ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಭೀಕರ ಬರಗಾಲದ ಸಂಕಷ್ಟಕ್ಕೆ ಸಿಲುಕಿರುವ ರೈತರು ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ಹಾಗೂ ಮುಂದಿನ ಕೃಷಿ ಚಟುವಟಿಕೆಗಳಿಗೆ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ಕೊಳವೆ ಬಾವಿಗಳ ನಿರ್ಮಾಣಕ್ಕೆ ದುಂಬಾಲು ಬಿದ್ದಿದ್ದಾರೆ. ಅಂತರ್ಜಲ ಪಾತಾಳ ಸೇರಿರುವ ಹೊತ್ತಿನಲ್ಲಿ ೭೦೦-೮೦೦ ಅಡಿವರೆಗೆ ಕೊರೆದರೂ ಗಂಗೆ ಉಕ್ಕಿ ಬರುತ್ತಿಲ್ಲ. ಪರಿಣಾಮ ಅನ್ನದಾತರು ಸಾಲದ ಕೂಪಕ್ಕೆ ಸಿಲುಕುತ್ತಿದ್ದಾರೆ.
ಕಳೆದ ವರ್ಷ ಮಳೆ ಅಭಾವ, ನೀರಿನ ಕೊರತೆ, ರಣಬಿಸಿಲಿನ ಪರಿಣಾಮ ರೈತರ ಜಮೀನುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊಳವೆಬಾವಿಗಳಲ್ಲಿ ನೀರು ಸಂಪೂರ್ಣ ಬತ್ತಿಹೋಗಿದೆ. ಬೋರ್ವೆಲ್ಗಳಲ್ಲಿ ನೀರು ಸ್ಥಗಿತಗೊಂಡಿರುವುದರಿಂದ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ರೈತರು ಹೊಸ ಬೋರ್ವೆಲ್ಗಳನ್ನು ನಿರ್ಮಿಸುತ್ತಿದ್ದಾರೆ. ದುರದೃಷ್ಟವೋ ಏನೋ ಬಹುತೇಕ ಹೊಸ ಕೊಳವೆ ಬಾವಿಗಳಲ್ಲಿ ನೀರು ಬರುತ್ತಲೇ ಇಲ್ಲ. ಲಕ್ಷಗಟ್ಟಲೆ ಹಣ ವ್ಯಯಿಸಿ ಕೊರೆಸಿದ ಬೋರ್ವೆಲ್ಗಳಲ್ಲಿ ನೀರು ಬಾರದಿರುವುದರಿಂದ ರೈತರು ತೀವ್ರ ಹತಾಶರಾಗಿದ್ದಾರೆ.ಮನೆಯಲ್ಲಿದ್ದ ಚಿನ್ನ, ಜಮೀನು, ಓಡಾಟಕ್ಕಿದ್ದ ವಾಹನಗಳನ್ನು ಅಡವಿಡುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಕೂಡಿಟ್ಟ ಹಣವನ್ನು ತೆಗೆದು ಕೊಳವೆಬಾವಿ ನಿರ್ಮಿಸುತ್ತಿದ್ದಾರೆ. ಕೆಲವರು ಕೊರೆಸಿದ ಬೋರ್ವೆಲ್ಗಳಲ್ಲಿ ಅಲ್ಪಸ್ವಲ್ಪ ನೀರು ಬಂದಿದ್ದು ಅದು ಕೃಷಿ ಚಟುವಟಿಕೆಗೆ ಸಾಲದಂತಾಗಿದೆ. ಆದರೂ ಹಠ ಬಿಡದೆ ಕೊಳವೆ ಬಾವಿ ನಿರ್ಮಿಸಲು ರೈತರು ಮುಂದಾಗುತ್ತಾ ಸಾಲದ ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಇಷ್ಟದೇವರಿಗೆ ಮೊರೆ:ಗ್ರಾಮೀಣ ಭಾಗದ ಬಹುತೇಕ ಜನರು ಬರಗಾಲದ ಹೊತ್ತಿನಲ್ಲಿ ಜಮೀನಿನಲ್ಲಿ ಕೊರೆಸುವ ಕೊಳವೆ ಬಾವಿಯಲ್ಲಿ ನೀರು ಸಿಗುವಂತೆ ಇಷ್ಟ ದೇವರಿಗೆ ಮೊರೆ ಹೋಗುತ್ತಿದ್ದಾರೆ. ಕೆಲವರು ಮನೆದೇವರು, ಕುಲದೇವರು, ಗ್ರಾಮ ದೇವತೆಗಳಿಗೆಲ್ಲಾ ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ನೀರು ಸಿಗುವ ವಿಶ್ವಾಸದೊಂದಿಗೆ ದೇವರ ಬಳಿ ಹೂ ಕೇಳುವುದು ಜನರು ರೂಢಿಸಿಕೊಂಡು ಬಂದಿರುವ ನಂಬಿಕೆಯಾಗಿದೆ. ದೇವರು ಬಲಗಡೆಯಿಂದ ಹೂ ಕೊಟ್ಟ ಕೆಲವೇ ದಿನಗಳಲ್ಲಿ ಹೊಸ ಕೊಳವೆ ಬಾವಿ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ದೇವರ ಕೃಪೆಯಿಂದ ಕೆಲವರಿಗೆ ಅಲ್ಪಸ್ವಲ್ಪ ಪ್ರಮಾಣದ ನೀರು ಸಿಗುತ್ತಿದ್ದರೆ, ಮತ್ತೆ ಹಲವರಿಗೆ ನೀರೇ ಸಿಗದಂತಾಗಿದೆ. ಸಂಕಷ್ಟ ಕಾಲದಲ್ಲಿ ದೇವರೂ ಕೈ ಹಿಡಿಯುತ್ತಿಲ್ಲವೆಂಬ ನಿರಾಸೆ ರೈತರನ್ನು ಕಾಡಲಾರಂಭಿಸಿದೆ.
ಕೊಳವೆಬಾವಿ ನಿರ್ಮಾಣ ದಂಧೆ:ಬೋರ್ ವೆಲ್ಗಳನ್ನು ನಿರ್ಮಿಸುವುದು ಬರಗಾಲದಲ್ಲಿ ದಂಧೆಯಾಗಿ ಮಾರ್ಪಟ್ಟಿದೆ. ರೈತರಿಂದ ಹೆಚ್ಚು ಹಣ ವಸೂಲಿ ಮಾಡುವುದರೊಂದಿಗೆ ಶೋಷಣೆಗೆ ಗುರಿಪಡಿಸುತ್ತಿದ್ದಾರೆ. ಸ್ಥಳೀಯವಾಗಿ ಕೊಳವೆಬಾವಿ ನಿರ್ಮಿಸುವವರ ಜೊತೆಗೆ ತಮಿಳುನಾಡಿನಿಂದಲೂ ಕೊಳವೆ ಬಾವಿ ನಿರ್ಮಿಸುವ ಸಾಕಷ್ಟು ಲಾರಿಗಳು ಬಂದಿವೆ. ಕೊಳವೆಬಾವಿಗಳಿಗೆ ಸಾಕಷ್ಟು ಬೇಡಿಕೆ ಇರುವುದರಿಂದ ಹಗಲು-ರಾತ್ರಿ ಎನ್ನದೆ ಬೋರ್ವೆಲ್ಗಳ ನಿರ್ಮಾಣದಲ್ಲಿ ತೊಡಗಿದ್ದಾರೆ.
ಕೊಳವೆ ಬಾವಿಗಳ ನಿರ್ಮಾಣಕ್ಕೆ ತಗುಲುವ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ. ಪ್ರತಿ ಅಡಿಗೆ ಕನಿಷ್ಠ ೯೫ ರು.ನಿಂದ ೧೧೫ ರು. ನಿಗದಿ ಪಡಿಸಲಾಗುತ್ತಿದೆ. ಕೇಸಿಂಗ್ ಪೈಪ್ಗಳು, ಮೋಟಾರ್, ವೈರ್ಗಳ ಬೆಲೆ ದುಬಾರಿಯಾಗಿವೆ. ಒಂದು ಕೊಳವೆಬಾವಿ ನಿರ್ಮಾಣಕ್ಕೆ ಪ್ರಸ್ತುತ ಕನಿಷ್ಠ ೨ ಲಕ್ಷ ರು.ವರೆಗೆ ಖರ್ಚಾಗುತ್ತಿದೆ. ಆದರೂ ರೈತರು ಕೃಷಿ ಚಟುವಟಿಕೆಗೆ ನೀರಿನ ವ್ಯವಸ್ಥೆ ಮಾಡಲು ಸಾಲವನ್ನೂ ಲೆಕ್ಕಿಸದೆ ನಿರಂತರವಾಗಿ ಶ್ರಮವಹಿಸುತ್ತಿದ್ದಾರೆ.ಏಕರೂಪ ದರ ನಿಗದಿ ಇಲ್ಲ:
ಕೊಳವೆ ಬಾವಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಏಕರೂಪವಾದ ದರ ನಿಗದಿಯಾಗಿಲ್ಲ. ಬೋರ್ವೆಲ್ಗಳ ಮಾಲೀಕರು ನಿಗದಿಪಡಿಸಿದ ದರವೇ ಅಂತಿಮ. ಕೆಲವರು ಚೌಕಾಸಿ ವ್ಯಾಪಾರಕ್ಕೂ ಇಳಿಯದೆ ಹೇಳಿದಷ್ಟು ದರ ಕೊಟ್ಟರಷ್ಟೇ ಬೋರ್ವೆಲ್ ನಿರ್ಮಿಸುತ್ತೇವೆ ಎಂದು ನೇರವಾಗಿಯೇ ಹೇಳುತ್ತಿದ್ದಾರೆ. ಆ ಸಮಯದಲ್ಲಿ ವಿಧಿ ಇಲ್ಲದೇ, ಕೇಳಿದಷ್ಟು ದುಡ್ಡು ಕೊಟ್ಟು ಕೊಳವೆ ಬಾವಿ ನಿರ್ಮಿಸುವಂತಹ ಅನಿವಾರ್ಯತೆ ರೈತರದ್ದಾಗಿದೆ.ಮಂಡ್ಯ ಜಿಲ್ಲೆಯೊಳಗೆ ಕೊಳವೆ ಬಾವಿಗಳ ನಿರ್ಮಾಣಕ್ಕೆ ಪರವಾನಗಿ ತೆಗೆದುಕೊಂಡಿರುವವರು ಕೇವಲ ಬೆರಳೆಣಿಕೆಯಷ್ಟಿದ್ದಾರೆ. ಉಳಿದವರೆಲ್ಲರೂ ಅಕ್ರಮವಾಗಿ ಲಾರಿಗಳನ್ನು ಇಟ್ಟುಕೊಂಡು ಕೊಳವೆಬಾವಿ ನಿರ್ಮಿಸುತ್ತಿದ್ದಾರೆ. ಒಂದು ತಾಲೂಕಿನಲ್ಲಿ ಕನಿಷ್ಠ ೫ ರಿಂದ ೮ ಲಾರಿಗಳಿವೆ. ಉಳಿದ ಲಾರಿಗಳು ತಮಿಳುನಾಡು, ಉತ್ತರ ಕರ್ನಾಟಕ ಭಾಗದಿಂದ ಇಲ್ಲಿಗೆ ಬರುತ್ತಿವೆ. ಇವುಗಳಿಗೆ ಕಡಿವಾಣ ಹಾಕುವವರೇ ಇಲ್ಲವಾಗಿದೆ.
