ಬೆಳಗಾವಿ : ಸುವರ್ಣ ವಿಧಾನಸೌಧದಲ್ಲಿ ಡಿ.9ರಿಂದ ನಡೆಯುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ ತಟ್ಟಲಿದೆ. ಅಧಿವೇಶನದ ಮೊದಲ ದಿನವೇ ರೈತಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಸಂಘಟನೆಗಳು ಸದನದ ಹೊರಗೆ ಸರ್ಕಾರದ ವಿರುದ್ಧ ಹೋರಾಟಕ್ಕೆ ಅಣಿಯಾಗಿವೆ.
ರೈತಪರ ಸಂಘಟನೆಗಳು ಸೇರಿ 11 ವಿವಿಧ ಸಂಘಟನೆಗಳಿಂದ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಲಿವೆ. ಪ್ರತಿಭಟನೆಗಳಿಗೆ ಸ್ಥಳಗಳನ್ನು ಗುರುತಿಸಿರುವ ಜಿಲ್ಲಾಡಳಿತ,ಅಲ್ಲಿ ಟೆಂಟ್ ನಿರ್ಮಿಸಿದೆ. ಕೊಂಡಸಕೊಪ್ಪ ಬಳಿಯ ಟೆಂಟ್ನಲ್ಲಿ 3 ಮತ್ತು ಸುವರ್ಣ ಗಾರ್ಡನ್ ಟೆಂಟ್ಗಳಲ್ಲಿ 8 ಹೀಗೆ ಒಟ್ಟು 11 ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಿವೆ.
ಕಬ್ಬಿನ ದರ ನಿಗದಿ ಮಾಡುವುದು, ವಕ್ಫ್ ಮಂಡಳಿ ವಿರೋಧಿಸಿ, ಖಾನಾಪುರ ತಾಲೂಕಿನ ರೈತರಿಗಾಗಿ ಮಲಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು. ಕುಡಿಯುವ ನೀರಿಗಾಗಿ ಶಾಶ್ವತ ಪರಿಹಾರ ಯೋಜನೆ ಜಾರಿಗೊಳಿಸಬೇಕು. ಕಬ್ಬು ಸಾಗಿಸುವ ವಾಹನಗಳಿಗೆ ಟೋಲ್ನಾಕಾಗಳಲ್ಲಿ ಉಚಿತ ಪ್ರವೇಶ ಕಲ್ಪಿಸಬೇಕು. ಪ್ರತಿ ಟನ್ ಕಬ್ಬಿಗೆ ₹4500 ದರ ನಿಗದಿ ಮಾಡಬೇಕು.ಕಳಸಾ-ಬಂಡೂರಾ ನಾಲಾ ಯೋಜನೆ ಅನುಷ್ಠಾನಗೊಳಿಸಬೇಕು ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಸುವಂತೆ ಮೂರು ರೈತಪರ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲಿವೆ.
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಅಕ್ರಮ ನೇಮಕಾತಿ ಹಗರಣದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಬನಶಂಕರಿ ಪ್ರತಿಭಟಿಸಿ,ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಎಸ್ಆರ್ಟಿಸಿ ನಿಗಮದ ಲೇಬರ್ ಅಸೋಸಿಯೇಶನ್ ಜಂಟಿ ಕ್ರಿಯಾಸಮಿತಿ, ಮುಂಡರಗಿ ತಾಲೂಕು ಫೋರಂ , ಅಕ್ಕಾ ಫೌಂಡೇಶನ್ ಟ್ರಸ್ಟ್, ಹುಬ್ಬಳ್ಳಿ-ಧಾರವಾಡ ವಾರ್ಡ ಸಮಿತಿ ಬಳಗ, ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಹಾಗೂ ಕರ್ನಾಟಕ ಸ್ಟೇಟ್ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ,ಬಿಬಿಎಂಪಿ ಲೈಬ್ರರಿ ಸೂಪರ್ವೈಸರ್ಸ್ ಅಸೋಸಿಯೇಶನ್ ಗಳು ಪ್ರತಿಭಟನೆ ನಡೆಸಲಿವೆ.