ನಾಳೆ ಅರಕಲಗೂಡಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಎಚ್‌ಪಿವಿ ಲಸಿಕೆ

KannadaprabhaNewsNetwork | Published : Jan 28, 2025 12:45 AM

ಸಾರಾಂಶ

ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ಭಾರತದಂತಹ ಕಡಿಮೆ ಮತ್ತು ಮಧ್ಯಮ ಆದಾಯ ಇರುವಂತಹ ದೇಶಗಳ ಮಹಿಳೆಯರು ಬಲಿಯಾಗುತ್ತಿದ್ದು, ವಿಶ್ವದಾದ್ಯಂತ ಪ್ರತಿದಿನ ೧೫೦೦ಕ್ಕೂ ಹೆಚ್ಚು ಜನ ಸಾವನ್ನಪುತ್ತಿದ್ದಾರೆ. ಆರಂಭಿಕ ಹಂತದಿಂದ ಈ ಬಗ್ಗೆ ಗಮನಹರಿಸಿ ಚಿಕಿತ್ಸೆ ಪಡೆದುಕೊಂಡರೆ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದು. ಬುಧವಾರ ಬೆಳಿಗ್ಗೆ ೭.೩೦ಕ್ಕೆ ಶ್ರೀ ಅರಸೀಕಟ್ಟೆ ಅಮ್ಮನವರ ದೇವಾಲಯದ ಹೇಮಾವತಿ ಸಭಾಂಗಣದ ಬಳಿ ಚುಚ್ಚುಮದ್ದನ್ನು ನೀಡಲಾಗುತ್ತಿದ್ದು, ಮುಂದೆ ಚುಚ್ಚುಮದ್ದು ತೆಗೆದುಕೊಳ್ಳಲು ಇಚ್ಛಿಸುವ ಹೆಣ್ಣುಮಕ್ಕಳು ವಯಸ್ಸಿನ ದೃಢೀಕರಣ ದಾಖಲಾತಿಯೊಂದಿಗೆ ಅಂದು ನೋಂದಾಯಿಸಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಹಾಸನ

ಅರಕಲಗೂಡು ತಾಲೂಕಿನ ಕೊಣನೂರು ಬಳಿ ಇರುವ ಶ್ರೀ ಅರಸೀಕಟ್ಟೆ ಅಮ್ಮನವರ ದೇವಾಲಯದ ಹೇಮಾವತಿ ಸಭಾಂಗಣದ ಬಳಿ ಜನವರಿ ೨೯ರ ಬುಧವಾರದಂದು ಸುಮಾರು ೧೪ ವರ್ಷದೊಳಗಿನ ೬೦೦ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್‌ಪಿವಿ ವ್ಯಾಕ್ಸಿನ್ ನೀಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ಭಾರತೀ ರಾಜಶೇಖರ್ ಮತ್ತು ಡಾ. ಸಾವಿತ್ರಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಉದ್ದೇಶಿಸಿ ಮಾತನಾಡಿದ ಅವರು, ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ, ಇನ್ನರ್‌ ವ್ಹೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್, ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರ ಸಂಘ ಹಾಗೂ ಎಚ್.ಡಿ.ಆರ್‌ ಫೌಂಡೇಶನ್ ಬೆಂಗಳೂರು, ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್‌ ಪಿವಿ ವ್ಯಾಕ್ಸಿನ್ ನೀಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ಭಾರತದಂತಹ ಕಡಿಮೆ ಮತ್ತು ಮಧ್ಯಮ ಆದಾಯ ಇರುವಂತಹ ದೇಶಗಳ ಮಹಿಳೆಯರು ಬಲಿಯಾಗುತ್ತಿದ್ದು, ವಿಶ್ವದಾದ್ಯಂತ ಪ್ರತಿದಿನ ೧೫೦೦ಕ್ಕೂ ಹೆಚ್ಚು ಜನ ಸಾವನ್ನಪುತ್ತಿದ್ದಾರೆ. ಆರಂಭಿಕ ಹಂತದಿಂದ ಈ ಬಗ್ಗೆ ಗಮನಹರಿಸಿ ಚಿಕಿತ್ಸೆ ಪಡೆದುಕೊಂಡರೆ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದು. ಈ ನಿಟ್ಟಿನಲ್ಲಿ ಶ್ರೀ ಅರಸೀಕಟ್ಟೆ ಅಮ್ಮನವರ ದೇವಾಲಯ ಸಮಿತಿ ಅಧ್ಯಕ್ಷರು ಹಾಗು ಮಾಜಿ ಶಾಸಕರಾದ ಎ.ಟಿ ರಾಮಸ್ವಾಮಿ ಅವರ ದಿಟ್ಟ ನಿರ್ಧಾರದಿಂದಾಗಿ ಈಗಾಗಲೇ ೨೦೦ ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಬುಧವಾರದಂದು ೬೦೦ ಹೆಣ್ಣುಮಕ್ಕಳು ಉಚಿತವಾಗಿ ಲಸಿಕೆ ಪಡೆಯಲಿದ್ದಾರೆ ಎಂದರು.

