ಅಲ್ಪಸಂಖ್ಯಾತರ ಶೇ.15 ಮೀಸಲಾತಿಗೆ ಬಿಡಲ್ಲ

KannadaprabhaNewsNetwork |  
Published : Jun 26, 2025, 01:32 AM IST
ಪೋಟೋ: 25ಎಸ್‌ಎಂಜಿಕೆಪಿ04ಶಿವಮೊಗ್ಗದ ರಾಷ್ಟ್ರಭಕ್ತ ಬಳಗದಿಂದ ಬುಧವಾರ ರಾಜ್ಯದ ವಸತಿ ಯೋಜನೆಗಳಲ್ಲಿ ಅಸಂವಿಧಾನಿಕವಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಿಸಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಪ್ರಾಣ ಹೋದರೂ ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.15 ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ತೀರ್ಮಾನವನ್ನು ಜಾರಿಯಾಗಲು ಬಿಡುವುದಿಲ್ಲ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಗುಡುಗಿದರು.

ಶಿವಮೊಗ್ಗ: ಪ್ರಾಣ ಹೋದರೂ ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.15 ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ತೀರ್ಮಾನವನ್ನು ಜಾರಿಯಾಗಲು ಬಿಡುವುದಿಲ್ಲ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಗುಡುಗಿದರು.

ರಾಷ್ಟ್ರಭಕ್ತ ಬಳಗದಿಂದ ಬುಧವಾರ ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯದ ವಸತಿ ಯೋಜನೆಗಳಲ್ಲಿ ಅಸಂವಿಧಾನಿಕವಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಿಸಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ನಗರದ ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಶಿವಪ್ಪನಾಯಕ ವೃತ್ತದವರೆಗೆ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ರ್‍ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಜಾರಿಗೆ ತಂದ ಶೇ.15ರಷ್ಟು ಮೀಸಲಾತಿಗೆ ಯಾವ ಬೆಲೆಯೂ ಇಲ್ಲ. ಇದು ಕೇವಲ ಮುಸ್ಲಿಂ ಓಲೈಕೆಯಾಗಿದೆ. ಇದರ ವಿರುದ್ಧ ರಾಜ್ಯಾದ್ಯಂತ ಸಹಿಸಂಗ್ರಹಿಸಿ ರಾಜ್ಯಪಾಲರಿಗೆ ಕೊಡುತ್ತೇವೆ. ಕಳೆದ ವರ್ಷ ಮುಸ್ಲಿಂರಿಗೆ 900 ಕೋಟಿ ರುಪಾಯಿ ಅನುದಾನವನ್ನು ನೀಡಿ, ಈ ವರ್ಷ 1300 ಕೋಟಿ ರು. ಅನುದಾನವನ್ನು ನೀಡಿದ್ದೀರಿ. ಮುಸ್ಲಿಂರು ನಿಮಗೆ ಬೀಗರಾ ? ಎಂದು ಪ್ರಶ್ನಿಸಿದರು.

ಅಹಲ್ಯಾಬಾಯಿ ಹೋಳ್ಕರ್ ರಕ್ತವನ್ನು ಹಂಚಿಕೊಂಡಿರುವ ಸಿದ್ದರಾಮಯ್ಯನವರೇ ನೀವು ಈಗ ಔರಂಗ್‌ಜೇಬನ ಕಡೆ ತಿರುಗಿದ್ದೀರಿ. ರಾಜ್ಯ, ರಾಷ್ಟ್ರದ ಬಗ್ಗೆ ಕಿಂಚಿತ್ತಾದರೂ ಆಲೋಚನೆ ಇದಿಯಾ ಎಂದು ಕುಟುಕಿದರು.

ಮುಸ್ಲಿಂ ಓಲೈಕೆಯ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್ ಈ ಮೂವರನ್ನು ಜೈಲಿಗೆ ಕಳುಹಿಸಬೇಕು. ಮಂಗಳೂರಿನಲ್ಲಿ ಕೇವಲ ಓರ್ವ ಮುಸ್ಲಿಂನ ಹತ್ಯೆಯಾಗಿದ್ದಕ್ಕೆ ಇಡೀ ಕಾಂಗ್ರೆಸ್ ಪಟಾಲಂ ಮಂಗಳೂರಿಗೆ ದೌಡಾಯಿಸಿತ್ತು. ಆದರೆ ರಾಜ್ಯದಲ್ಲಿ ಅದಕ್ಕೂ ಮೊದಲು 15 ಹಿಂದೂಗಳ ಕೊಲೆಯಾದಾಗ ಎಲ್ಲಿ ಹೋಗಿದ್ರಿ ಎಂದು ಕಿಡಿಕಾರಿದರು.

ಭಾರತ ಹಿಂದೂ ರಾಷ್ಟ್ರವಾಗಿರದೇ ಇರಬಹುದು. ಆದರೆ ಮುಸ್ಲಿಂ ರಾಷ್ಟ್ರವಲ್ಲ, ಮುಸ್ಲಿಂರ ಓಲೈಕೆಯನ್ನು ಹಿಂದೂ ಸಮಾಜ ಯಾವತ್ತೂ ಸಹಿಸುವುದಿಲ್ಲ. ಅಲ್ಲದೆ ಹಿಂದೂ ಸಮಾಜ ಎಂದೂ ಸುಮ್ಮನೇ ಕೂತಿಲ್ಲ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್ ಮಾತನಾಡಿ, ಕಾಂಗ್ರೆಸ್ ರಾಜ್ಯದಲ್ಲಿ ಹಿಂದೂ ವಿರೋಧಿ, ಧರ್ಮ ವಿರೋಧಿ ಹಾಗೂ ಜಿಹಾದಿ ಸರ್ಕಾರವಾಗಿದೆ ಎಂದು ದೂರಿದರು.

ಹಿಂದೂಗಳಿಗೆ ಮಂಜೂರಾಗಿರುವ ನಿವೇಶನಗಳನ್ನು ಮುಸಿಂರಿಗೆ ನೀಡುವ ಮೂಲಕ ಹಿಂದೂ ವಿರೋಧಿತನವನ್ನು ಪ್ರದರ್ಶಿಸಿದ್ದೀರಿ. ಶಿವಮೊಗ್ಗದಲ್ಲಿಯೂ ಕೆ.ಎಸ್.ಈಶ್ವರಪ್ಪನವರು 5 ಸಾವಿರ ಮನೆಗಳನ್ನು ಹಂಚಿದರೂ ಯಾವುದೇ ಧರ್ಮವನ್ನು ಕೇಳಲಿಲ್ಲ. ನಾನು ಹಿಂದೂ ಎಂದರೆ ಸರ್ಕಾರ ಏನನ್ನೂ ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡ ಕೆ.ಈ.ಕಾಂತೇಶ್, ಪ್ರಮುಖರಾದ ಕೆ.ಸಿ.ನಟರಾಜ್ ಭಾಗವತ್,ಶೇಷಾಚಲ, ರಮೇಶ್ ಬಾಬು, ಸುವರ್ಣಾ ಶಂಕರ್, ಮೋಹನ್ ಜಾದವ್, ಮಹಾಲಿಂಗಯ್ಯ ಶಾಸ್ತ್ರಿ, ವಾಸುದೇವ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರಣಿ ಸ್ಥಳಕ್ಕೆ ಎಡಿಸಿ ಭೇಟಿ: ಪಟ್ಟು ಬಿಡದ ರೈತರು
ಸಂಕ್ರಮಣದ ಸಂಭ್ರಮದ ತೆಪ್ಪೋತ್ಸವ