150 ಟನ್ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಪತ್ತೆ

KannadaprabhaNewsNetwork |  
Published : Apr 25, 2026, 02:45 AM IST
24ಕೆಪಿಎಲ್24 ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದ ಬಳಿ ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಅನ್ನಭಾಗ್ಯ ಅಕ್ಕಿ. | Kannada Prabha

ಸಾರಾಂಶ

ಅಕ್ರಮವಾಗಿರುವ ಅಕ್ಕಿಯ ಮೂಟೆಗಳು ಎಷ್ಟು ಎನ್ನುವುದು ಬೆಳಗ್ಗೆಯಿಂದ ಸಂಜೆಯಾದರೂ ಲೆಕ್ಕ ಹಾಕಲು ಆಗುತ್ತಿಲ್ಲ

ಕೊಪ್ಪಳ: ಬಡವರ ಹಸಿವು ನೀಗಿಸಬೇಕಾದ ಅನ್ನಭಾಗ್ಯ ಅಕ್ಕಿಯನ್ನೇ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿರುವ ದೊಡ್ಡ ಜಾಲವನ್ನು ಕೊಪ್ಪಳ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ತಾಲೂಕಿನ ಕೂಕನಪಳ್ಳಿ ಗ್ರಾಮದ ಬಳಿ ಜಮೀನೊಂದರಲ್ಲಿ ಬರೋಬ್ಬರಿ 150 ಟನ್‌ಗೂ ಅಧಿಕ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿಟ್ಟಿರುವ ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ಮಾಡಿ ಪತ್ತೆ ಮಾಡಲಾಗಿದೆ.

ಅಕ್ರಮವಾಗಿರುವ ಅಕ್ಕಿಯ ಮೂಟೆಗಳು ಎಷ್ಟು ಎನ್ನುವುದು ಬೆಳಗ್ಗೆಯಿಂದ ಸಂಜೆಯಾದರೂ ಲೆಕ್ಕ ಹಾಕಲು ಆಗುತ್ತಿಲ್ಲ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ದಾಸ್ತಾನು ಮಾಡಿದ್ದನ್ನು ಸೀಜ್ ಮಾಡಲಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ವಿಶ್ವನಾಥ ಹಾಗೂ ಕೊಪ್ಪಳ ಗ್ರಾಮೀಣ ಠಾಣೆಯ ಪಿಐ ಜಯಪ್ರಕಾಶ ನೇತೃತ್ವದಲ್ಲಿ ದಾಳಿ ನಡೆದಿದ್ದು, ನಿರಂತವಾಗಿ ಪರಿಶೀಲನೆ ಕಾರ್ಯ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದ್ದು, ಯಮನೂರಪ್ಪ ಮತ್ತು ಗಾಳೆಪ್ಪ ಎನ್ನುವವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಸ್ಥಳದಲ್ಲಿಯೇ ಡಿಆರ್ ಪೊಲೀಸ್ ಸೇರಿದಂತೆ ಅನೇಕ ಪೊಲೀಸ್ ಸಿಬ್ಬಂದಿ ಠಿಕಾಣಿ ಹೂಡಿ ಕಾಯುತ್ತಿದ್ದಾರೆ.

ಅಕ್ಕಿಯನ್ನು ಸಾಗಿಸುವ ಮೊದಲೇ ಪತ್ತೆ ಮಾಡಲಾಗಿದೆ. ಸ್ಥಳೀಯ ಬಳ್ಳಾರಿ ವಲಯದ ಐಜಿ ಅವರಿಗೆ ನೀಡಿದ ಮಾಹಿತಿಯ ಆಧಾರದ ಮೇಲೆ ಸೂಚನೆ ಬಂದಿದ್ದರಿಂದ ದಾಳಿ ಮಾಡಲಾಗಿದೆ ಎನ್ನಲಾಗಿದೆ.

ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಮಾರಾಟ ಮಾಡುವ ದೊಡ್ಡ ದಂಧೆಯೇ ಇದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕೊಡಮಾಡುವ ಅನ್ನಭಾಗ್ಯ ಅಕ್ಕಿಯನ್ನು ಕೆಲವರು ಬಳಕೆ ಮಾಡುವುದೇ ಇಲ್ಲ. ಮತ್ತೆ ಕೆಲವರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಇದನ್ನೇ ಅಕ್ರಮವಾಗಿ ಖರೀದಿಸಿ ಬೇರೆಡೆ ಸಾಗಿಸುವ ದೊಡ್ಡ ಜಾಲ ಕೊಪ್ಪಳ ಜಿಲ್ಲೆಯಲ್ಲಿದೆ.

ಅನ್ನಭಾಗ್ಯ ಅಕ್ಕಿಯ ಅಕ್ರಮದ ಹೆಡ್ ಕ್ವಾರ್ಟರ್ ಗಂಗಾವತಿಯೇ ಆಗಿದ್ದು, ಗಂಗಾವತಿಯಲ್ಲಿರುವ ಮಿಲ್ ಗಳಲ್ಲಿ ಇವುಗಳನ್ನು ಇತರೆ ಅಕ್ಕಿಯೊಂದಿಗೆ ಮಿಕ್ಸ್ ಮಾಡಿಯೂ ಮಾರಾಟ ಮಾಡುತ್ತಾರೆ. ಪಾಲಿಶ್‌ ಮಾಡಿಯೂ ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲ ವಿದೇಶಕ್ಕೂ ಕಳುಹಿಸುತ್ತಾರೆ ಎನ್ನುವ ಆರೋಪ ಇದೆ. ಈ ಹಿಂದೆ ವಿದೇಶದ ಬ್ರ್ಯಾಂಡ್ ಅಕ್ಕಿ ಸಂಗ್ರಹಿಸಿದ ನೂರಾರು ಮೂಟೆಗಳು ಪತ್ತೆಯಾಗಿದ್ದವು.

ಈಗ ಕೂಕನಪಳ್ಳಿ ಗ್ರಾಮದ ಬಳಿ ಜಮೀನಿನಲ್ಲಿ ಸಿಕ್ಕಿರುವ ಅಕ್ರಮ ಅಕ್ಕಿಯ ಮೂಲ ಪತ್ತೆ ಮಾಡುವ ಕಾರ್ಯ ಭರದಿಂದ ಸಾಗಿದೆ.

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನಭಾಗ್ಯ ಅಕ್ಕಿಯನ್ನು ದಾಳಿ ಮಾಡಿ, ಸೀಜ್ ಮಾಡಲಾಗಿದ್ದು, ಅವುಗಳ ಪ್ರಮಾಣ ಲೆಕ್ಕ ಹಾಕಲಾಗುತ್ತಿದೆ. ಎಫ್ ಐಆರ್ ಸಹ ದಾಖಲು ಮಾಡಲಾಗಿದೆ ಎಂದು ಕೊಪ್ಪಳ ಗ್ರಾಮೀಣ ಠಾಣೆಯ ಪಿಐ ಜಯಪ್ರಕಾಶ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೂಮಿ ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು
ಭಾರತೀಯ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್: ಟಿ.ಬಿ. ಹರಿಕಾಂತ