‘ಗಂಗೆ ಸ್ನಾನ, ತುಂಗಾ ಪಾನ’ ನಾಣ್ಣುಡಿಗೆ ಅಧಿಕಾರಿಗಳ ಅಪಮಾನ: ಕೆ.ಬಿ.ಪ್ರಸನ್ನಕುಮಾರ್ ಆರೋಪ

KannadaprabhaNewsNetwork |  
Published : Oct 16, 2024, 12:31 AM ISTUpdated : Oct 16, 2024, 12:32 AM IST
ಪೊಟೋ: 15ಎಸ್‌ಎಂಜಿಕೆಪಿ02ಶಿವಮೊಗ್ಗದ ಪತ್ರಿಕಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ಗಂಗೆ ಸ್ನಾನ, ತುಂಗಾ ಪಾನ ಎಂಬ ನಾಣ್ಣುಡಿಗೆ ಅಪಮಾನ ಬರುವ ರೀತಿ ಪಾಲಿಕೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಗಂಭೀರ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿರುವ ಕಾರಣ ಆಸ್ಪತ್ರೆಗಳು ಹೌಸ್‌ಫುಲ್‌ ಆಗಿವೆ. ಗಂಗೆ ಸ್ನಾನ, ತುಂಗಾ ಪಾನ ಎಂಬ ನಾಣ್ಣುಡಿಗೆ ಅಪಮಾನ ಬರುವ ರೀತಿ ಪಾಲಿಕೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಗಂಭೀರ ಆರೋಪ ಮಾಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಲುಷಿತ ನೀರು ಕಾರಣ ಕೆಲವರು ವಾಟರ್‌ ಬಾಟಲ್‌ ನೀರನ್ನು ಬಳಸುತ್ತಿದ್ದಾರೆ. ಅದೂ ಕೂಡ ಕುಡಿಯಲು ಎಷ್ಟು ಸುರಕ್ಷಿತ ಎಂಬುದನ್ನು ಪರೀಕ್ಷೆ ಮಾಡಬೇಕಿದೆ. ಆದರೆ, ಪಾಲಿಕೆಯಲ್ಲಿ ಸದಸ್ಯರಿಲ್ಲದ ಕಾರಣ ಅಧಿಕಾರಿಗಳಿಗೆ ಹೇಳೋರು, ಕೇಳೋರು ಯಾರು ಇಲ್ಲವಾಗಿದೆ. ಇದು ಹೀಗೆ ಆದರೆ, ಹೊರಗಿನ ಜನ ಶಿವಮೊಗ್ಗ ಸಿಟಿಗೆ ಬಂದು ನೀರು ಕುಡಿಯುವುದಕ್ಕೆ ಹಿಂದೇಟು ಹಾಕುವಂತ ಪರಿಸ್ಥಿತಿ ಬರಲಿದೆ ಎಂದು ಹರಿಹಾಯ್ದರು.

ತೀವ್ರ ಮಳೆಯಿಂದ ಕೆಸರುಗದ್ದೆಯ ಮಣ್ಣು ನೀರಿನೊಂದಿಗೆ ಬೆರೆತು ಈ ರೀತಿ ಆಗುತ್ತಿದೆ ಎಂದು ಸಾರ್ವಜನಿಕರು ಬಿಸಿ ಮಾಡಿ ನೀರು ಕುಡಿಯುವಂತೆ ಅಧಿಕಾರಿಗಳು ಕುಂಟುನೆಪ ಹೇಳುತ್ತಿದ್ದಾರೆ. ಶಿವಮೊಗ್ಗ ನಗರಕ್ಕೆ ಮಳೆಯೇನೂ ಹೊಸದಲ್ಲ, ಇದಕ್ಕಿಂತ ನೂರು ಪಟ್ಟು ಜಾಸ್ತಿ ಮಳೆ ಬಂದಿದೆ. ನೀರು ಶುದ್ಧೀಕರಣ ಘಟಕದ ನಿರ್ವಹಣೆಯ ಸಂಪೂರ್ಣ ವೈಫಲ್ಯ ದಿಂದಾಗಿ ಈ ಸಮಸ್ಯೆಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೂರಾರು ಜನ ಬಲಿಯಾಗುವ ಮುನ್ನ ಕೂಡಲೇ ಅಧಿಕಾರಿಗಳು ಎಚ್ಚೆತ್ತು ಶುದ್ಧ ಕುಡಿಯುವ ನೀರು ಕೊಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ಅಲ್ಲಿ ಶುದ್ಧೀಕರಣದ ಯಾವ ಮಾನದಂಡಗಳನ್ನೂ ಪಾಲಿಸುತ್ತಿಲ್ಲ. ಕ್ಲೋರಿನ್ ಮತ್ತು ಆಲಂ ನಿರ್ದಿಷ್ಟ ಪ್ರಮಾಣದಲ್ಲಿ ಬಳಸುತ್ತಿಲ್ಲ. ಆಯುಧಪೂಜೆ ದಿನವೂ ಕೂಡ ಬಾಳೆಕಂದು ಮತ್ತು ಬಲೂನ್ ಕಟ್ಟಿದ್ದು ಬಿಟ್ಟರೆ ಶುದ್ಧೀಕರಣ ಘಟಕದ ಸ್ವಚ್ಛತೆ ಮಾಡಿಲ್ಲ. ಯಂತ್ರಗಳು ಕೆಟ್ಟು ನಿಂತು ಎರಡು ತಿಂಗಳ ಮೇಲಾಗಿದೆ. ಪ್ರಯೋಗಾಲಯ ಕೂಡ ನಿಷ್ಕ್ರಿಯವಾಗಿದೆ. ಅಲ್ಲಿ ನೀಡುವ ವರದಿ ಕೂಡ ನಂಬಲರ್ಹವಲ್ಲ. ನೀರನ್ನು ಪ್ರತಿದಿನ ಮೆಗ್ಗಾನ್ ಪ್ರಯೋಗಾಲಯದಲ್ಲಿ ನೀಡಿ ವರದಿ ಪಡೆಯಬೇಕು ಎಂದು ಸಲಹೆ ನೀಡಿದರು.

