ಕೊಪ್ಪಳ: ಬಡವರ ಹಸಿವು ನೀಗಿಸಬೇಕಾದ ಅನ್ನಭಾಗ್ಯ ಅಕ್ಕಿಯನ್ನೇ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿರುವ ದೊಡ್ಡ ಜಾಲವನ್ನು ಕೊಪ್ಪಳ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಅಕ್ರಮವಾಗಿರುವ ಅಕ್ಕಿಯ ಮೂಟೆಗಳು ಎಷ್ಟು ಎನ್ನುವುದು ಬೆಳಗ್ಗೆಯಿಂದ ಸಂಜೆಯಾದರೂ ಲೆಕ್ಕ ಹಾಕಲು ಆಗುತ್ತಿಲ್ಲ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ದಾಸ್ತಾನು ಮಾಡಿದ್ದನ್ನು ಸೀಜ್ ಮಾಡಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ವಿಶ್ವನಾಥ ಹಾಗೂ ಕೊಪ್ಪಳ ಗ್ರಾಮೀಣ ಠಾಣೆಯ ಪಿಐ ಜಯಪ್ರಕಾಶ ನೇತೃತ್ವದಲ್ಲಿ ದಾಳಿ ನಡೆದಿದ್ದು, ನಿರಂತವಾಗಿ ಪರಿಶೀಲನೆ ಕಾರ್ಯ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದ್ದು, ಯಮನೂರಪ್ಪ ಮತ್ತು ಗಾಳೆಪ್ಪ ಎನ್ನುವವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಅಕ್ಕಿಯನ್ನು ಸಾಗಿಸುವ ಮೊದಲೇ ಪತ್ತೆ ಮಾಡಲಾಗಿದೆ. ಸ್ಥಳೀಯ ಬಳ್ಳಾರಿ ವಲಯದ ಐಜಿ ಅವರಿಗೆ ನೀಡಿದ ಮಾಹಿತಿಯ ಆಧಾರದ ಮೇಲೆ ಸೂಚನೆ ಬಂದಿದ್ದರಿಂದ ದಾಳಿ ಮಾಡಲಾಗಿದೆ ಎನ್ನಲಾಗಿದೆ.
ಅನ್ನಭಾಗ್ಯ ಅಕ್ಕಿಯ ಅಕ್ರಮದ ಹೆಡ್ ಕ್ವಾರ್ಟರ್ ಗಂಗಾವತಿಯೇ ಆಗಿದ್ದು, ಗಂಗಾವತಿಯಲ್ಲಿರುವ ಮಿಲ್ ಗಳಲ್ಲಿ ಇವುಗಳನ್ನು ಇತರೆ ಅಕ್ಕಿಯೊಂದಿಗೆ ಮಿಕ್ಸ್ ಮಾಡಿಯೂ ಮಾರಾಟ ಮಾಡುತ್ತಾರೆ. ಪಾಲಿಶ್ ಮಾಡಿಯೂ ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲ ವಿದೇಶಕ್ಕೂ ಕಳುಹಿಸುತ್ತಾರೆ ಎನ್ನುವ ಆರೋಪ ಇದೆ. ಈ ಹಿಂದೆ ವಿದೇಶದ ಬ್ರ್ಯಾಂಡ್ ಅಕ್ಕಿ ಸಂಗ್ರಹಿಸಿದ ನೂರಾರು ಮೂಟೆಗಳು ಪತ್ತೆಯಾಗಿದ್ದವು.
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನಭಾಗ್ಯ ಅಕ್ಕಿಯನ್ನು ದಾಳಿ ಮಾಡಿ, ಸೀಜ್ ಮಾಡಲಾಗಿದ್ದು, ಅವುಗಳ ಪ್ರಮಾಣ ಲೆಕ್ಕ ಹಾಕಲಾಗುತ್ತಿದೆ. ಎಫ್ ಐಆರ್ ಸಹ ದಾಖಲು ಮಾಡಲಾಗಿದೆ ಎಂದು ಕೊಪ್ಪಳ ಗ್ರಾಮೀಣ ಠಾಣೆಯ ಪಿಐ ಜಯಪ್ರಕಾಶ ತಿಳಿಸಿದ್ದಾರೆ.