ಕಾಂಗ್ರೆಸ್‌ ಸರ್ಕಾರದಿಂದ ರೈತರಿಗೆ ಶೇ.5 ಅನುದಾನವೂ ಬಂದಿಲ್ಲ: ವಾಸುದೇವ ಮೇಟಿ

KannadaprabhaNewsNetwork |  
Published : Jan 06, 2024, 02:00 AM IST
4ಕೆಡಿವಿಜಿ64-ದಾವಣಗೆರೆಯಲ್ಲಿ ಗುರುವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳಾದರೂ ಒಂದೇ ಒಂದು ರೈತ ಪರ ಯೋಜನೆ ಜಾರಿಗೊಳಿಸಿಲ್ಲ. ತೀವ್ರ ಬರ ಹಿನ್ನೆಲೆಯಲ್ಲಿ ರಾಜ್ಯದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತ ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ ಕೇವಲ 2 ಸಾವಿರ ರು. ಘೋಷಿಸಿದೆ. ಆದರೆ, ಯಾವೊಬ್ಬ ರೈತರ ಖಾತೆಗೂ ಹಣ ಹಾಕಿಲ್ಲ.

ಬರದಿಂದ ತತ್ತರಿಸಿದ ರೈತರ ನೆರವಿಗೆ ಬಾರದ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ದಾವಣಗೆರೆ

ಚುನಾವಣೆ ವೇಳೆ ಘೋಷಿಸಿದ್ದ ಕಾಂಗ್ರೆಸ್ ಪಕ್ಷದ ಬಿಟ್ಟಿ ಯೋಜನೆಗಳಿಗೆ ಬಿಡುಗಡೆ ಮಾಡಿದ ಹಣದಲ್ಲಿ ಶೇ.5ರಷ್ಟು ಅನುದಾನವನ್ನೂ ರೈತರಿಗೆ ಬಿಡುಗಡೆಗೊಳಿಸದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವು ರೈತರ ಸಂಪೂರ್ಣ ಕಡೆಗಣಿಸುತ್ತಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳಾದರೂ ಒಂದೇ ಒಂದು ರೈತ ಪರ ಯೋಜನೆ ಜಾರಿಗೊಳಿಸಿಲ್ಲ. ತೀವ್ರ ಬರ ಹಿನ್ನೆಲೆಯಲ್ಲಿ ರಾಜ್ಯದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತ ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ ಕೇವಲ 2 ಸಾವಿರ ರು. ಘೋಷಿಸಿದೆ. ಆದರೆ, ಯಾವೊಬ್ಬ ರೈತರ ಖಾತೆಗೂ ಹಣ ಹಾಕಿಲ್ಲ ಎಂದು ದೂರಿದರು.

ರೈತರು ಒಂದು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯರು ಕನಿಷ್ಟ ₹35 ಸಾವಿರ ಪರಿಹಾರ ನೀಡಬೇಕು. ಈಗಾಗಲೇ ರಾಜ್ಯದ 126 ತಾಲೂಕುಗಳು ಬರ ಪೀಡಿತವೆಂದು ಘೋಷಣೆಯಾಗಿವೆ. ಆದರೆ, ಈ ಬಗ್ಗೆ ಸರ್ಕಾರಕ್ಕೆ ವರದಿಯನ್ನೇ ಸಲ್ಲಿಸಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿ ರೈತರ ಕಣ್ಣೀರೊರೆಸಬೇಕಾದ ಸರ್ಕಾರ ಬೆಳೆ ಹಾನಿ ಪರಿಹಾರವನ್ನೂ ಭಿಕ್ಷೆಯ ರೂಪದಲ್ಲಿ ನೀಡಲು ಹೊರಟಿದ್ದು ದುರಂತ ಎಂದು ಕಿಡಿಕಾರಿದರು.

