ಧಾರವಾಡ : ಬೆಳಗಾವಿಯಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 1 ಟನ್ ಗೋಮಾಂಸವನ್ನು ಬಜರಂಗದಳದ ಕಾರ್ಯಕರ್ತರು ಪತ್ತೆ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಶನಿವಾರ ರಾತ್ರಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಮೂಲಕ ಗೂಡ್ಸ್ ವಾಹನದಲ್ಲಿ ಈ ಗೋಮಾಂಸ ಸಾಗಿಸಲಾಗುತ್ತಿತ್ತು. ಬೆಳಗಾವಿಯಿಂದ ಮಂಗಳೂರಿಗೆ ಇದನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು, ನರೇಂದ್ರ ಬೈಪಾಸ್ನಿಂದ ವಾಹನದ ಬೆನ್ನು ಹತ್ತಿದರು. ಆದರೆ, ವಾಹನದ ಚಾಲಕ ಅತಿ ವೇಗವಾಗಿ ವಾಹನ ಚಲಾಯಿಸಿ, ಮನಸೂರ ರಸ್ತೆವರೆಗೂ ಆಗಮಿಸಿ, ಕೊನೆಗೆ ಭಯದಿಂದ ವಾಹನವನ್ನು ರಸ್ತೆ ಪಕ್ಕದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಇಡೀ ವಾಹನದಲ್ಲಿ ಅಕ್ರಮ ಗೋಮಾಂಸ ತುಂಬಿಸಲಾಗಿತ್ತು. ತಪಾಸಣೆ ಸಮಯದಲ್ಲಿ ಗೊತ್ತಾಗದಿರಲಿ ಎಂಬ ಕಾರಣಕ್ಕೆ ಮುಂದಿನ ಒಂದೆರಡು ಸಾಲಿನಲ್ಲಿ ಮೀನುಗಳನ್ನು ಇಡಲಾಗಿತ್ತು. ತಕ್ಷಣವೇ ಈ ಬಗ್ಗೆ ಬಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ವಾಹನ ಹಾಗೂ ಒಂದು ಟನ್ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಗೆ ಗೊತ್ತಾಯ್ತು?
- ಶನಿವಾರ ತಡರಾತ್ರಿ ಬೆಳಗಾವಿಯಿಂದ ಮಂಗಳೂರಿಗೆ ಅಕ್ರಮವಾಗಿ ಗೋಮಾಂಸ ಸಾಗಣೆ
- ಬಜರಂಗದಳ ಕಾರ್ಯಕರ್ತರಿಗೆ ಖಚಿತ ಮಾಹಿತಿ. ವಾಹನದ ಬೆನ್ನುಹತ್ತಿದ ಕಾರ್ಯಕರ್ತರು
- ಹುಬ್ಬಳ್ಳಿ- ಧಾರವಾಡ ಬೈಪಾಸ್ ರಸ್ತೆಯಲ್ಲಿ ಚೇಸ್. ವಾಹನ ಬಿಟ್ಟು ಪರಾರಿಯಾದ ಚಾಲಕ
- ತಪಾಸಣೆ ವೇಳೆ ಬಚಾವಾಗಲು ಮೊದಲ 2 ಸಾಲಿನಲ್ಲಿ ಮೀನು ತುಂಬಿದ್ದ ಸಾಗಣೆದಾರರು
- ಸ್ಥಳಕ್ಕೆ ಆಗಮಿಸಿ ಒಂದು ಒಂದು ಟನ್ ಗೋಮಾಂಸವನ್ನು ಜಪ್ತಿ ಮಾಡಿದ ಪೊಲೀಸರು