ಕನ್ನಡಪ್ರಭವಾರ್ತೆ ಗುಳೇದಗುಡ್ಡ
ವೀಣಕ್ಕ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ಅವರು ನನ್ನ ಅಕ್ಕನ ಸಮಾನ. ಇನ್ಮುಂದೆ ಗುಳೇದಗುಡ್ಡಕ್ಕೆ ಪ್ರಚಾರಕ್ಕೆ ಬರುವಾಗ ಅವರ ಜೊತೆ ಬರುವೆ ಎಂದು ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.ಅವರು ಸೋಮವಾರ ಪಟ್ಟಣದ ಅಂಬಾಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ನಂತರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ವೀಣಾ ಕಾಶಪ್ಪನವರ ಅವರಲ್ಲಿ ಯಾವುದೇ ಅಸಮಾಧಾನ, ಭಿನ್ನಾಭಿಪ್ರಾಯವಿಲ್ಲ. ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುವ ಅವರು, ನನ್ನ ಗೆಲುವಿಗೆ ಜೊತೆಗೂಡಿ ಶ್ರಮಿಸಲಿದ್ದಾರೆ. ನಮ್ಮಲ್ಲಿ ಯಾವ ಭಿನ್ನಾಭಿಪ್ರಾಯಗಳಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ನೀಡಿ ಮಹಿಳೆಯರಿಗೆ, ಬಡವರಿಗೆ, ಹಿಂದುಳಿದವರಿಗೆ ಸಾಕಷ್ಟು ಅನುಕೂಲ ಮಾಡಿದೆ. ಕಾಂಗ್ರೆಸ್ ಜನಪರ ಪಕ್ಷ ಎಂಬುದು ಮತದಾರರಿಗೆ ಗೊತ್ತಿದೆ. ಮತದಾರರು ಈ ಬಾರಿ ನನ್ನನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಗುರುಸಿದ್ದೇಶ್ವರ ಮಠ, ಅಂಬಾಭವಾನಿ ದೇವಸ್ಥಾನ, ಅಕ್ಕಮಹಾದೇವಿ ಗುಡಿ ಹಾಗೂ ಕೆಲ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಚರ್ಚಿಸಿದರು. ಈ ಸಂದರ್ಭಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಪಕ್ಷದ ಪ್ರಮುಖ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಪರಿಚಯ ಮಾಡಿಕೊಟ್ಟರು. ಮುಖಂಡ ಪ್ರಕಾಶ ಮುರಗೋಡ, ರವಿ ಕಲಬುರ್ಗಿ, ರಾಜು ಸಂಗಮ, ವಿನೋದ ಮದ್ದಾನಿ, ಪುರಸಭೆ ಮಾಜಿ ಅಧ್ಯಕ್ಷೆ ಯಲ್ಲವ್ವ ಗೌಡರ, ವೈ.ಆರ್. ಹೆಬ್ಬಳ್ಳಿ, ರಾಜು ಜವಳಿ, ಯಲ್ಲಪ್ಪ ಮನ್ನಿಕಟ್ಟಿ ಸೇರಿದಂತೆ ಇನ್ನಿತರರು ಇದ್ದರು.ತಂದೆ-ಮಗಳ ಭೇಟಿ:ಭಾನುವಾರ ಸಚಿವ ಶಿವಾನಂದ ಪಾಟೀಲ, ಸೋಮವಾರ ಮಗಳು ಸಂಯುಕ್ತಾ ಪಾಟೀಲ ಗುಳೇದಗುಡಕ್ಕೆ ಭೇಟಿ ನೀಡಿ, ಮಿಂಚಿನ ಸಂಚಾರ ನಡೆಸಿದರು. ಶಿವಾನಂದ ಪಾಟೀಲ ಸದ್ದು ಗದ್ದಲವಿಲ್ಲದೇ ಭಾನುವಾರ ರಾತ್ರಿ ಕಾರ್ಯಕರ್ತರ ಸಭೆ ನಡೆಸಿದರು. ಅವರ ಮಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಗುಳೇದಗುಡ್ಡದ ಮಠ, ದೇವಾಲಯ ಹಾಗೂ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿದರು.