ವಿ.ಕೃ. ಗೋಕಾಕ್ ಇಂದಿನ ಪೀಳಿಗೆಗೆ ಗೊತ್ತೇ ಇಲ್ಲ: ಸಿಎನ್ ಮಂಜೇಗೌಡ

KannadaprabhaNewsNetwork | Updated : Jan 14 2024, 03:59 PM IST

ಸಾರಾಂಶ

ವಿ.ಕೃ. ಗೋಕಾಕ್ ಅವರು ಇಂದಿನ ಪೀಳಿಗೆಗೆ ಗೊತ್ತೇ ಇಲ್ಲ. ಮುಂದಿನ ದಿನಗಳಲ್ಲಿ ಇಂಥ ಮಹನೀಯರ ಕಾರ್ಯಕ್ರಮವನ್ನು ಹೆಚ್ಚಾಗಿ ನಡೆಯಲಿ ಎಂದು ವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ವಿ.ಕೃ. ಗೋಕಾಕ್ ಅವರು ಇಂದಿನ ಪೀಳಿಗೆಗೆ ಗೊತ್ತೇ ಇಲ್ಲ. ಮುಂದಿನ ದಿನಗಳಲ್ಲಿ ಇಂಥ ಮಹನೀಯರ ಕಾರ್ಯಕ್ರಮವನ್ನು ಹೆಚ್ಚಾಗಿ ನಡೆಯಲಿ ಎಂದು ವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.

ನಗರದ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೈಸೂರು ಕನ್ನಡ ವೇದಿಕೆಯು ಆಯೋಜಿಸಿದ್ದ ಕನ್ನಡ ನಿತ್ಯೋತ್ಸವ ಕಾರ್ಯಕ್ರಮ, ವಿ.ಕೃ. ಗೋಕಾಕ್ ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಕಾಲೇಜಿನಲ್ಲಿದ್ದಾಗ ಈ ಹೋರಾಟ ಉಗ್ರವಾಗಿ ನಡೆಯುತ್ತಿತ್ತು. 

ಆಗ ಡಾ. ರಾಜಕುಮಾರ್ ಹೋರಾಟದ ಸಾರಥ್ಯವನ್ನು ತೆಗೆದುಕೊಂಡಿದ್ದರು. ನಮಗೆ ಸಿನಿಮಾ ನಟರನ್ನು ನೋಡುವುದೇ ಒಂದು ಭಾಗ್ಯ. ನಾವೆಲ್ಲ ಹುಡುಗರು ಮೆರವಣಿಗೆ ಮತ್ತು ಸಭೆ ನಡೆಯುವ ಜಾಗಕ್ಕೆ ಹೋಗಿ ನಟರನ್ನು ನೋಡಿ ಸಂತೋಷ ಪಡುತ್ತಿದ್ದವು. ನಂತರ ನಮಗೆ ಮಾತೃಭಾಷೆ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಅಭಿಮಾನ ಹೆಚ್ಚಿತು ಎಂದರು.

ಹಿರಿಯ ಪತ್ರಕರ್ತ ಗೌರಿ ಸತ್ಯ ಮಾತನಾಡಿ, 1982- 83ರಲ್ಲಿ ಕರ್ನಾಟಕ ಸರ್ಕಾರ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗೆ ಹೆಚ್ಚು ಕೊಡುತ್ತಿತ್ತು. ಕೆಲವು ಸರ್ಕಾರದ ಕೆಲಸಗಳಿಗೆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಈ ಭಾಷೆಯಲ್ಲಿ ಪ್ರಕಟವಾಗುತ್ತಿದ್ದವು. 

ಇದರಿಂದ ಬೇರೆ ರಾಜ್ಯದವರಿಗೆ ಅನುಕೂಲವಾಗುತಿತ್ತು. ಕನ್ನಡದವರು ಬೆರಳಷ್ಟು ಜನ ಮಾತ್ರ ಆಯ್ಕೆಯಾಗುತ್ತಿದ್ದರು. ಆಗ ಹಿರಿಯ ಸಾಹಿತಿ ವಿ.ಕೃ. ಗೋಕಾಕ್ ಅವರು ಸರ್ಕಾರದ ವಿರುದ್ಧ ಮಾತೃಭಾಷೆಗೆ ಆದ್ಯತೆ ನೀಡಿ ಎಂದು ಧ್ವನಿಯೆತ್ತಿದ್ದರು ಎಂದು ಸ್ಮರಿಸಿದರು.

ಸಮಾಜ ಸೇವಕ ಕೆ. ರಘುರಾಂ ಮಾತನಾಡಿ, ಗೋಕಾಕ್ ಚಳವಳಿ ಆರಂಭದಲ್ಲಿ ಕೇವಲ ಬೆರಳಣಿಕೆಯಷ್ಟು ಜನ ಮಾತ್ರ ಭಾಗವಹಿಸುತ್ತಿದ್ದರು. ಡಾ. ರಾಜಕುಮಾರ್ ಅವರು ಬಂದ ನಂತರ ಈ ಹೋರಾಟಕ್ಕೆ ಪುಷ್ಟಿ ಬಂದಂತಾಯಿತು ಎಂದು ಹೇಳಿದರು.

ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ರಾಮೇಗೌಡ, ಮೂಗೂರು ನಂಜುಂಡಸ್ವಾಮಿ, ಮಹದೇವಸ್ವಾಮಿ, ನಾಗೇಶ್, ಗೌರಿ ಸತ್ಯ, ಕೆ. ರಘುರಾಂ, ಎಸ್. ಗುರು ಮತ್ತು ಪ್ರದೀಪ್ ಅವರಿಗೆ ವಿ.ಕೃ. ಗೋಕಾಕ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಪದಾಧಿಕಾರಿಗಳಾದ ರವಿ ನಾಲಬೀದಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಮನೋಹರ್, ಬಾಬು, ಮಾದಪ್ಪ, ಕಾವೇರಮ್ಮ, ಹರೀಶ್ ಕುಮಾರ್ ಮೊದಲಾದವರು ಇದ್ದರು.

Share this article