ಇದರಲ್ಲಿ ಮಹಾನಗರ ಪಾಲಿಕೆ ಜವಾಬ್ದಾರಿಯೂ ಇದೆ. ಹಸ್ತಾಂತರ ಮಾಡಿದಾಕ್ಷಣ ಪಾಲಿಕೆ ಜವಾಬ್ದಾರಿ ನಿಲ್ಲುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದೇ ರೀತಿ ಮುಂದುವರೆದರೆ ಜಿಲ್ಲಾ ಜೆಡಿಎಸ್ ನಿಂದ ಜಲಮಂಡಳಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ದೀಪಕ್ ಸಿಂಗ್, ಸಿದ್ದಪ್ಪ, ಸಂಗಯ್ಯ, ಮಧು, ಗೋಪಿ, ಗೋವಿಂದರಾಜ್, ಮಂಜುನಾಥ್, ಲೋಹಿತ್, ಚಂದ್ರಶೇಖರ್ ಮೊದಲಾದವರಿದ್ದರು.ಈಗಾಗಲೇ

ಜನರ ತಾಳ್ಮೆ ಜೊತೆ ಚೆಲ್ಲಾಟ ಸಲ್ಲ

ನಗರದ ಎಲ್ಲಾ ಆಸ್ಪತ್ರೆಗಳು ವಾಂತಿ ಭೇದಿ ಮತ್ತು ವಿವಿಧ ಜ್ವರ, ಕಾಯಿಲೆಗಳಿಂದ ಪ್ರಮುಖವಾಗಿ ಜಾಂಡೀಸ್ ನಿಂದ ಬಳಲುತ್ತಿರುವುದು ಕಂಡು ಬರುತ್ತಿದ್ದು, ವಿವಿಧ ಪರೀಕ್ಷೆಗಳಿಗೆ ಕನಿಷ್ಟ 2 ಸಾವಿರ ರೂ. ಪ್ರತಿದಿನ ಖರ್ಚು ಮಾಡುತ್ತಿದ್ದಾರೆ. ಮೆಗ್ಗಾನ್ ಪರೀಕ್ಷಾ ಕೇಂದ್ರದಲ್ಲಿ ಕಾಲಿಡಲು ಜಾಗವಿಲ್ಲ. ಈ ಬಗ್ಗೆ ಡಿಹೆಚ್ಒ ಅವರ ಬಳಿ ಕೇಳಿದರೆ ಅವರು ನೀರಿನಿಂದ ಸಮಸ್ಯೆ ಎಂದು ಹೇಳುತ್ತಾರೆ ಎಂದರು.

2016ರಲ್ಲೇ ಶುದ್ಧ ಕುಡಿಯುವ ನೀರು 24*7 ನೀಡುತ್ತೇವೆ ಎಂದು ಹೇಳಿ ಪಾಲಿಕೆಯಿಂದ ಜಲಮಂಡಳಿ ವಹಿಸಿಕೊಂಡು 8 ವರ್ಷ ಕಳೆದರೂ ಇನ್ನೂ ಶೇ.50 ರಷ್ಟು ಕಾಮಗಾರಿ ಮುಗಿಸಿಲ್ಲ. ಶುದ್ಧ ಕುಡಿಯುವ ನೀರೂ ಇಲ್ಲ. 24*7 ಕೂಡ ನೀರಿಲ್ಲ. ಜನ ಅನಿವಾರ್ಯವಾಗಿ ಬಾಟಲಿ ನೀರಿನ ಮೊರೆ ಹೋಗಿದ್ದು, ಜನರ ತಾಳ್ಮೆ ಜೊತೆ ಅಧಿಕಾರಿಗಳು ಚೆಲ್ಲಾಟ ವಾಡುತ್ತಿದ್ದು, ಜನ ರೊಚ್ಚಿಗೆದ್ದರೆ ಅಧಿಕಾರಿಗಳ ಪರಿಸ್ಥಿತಿ ಹೀನಾಯವಾಗಲಿದೆ ಎಂದು ಕೆ.ಬಿ.ಪ್ರಸನ್ನಕುಮಾರ್ ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟುಂಬ ಹಾಳು ಮಾಡುತ್ತಿರುವ ಪ್ರೇಮಿಗಳ ದಿನ
ರಾಜಕೀಯ ಬದುಕಿಗೆ ಜನ್ಮ ನೀಡಿದ್ದು ಗ್ರಾಮೀಣ ಕ್ಷೇತ್ರ