ನಿದ್ರಾವಸ್ಥೆಯಲ್ಲಿರುವ ಅಂತರ್ಜಲ ಇಲಾಖೆ:ಬರಗಾಲದ ಸಮಯದಲ್ಲಿ ಕೊಳವೆಬಾವಿ ನಿರ್ಮಾಣದ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಬೇಕಾದ ಅಂತರ್ಜಲ ಇಲಾಖೆ ನಿದ್ರಾವಸ್ಥೆಯಲ್ಲಿದೆ. ಮಳೆಯ ಕೊರತೆ, ನೀರಿನ ಅಭಾವ, ಬಿರುಬೇಸಿಗೆಯ ಸಮಯದಲ್ಲಿ ಅಂತರ್ಜಲ ಮಟ್ಟ ಈಗ ಎಷ್ಟು ಆಳಕ್ಕೆ ಕುಸಿದಿದೆ. ಈ ಸಮಯದಲ್ಲಿ ಕೊಳವೆಬಾವಿ ಕೊರೆಸುವುದು ಉತ್ತಮವೇ, ಇಲ್ಲವೇ, ಎಂಬ ಬಗ್ಗೆ ತಿಳಿವಳಿಕೆ ನೀಡದೆ ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಕುಳಿತಿದೆ.
ಅಧಿಕೃತವಾಗಿ ಪರವಾನಗಿ ಇರುವವರು ಮಾತ್ರ ನಿಯಮಾನುಸಾರ ಬೋರ್ವೆಲ್ ಕೊರೆಯುವುದಕ್ಕೆ ಅವಕಾಶವಿದೆ ಕೊಳವೆ ಬಾವಿಗಳ ನಿರ್ಮಾಣಕ್ಕೆ ಅಧಿಕೃತವಾಗಿ ಪರವಾನಗಿ ತೆಗೆದುಕೊಂಡಿರುವವರೆಷ್ಟು, ಅನಧಿಕೃತವಾಗಿ ಕೊಳವೆ ಬಾವಿಗಳನ್ನು ಎಷ್ಟು ಮಂದಿ ನಿರ್ಮಿಸುತ್ತಿದ್ದಾರೆ. ಇದರ ಬಗ್ಗೆ ಗಮನಹರಿಸಿ ಅಕ್ರಮವಾಗಿ ಕೊಳವೆಬಾವಿ ನಿರ್ಮಿಸುವವರಿಗೆ ೫೦ ಸಾವಿರ ರು.ವರೆಗೆ ದಂಡ ವಿಧಿಸುವುದಕ್ಕೆ ಅವಕಾಶವಿದ್ದರೂ ಅದನ್ನು ಪಾಲಿಸುತ್ತಿಲ್ಲ. ಹೀಗಾಗಿ ಬೋರ್ವೆಲ್ ನಿರ್ಮಿಸುವವರನ್ನು ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ. ಬೋರ್ವೆಲ್ ನಿರ್ಮಾಣದ ಹೆಸರಿನಲ್ಲಿ ಹಗಲುದರೋಡೆ ನಡೆಸಲಾಗುತ್ತಿದ್ದರೂ ಅವರನ್ನು ಪ್ರಶ್ನಿಸುವವರೇ ಇಲ್ಲದಿರುವುದರಿಂದ ರೈತರು ಶೋಷಣೆಗೆ ಗುರಿಯಾಗುತ್ತಿದ್ದಾರೆ.ಕೊಳವೆಬಾವಿಗಳ ನಿರ್ಮಾಣಕ್ಕೆ ಏಕರೂಪ ದರ ನಿಗದಿಪಡಿಸಲು ಅವಕಾಶವಿದೆಯೇ, ಇಲ್ಲವೇ ಎಂಬ ಬಗ್ಗೆ ಪರಿಶೀಲಿಸುತ್ತೇನೆ. ಅಂತರ್ಜಲ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಭೆ ನಡೆಸಿ ಮಾಹಿತಿ ಸಂಗ್ರಹಿಸುತ್ತೇನೆ. ಅಧಿಕೃತ ಪರವಾನಗಿ ಇರುವವರು ಮಾತ್ರ ಕೊಳವೆಬಾವಿ ನಿರ್ಮಿಸಬೇಕು. ಅಕ್ರಮವಾಗಿ ನಿರ್ಮಿಸುವವರಿಗೆ ಕಡಿವಾಣ ಹಾಕಲಾಗುವುದು.
- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