ಈಗಾಗಲೇ ನೋಂದಾಯಿಸಿಕೊಂಡಿರುವವರಿಗೆ ಬುಧವಾರ ಬೆಳಿಗ್ಗೆ ೭.೩೦ಕ್ಕೆ ಶ್ರೀ ಅರಸೀಕಟ್ಟೆ ಅಮ್ಮನವರ ದೇವಾಲಯದ ಹೇಮಾವತಿ ಸಭಾಂಗಣದ ಬಳಿ ಚುಚ್ಚುಮದ್ದನ್ನು ನೀಡಲಾಗುತ್ತಿದ್ದು, ಮುಂದೆ ಚುಚ್ಚುಮದ್ದು ತೆಗೆದುಕೊಳ್ಳಲು ಇಚ್ಛಿಸುವ ಹೆಣ್ಣುಮಕ್ಕಳು ವಯಸ್ಸಿನ ದೃಢೀಕರಣ ದಾಖಲಾತಿಯೊಂದಿಗೆ ಅಂದು ನೋಂದಾಯಿಸಿಕೊಳ್ಳಬಹುದೆಂದು ಎಂದು ಹೇಳಿದರು. ರಂಗಕರ್ಮಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಪೂಜಾ ರಘುನಂದನ್ ಮಾತನಾಡಿ, ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಇನ್ನರ್‌ ವ್ಹೀಲ್ ಗೋಲ್ಡ್ ಸಂಸ್ಥೆಯು ಎಚ್‌ಪಿವಿ ಲಸಿಕಾ ಕಾರ್ಯವನ್ನು ಕೈಗೆತ್ತಿಕೊಂಡಿರುವುದು ಸಂತಸದ ಸಂಗತಿ. ಈ ಕಾರ್ಯಕ್ಕೆ ಕೈಜೋಡಿಸಿರುವ ಎ.ಟಿ ರಾಮಸ್ವಾಮಿ ಅವರ ನಡೆ ಇತರ ಜನಪ್ರತಿನಿಧಿಗಳಿಗೂ ಮಾದರಿಯಾಗಿದ್ದು, ಅರಕಲಗೂಡು ಸುತ್ತಮುತ್ತಲಿನ ಹೆಣ್ಣುಮಕ್ಕಳು ಲಸಿಕೆ ಪಡೆಯುವ ಮೂಲಕ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರು ಡಾ. ಸಾವಿತ್ರಿ ಮಾತನಾಡಿ, ಮಹಿಳೆಯರಿಗೆ ಗರ್ಭಕಂಠದ ಭಾಗದಲ್ಲಿ ಎದುರಾಗುವ ಕ್ಯಾನ್ಸರ್‌ ತೊಂದರೆ ಇದಾಗಿದೆ. ಇದು ಲೈಂಗಿಕವಾಗಿ ಹರಡಬಹುದಾದ ಸೋಂಕು ಎಂದು ಕೂಡ ಹೇಳಲಾಗುತ್ತದೆ. ೮೦% ಮಹಿಳೆಯರು ಎಚ್‌ಪಿವಿ ಸೋಂಕಿಗೆ ಗುರಿಯಾಗುತ್ತಿದ್ದಾರೆ. ಐದು ಪ್ರಕರಣಗಳಲ್ಲಿ ನಾಲ್ಕು ಇದೇ ರೀತಿ ಆಗುತ್ತಿವೆ ಎಂದು ಸಂಶೋಧನೆ ಹೇಳುತ್ತದೆ. ಇದನ್ನು ತಡೆಗಟ್ಟಲು ಮಾರ್ಗೋಪಾಯಗಳಿದ್ದು, ೯ರಿಂದ ೧೪ ವರ್ಷದ ಹೆಣ್ಣುಮಕ್ಕಳಿಗೆ ಎಚ್‌ಪಿವಿ ಲಸಿಕೆ ನೀಡಿ ಅವರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ರಕ್ಷಿಸಬಹುದಾಗಿದೆ. ಪ್ರೌಢಾವಸ್ಥೆಯ ಹುಡುಗಿಯರಿಗೆ ಆದಷ್ಟು ಬೇಗನೆ ಲಸಿಕೆ ನೀಡಿದರೆ ಅವರಿಗೆ ಲೈಂಗಿಕ ಮೆಚ್ಯುರಿಟಿ ಬರುವ ಒಳಗೆ ರಕ್ಷಣೆ ನೀಡಿದಂತಾಗುತ್ತದೆ. ಈ ರೀತಿ ಮಾಡುವುದರಿಂದ ಗರ್ಭಕಂಠದ ಕ್ಯಾನ್ಸರ್‌ ಸಮಸ್ಯೆಯನ್ನು ಸುಲಭವಾಗಿ ತಡೆಯಬಹುದಾಗಿದ್ದು, ಸರ್ಕಾರವು ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಎಚ್‌ವಿಪಿ ಲಸಿಕೆಯನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಜೋಡಿಸಿಕೊಳ್ಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಗಿರಿಜಾ, ಇನ್ನರ್‌ ವ್ಹೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ಅಧ್ಯಕ್ಷೆ ತನುಜಾ, ಇತರರು ಉಪಸ್ಥಿತರಿದ್ದರು.

Share this article