ಜಲಸಂಪನ್ಮೂಲ ಸಚಿವರು ರಾಜೀನಾಮೆ ನೀಡಲಿ:

ಡಿಸಿಎಂ, ಜಲ ಸಂಪನ್ಮೂಲ ಸಚಿವರು ಬೆಂಗಳೂರು ಮಹಾ ನಗರದಲ್ಲೇ ಪ್ರದಕ್ಷಿಣೆ ಹಾಕುತ್ತಾರೆ. ಆದರೆ, ರೈತರ ಕಷ್ಟ ಕೇಳುವುದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿಲ್ಲ. ಇಂತಹ ಬೇಜವಾಬ್ದಾರಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪ್ರಾಮಾಣಿಕವಾಗಿ ರೈತರ ಕೆಲಸ ಮಾಡುವವರ ಜಲ ಸಂಪನ್ಮೂಲ ಸಚಿವರಾಗಿ ಮಾಡಲಿ ಎಂದು ಒತ್ತಾಯಿಸಿದರು.

ಸಂಘದ ನೂತನ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ಮಾತನಾಡಿ, ರಾಜ್ಯ ಸರ್ಕಾರವು ಈ ವರೆಗೂ ಬರ ಹಿನ್ನೆಲೆಯಲ್ಲಿ ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ಹಾಕಿಲ್ಲ. ಕೇವಲ ಬಡ್ಡಿಮನ್ನಾ ಘೋಷಣೆ ಮಾಡುತ್ತಿದೆ. ನಮಗೆ ಬಡ್ಡಿ ಮಾತ್ರ ಅಲ್ಲ, ಸಂಪೂರ್ಣ ಸಾಲಮನ್ನಾ ಮಾಡಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಬೇಕು. ಗ್ರಾಮ, ಹೋಬಳಿ ಮಟ್ಟದಲ್ಲೂ ಗೋ ಶಾಲೆಗಳ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಮುಖಂಡರಾದ ಎಂ.ಪ್ರಕಾಶ, ಎಸ್‌.ಕೆ.ಪೂಜಾರ್‌, ಸಂಗಣ್ಣ ಬಾಗೇವಾಡಿ, ಚಿಕ್ಕಬೂದಿಹಾಳ್ ಭಗತ್ ಸಿಂಹ ಇತರರಿದ್ದರು.

ಗ್ರಾಮಮಟ್ಟದಿಂದ ಸಂಘಟನೆ

ರೈತ ಸಂಘ-ಹಸಿರು ಸೇನೆ ದಾವಣಗೆರೆ ನೂತನ ಜಿಲ್ಲಾಧ್ಯಕ್ಷರಾಗಿ ಗುಮ್ಮನೂರು ಬಸವರಾಜರನ್ನು ನೇಮಿಸಲಾಗಿದೆ. ಇಂದಿನಿಂದಲೇ ಗ್ರಾಮಮಟ್ಟದಿಂದ ಜಿಲ್ಲಾಮಟ್ಟದವರೆಗೂ ಸಂಘಟನೆ ಆರಂಭವಾಗಲಿದೆ. ಮುಂಬರುವ ದಿನಗಳಲ್ಲಿ ರೈತರ ಸಮಸ್ಯೆಗಳಿಗೆ ಧ್ವನಿಯಾಗಿ, ಅನ್ನದಾತರ ಪರ ಹೋರಾಟಗಳ ಸಂಘ-ಸೇನೆ ಹಮ್ಮಿಕೊಳ್ಳಲಿವೆ.

ವಾಸುದೇವ ಮೇಟಿ, ರಾಜ್ಯಾಧ್ಯಕ್ಷ, ರೈತ ಸಂಘ ಮತ್ತು ಹಸಿರು ಸೇನೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಓರಿಯನ್‌ ಧರೆಗಿಳಿಯೋದು ಹೇಗೆ ?
ಗೃಹಲಕ್ಷ್ಮೀ ಹಣ ಸಾಲದ ಕಂತಿಗೆ ಕಡಿತ ಮಾಡಂಗಿಲ್ಲ : ಸಿಎಂ