ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಇಂಡಿಯಾನಾ ಆಸ್ಪತ್ರೆಯಲ್ಲಿ ಮಂಗಳೂರು ನಗರದ ಮೊಟ್ಟಮೊದಲ ಯಶಸ್ವಿ ವಿಶಿಷ್ಟ ಹೃದಯ ಕವಾಟ ‘ವಾಲ್ವ್ ಇನ್ ವಾಲ್ವ್’ ಟಿಎವಿಆರ್ ಚಿಕಿತ್ಸೆ ನಡೆಸಲಾಗಿದೆ ಎಂದು ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸಿಟ್ಯೂಟ್ನ ಚೀಫ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ಎಂಡಿ ಡಾ. ಯೂಸೂಫ್ ಕುಂಬ್ಳೆ ತಿಳಿಸಿದರು.ತೀವ್ರವಾದ ಆಯೊರ್ಟಿಕ್ ವಾಲ್ವ್ ರೋಗ ಹೊಂದಿರುವ ರೋಗಿಗಳಿಗೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮೂಲಕ ವಾಲ್ವ್ ಬದಲಾವಣೆ ಮಾಡಲಾಗುತ್ತದೆ. ಆದರೆ 10-15 ವರ್ಷಗಳಲ್ಲಿ ಆ ವಾಲ್ವ್ಗಳು ಕುಗ್ಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ವಾಲ್ವ್ ಬದಲಿಸಲು ಮತ್ತೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಅಗತ್ಯವಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೂತನ ತಂತ್ರಜ್ಞಾನ ವಾಲ್ವ್ ಇನ್ ವಾಲ್ವ್ ಟಿಎವಿಆರ್ ಬಹುಮಟ್ಟಿಗೆ ಸುರಕ್ಷಿತವಾದ ಆಯ್ಕೆ. ಇದರಲ್ಲಿ ಹಳೆಯ ವಾಲ್ವ್ ಒಳಗೆ ಕೆಥೆಟೇರ್ ಮೂಲಕ ಹೊಸ ವಾಲ್ವ್ನ್ನು ಸ್ಥಾಪಿಸಲಾಗುತ್ತದೆ. ಈ ವಿಧಾನ ಸಾಮಾನ್ಯ ಟಿಎವಿಆರ್ಗಿಂತ ಹೆಚ್ಚು ಜಟಿಲ ಹಾಗೂ ಹೆಚ್ಚಿನ ತಾಂತ್ರಿಕ ನಿಪುಣತೆ ಅಗತ್ಯವಿದೆ ಎಂದು ಡಾ.ಯೂಸುಫ್ ಕುಂಬ್ಳೆ ತಿಳಿಸಿದರು. ಗಂಭೀರ ಸ್ಥಿತಿಯ ರೋಗಿಗೆ ಚಿಕಿತ್ಸೆ:ಸುಮಾರು 110 ಕೆಜಿ ತೂಕದ ಮಧುಮೇಹ, ರಕ್ತದೊತ್ತಡ, ಹೃದಯಾಘಾತ ಮುಂತಾದ ಹಲವಾರು ಸಮಸ್ಯೆಗಳುಳ್ಳ 72 ವರ್ಷದ ರೋಗಿಯೊಬ್ಬರು 20 ವರ್ಷದ ಹಿಂದೆ ಕೊಚ್ಚಿಯಲ್ಲಿ ಎಸ್ಎವಿಆರ್ ಚಿಕಿತ್ಸೆಗೆ ಒಳಗಾಗಿದ್ದರು. ಪ್ರಸ್ತುತ ಹೃದಯ ವಿಫಲತೆಯ ಲಕ್ಷಣದೊಂದಿಗೆ ಇಂಡಿಯಾನಾ ಆಸ್ಪತ್ರೆಗೆ ಆಗಮಿಸಿದ್ದರು. ರೋಗಿಗೆ ವಾಲ್ವ್ ಸಮಸ್ಯೆ ಜತೆಗೆ ಪ್ರಮುಖ ರಕ್ತನಾಳಗಳ ಅಡಚಣೆಯೂ ತಪಾಸಣೆಯಲ್ಲಿ ಪತ್ತೆಯಾಗಿತ್ತು. ಮೊದಲು ಆಂಜಿಯೋಪ್ಲಾಸ್ಟಿ ನಡೆಸಿ ಪ್ರಮುಖ ರಕ್ತನಾಳಗಳ ಅಡಚಣೆಗೆ ಚಿಕಿತ್ಸೆ ನೀಡಲಾಯಿತು. ಬಳಿಕ ವಾಲ್ವ್ ಇನ್ ವಾಲ್ವ್ ಟಿಎವಿಆರ್ ಪ್ರಕ್ರಿಯೆ ಯಶಸ್ವಿಯಾಗಿ ನಡೆಸಲಾಯಿತು ಎಂದು ಅವರು ವಿವರಿಸಿದರು.ಅದೇ ದಿನ 80 ವರ್ಷದ ಮಹಿಳೆಗೂ ವಾಲ್ವ್ ಇನ್ ವಾಲ್ವ್ ಟಿಎವಿಆರ್ ಪ್ರಕ್ರಿಯೆ ನಡೆಸಲಾಯಿತು. 20 ವರ್ಷದ ಹಿಂದೆ ವಾಲ್ವ್ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಮಹಿಳೆ ಮತ್ತೆ ಹೃದಯ ವಿಫಲತೆಯಿಂದ ಬಳಲುತ್ತಿದ್ದರು. ಆ ಮೂಲಕ ಇಂಡಿಯಾನಾ ಆಸ್ಪತ್ರೆ ಈಗ ಟಿಎವಿಆರ್/ ಟಿಎವಿಐ ಮತ್ತು ಸ್ಟ್ರಕ್ಚುರಲ್ ಹಾರ್ಟ್ ಕೇರ್ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವಾಗಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು.ಇಂಡಿಯಾನಾ ಆಸ್ಪತ್ರೆ ಮಾರುಕಟ್ಟೆ ಸಲಹೆಗಾರ ಶಿವಪ್ರಸಾದ್ ಶೆಟ್ಟಿ ಇದ್ದರು.