯುಕ್ತಾಶ್ರದಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿಗಾಗಿ ಆಯೋಜಿಸಿದ್ದ ಪ್ರೇರಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ ಮಾತನಾಡಿ, ಪರೀಕ್ಷಾ ದಿನಗಳು ಹತ್ತಿರದಲ್ಲಿದ್ದು ವಿದ್ಯಾರ್ಥಿಗಳು ಮತ್ತು ಪಾಲಕ ಪೋಷಕರು ಒತ್ತಡದಲ್ಲಿರುತ್ತಾರೆ. ಪರೀಕ್ಷಾ ಪೂರ್ವದ ಸಿದ್ಧತೆ ಗಟ್ಟಿಯಾಗಿದ್ದರೆ ಪರೀಕ್ಷೆಯು ಆತಂಕವಾಗುವುದಿಲ್ಲ. ಕೇವಲ ಅಂಕಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪೋಷಕರಾಗಲಿ, ವಿದ್ಯಾರ್ಥಿಗಳಾಗಲಿ ಪರೀಕ್ಷೆ ಎದುರಿಸಬಾರದು ಎಂದು ಹೇಳಿದರು.ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ರಾಜ್ಯ ಶಿಕ್ಷಣ ಸಂಯೋಜಕ ಪ್ರಕಾಶ ಮಾಸ್ತಿಹೊಳಿ, ಸರ್ಕಾರಿ ಪ್ರೌಢಶಾಲೆ ಮುದಕವಿಯ ವಿಜ್ಞಾನ ಶಿಕ್ಷಕ ವಿ.ಬಿ.ಹೆಗಡೆ, ಯಮಕನಮರಡಿಯ ಸಿಇಎಸ್ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕ ಅಜಯ ಉದೋಶಿ, ವಿಜ್ಞಾನ, ಇಂಗ್ಲಿಷ್ ಹಾಗೂ ಗಣಿತ ವಿಷಯಗಳಲ್ಲಿ ಉತ್ತಮ ಅಂಕಗಳಿಕೆ, ಹೆಚ್ಚು ಒತ್ತು ನೀಡಿ ಅಭ್ಯಾಸ ಮಾಡಬೇಕಾದ ಅಧ್ಯಾಯಗಳು, ಉತ್ತರ ಬಿಡಿಸುವಿಕೆ ಮುಂತಾದವುಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿದರು.

ಕಾರ್ಯಕ್ರಮದಲ್ಲಿ ಜಯಭಾರತ ಫೌಂಡೇಶನದ ನಿರ್ದೇಶಕರುಗಳಾದ ಬಸನಗೌಡಾ ಪಾಟೀಲ, ದಯಾನಂದ ಕದಮ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕ ಎಂ ಎಸ್ ಚೌಗಲಾ, ಸುರೇಖಾ ಪಾಟೀಲ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕರ್ನಾಟಕ ಪಬ್ಲಿಕ ಶಾಲೆಯ ಪ್ರಾಚಾರ್ಯ ಕಿರಣ ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿದರು ಶಂಕರ ಕತ್ತಿ ನಿರೂಪಿಸಿ ವಂದಿಸಿದರು.

Share this article