ಮಂತ್ರಾಲಯ ಶ್ರೀಗಳ 12ನೇ ಚಾತುರ್ಮಾಸ್ಯ ವ್ರತ ಸಂಪನ್ನ

KannadaprabhaNewsNetwork | Published : Sep 19, 2024 1:45 AM

ಸಾರಾಂಶ

12th Chaturmasya Vrat Sampanna of Mantralaya Shri

-ಚಾತುರ್ಮಾಸ್ಯ ಸಮಾರೋಪ ಸಮಾರಂಭದ ಪ್ರಯುಕ್ತ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

---

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಶ್ರೀಪಾದಂಗಳವರ 12ನೇ ಚಾತುರ್ಮಾಸ್ಯ ವ್ರತಾಚರಣೆ ಬುಧವಾರ ಸಂಪನ್ನಗೊಂಡಿತು.

ಚಾತುರ್ಮಾಸ್ಯ ಸಮಾರೋಪ ಸಮಾರಂಭದ ಪ್ರಯುಕ್ತ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಇದೇ ವೇಳೆ ಶ್ರೀಗಳು ಶ್ರೀಗುರುರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ನಂತರ ಬ್ರಹ್ಮ ಕರಾರ್ಚಿತ ಮೂಲ ರಾಮದೇವರ ಸಂಸ್ಥಾನ ಪೂಜೆ ಜೊತೆಗೆ ಎಲ್ಲ ಯತಿಗಳ ಬೃಂದಾವನಗಳಿಗೆ ಪೂಜೆಯನ್ನು ನೆರವೇರಿಸಿದರು.

ಸಂಜೆ ಊರಹೊರಕಡೆಯ ಕೊಂಡಾಪುರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಶ್ರೀಗಳನ್ನು ಡೋಲಿಯಲ್ಲಿ ಕರೆದೊಯ್ಯಯುವುದರ ಮುಖಾಂತರ ಶ್ರೀಗಳು ಸೀಮೋಲ್ಲಂಘನ ಮಾಡಿದರು. ಇದೇ ವೇಳೆ ಮುಖ್ಯಪ್ರಾಣದೇವರಿಗೆ ಪೂಜೆ ಸಲ್ಲಿಸಿ ವಾಪಸ್ಸಾದ ಶ್ರೀಗಳನ್ನು ಮೆರವಣಿಗೆ ಮೂಲಕ ಮಠಕ್ಕೆ ಬರಮಾಡಿಕೊಳ್ಳಲಾಯಿತು. ಈ ಮೂಲಕ ಶ್ರೀಗಳು ವ್ರತಾಚರಣೆ ಸಂಪನ್ನಗೊಳಿಸಿದರು.

ಚಾತುರ್ಮಾಸ್ಯದ ಪ್ರಯುಕ್ತ ಮಠದಲ್ಲಿ ಶ್ರೀಮನ್ಯಾಯಸುಧಾ, ತಾತ್ಪಾರ್ಯ ಚಂದ್ರಿಕಾ ಸೇರಿದಂತೆ ವಿವಿಧ ಧಾರ್ಮಿಕ ಗ್ರಂಥಗಳ ಪ್ರವಚನ ನಡೆಯಿತು. ಭಕ್ತರಿಂದ ಶ್ರೀಗಳಿಗೆ ಪಾದಪೂಜೆ, ಶ್ರೀಗಳಿಂದ ಸಂಸ್ಥಾನಪೂಜೆ, ಭಕ್ತರಿಗೆ ಮುದ್ರಾಧಾರಣೆಯಂಥ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಶ್ರೀಮದ್ಭಾಗತ ಸಪ್ತಾಹ ಮಂಗಲ ಮಾಡಲಾಯಿತು. ಬಳಿಕ ಭಕ್ತರು ಶ್ರೀಗಳಿಗೆ ಪುಷ್ಪವೃಷ್ಟಿ ಮಾಡಿ, ತುಲಾಭಾರ ಸೇವೆ ನೆರವೇರಿಸಿದರು. ಬಳಿಕ ಶ್ರೀಗಳು ಅನುಗ್ರಹ ಸಂದೇಶ ನೀಡಿ ಭಕ್ತರಿಗೆ ಫಲ ಮಂತ್ರಾಕ್ಷತೆ ವಿತರಿಸಿ ಆಶೀರ್ವದಿಸಿದರು.

--------------------

18ಕೆಪಿಆರ್‌ಸಿಆರ್ 05:ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಮ್ಮ 12ನೇ ಚಾತುರ್ಮಾಸ್ಯ ವ್ರತಾಚರಣೆಯನ್ನು ಬುಧವಾರ ಸಂಪನ್ನಗೊಳಿಸಿದರು.

18ಕೆಪಿಆರ್‌ಸಿಆರ್ 06 :ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಸೀಮೋಲ್ಲಂಗನೆ ಮಾಡುವುದರ ಮುಖಾಂತರ ತಮ್ಮ 12ನೇ ಚಾತುರ್ಮಾಸ್ಯ ವ್ರತಾಚರಣೆಯನ್ನು ಸಂಪನ್ನಗೊಳಿಸಿದರು.

Share this article