ಕನ್ನಡಪ್ರಭ ವಾರ್ತೆ ರಾಮನಗರ
ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿಗತಿಗಳ ಸಂಬಂಧ 15ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಮತ್ತು ಸದಸ್ಯರು ಮಂಗಳವಾರ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕರ್ನಾಟಕ ಸರ್ಕಾರವು 15ನೇ ರಾಜ್ಯ ಹಣಕಾಸು ಆಯೋಗ ರಚಿಸಿದ್ದು, ಜಿಪಂ, ತಾಪಂ, ನಗರಸಭೆಗಳು, ಪುರಸಭೆಗಳು, ಪಟ್ಟಣ ಪಂಚಾಯಿತಿಗಳ ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸುವ ಸಂಬಂಧ ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಮಾತನಾಡಿ, ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯ ಚಟುವಟಿಕೆಗಳು, ಆರ್ಥಿಕ ಸ್ಥಿತಿ, ಸಂಪನ್ಮೂಲ ಕ್ರೂಡೀಕರಣ, ಹಂಚಿಕೆ ಮತ್ತು ಮೂಲ ಸೌಕರ್ಯ ಹಾಗೂ ಸೇವೆಗಳ ಒದಗಿಸುವಿಕೆಯಲ್ಲಿ ತಾಂತ್ರಿಕ ಕೌಶಲ್ಯ, ಸಾಮರ್ಥ್ಯ ಇತ್ಯಾದಿಗಳನ್ನು ಅಧ್ಯಯನ ಮಾಡುವುದು ಪ್ರವಾಸದ ಮುಖ್ಯ ಉದ್ದೇಶವಾಗಿದೆ ಎಂದರು.
ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ತಂಡ ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿ, ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ಬರುತ್ತಿರುವ ಅನುದಾನಗಳು ಸಾಕಾಗುತ್ತಿವೆಯೇ, ಜೊತೆಗೆ ವೆಚ್ಚಗಳಿಗೆ ಸಾಕಾಗುತ್ತಿಲ್ಲವೇ, ಇನ್ನೂ ಹೆಚ್ಚಿನ ಅನುದಾನದ ನಿರೀಕ್ಷೆಯಿದೆಯೇ ಎಂದು ಸಂವಾದ ನಡೆಸಿದರು. ವಿವಿಧ ಶೀರ್ಷಿಕೆಗಳಡಿ ಪಂಚಾಯಿತಿಗೆ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ, ಎಸ್ಕೋ ಖಾತೆಗೆ ನೀಡುತ್ತಿರುವ ಅನುದಾನ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಒಂದೇ ರೀತಿಯ ಅನುದಾನ ನೀಡುತ್ತಿರುವುದು ಸರಿಯಲ್ಲ. ರಾಮನಗರ ಜಿಲ್ಲೆಯ ಅಂತರ್ಜಲ ಸಾವಿರ ಅಡಿ ತಲುಪಿದೆ. ಜೊತೆಗೆ ಸೆಸ್ ಮೊತ್ತವನ್ನು ಸದ್ಬಳಕೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಪಿಡಿಒ ಜಯಶಂಕರ್ ಮನವಿ ಮಾಡಿದರು.ಈ ವೇಳೆ 15ನೇ ರಾಜ್ಯ ಹಣಕಾಸು ಆಯೋಗ ಸದಸ್ಯರಾದ ಮೊಹಮದ್ ಸನಾವುಲ್ಲಾ, ಆರ್.ಎಸ್. ಪೋಂಡೆ, ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಜಿಪಂ ಸಿಇಒ ಆನ್ಮೋಲ್ ಜೈನ್, ಉಪ ಕಾರ್ಯದರ್ಶಿ ಧನರಾಜ್, ಸಮಾಲೋಚಕರಾದ ಎಂ.ಕೆ.ಕೆಂಪೇಗೌಡ, ಸಿ.ಜಿ.ಸುಪ್ರಸನ್ನ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಕೆ.ಯಾಲಕ್ಕಿಗೌಡ, ಇಒ ಪೂರ್ಣಿಮಾ, ತಾಪಂ ಪಿಡಿ ರೂಪೇಶ್, ಪಂಚಾಯಿತಿ ಅಧ್ಯಕ್ಷ ತಿರುಮಳಯ್ಯ, ಸದಸ್ಯರಾದ ಕನಕಾ, ಜಯಮ್ಮ, ಸರಿತಾ,ಶಿವರಾಜು, ರವಿಕಿರಣ, ಲಕ್ಷ್ಮೀನರಸಿಂಹಯ್ಯ, ಅಪ್ಪಾಜಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಶಂಕರ್, ಕಾರ್ಯದರ್ಶಿ ರೇಣುಕಪ್ಪ ಮತ್ತಿತರರು ಇದ್ದರು, ಗ್ರಾಮ ಪಂಚಾಯಿತಿ ಭೇಟಿಗೂ ಮುನ್ನಾ ಜಿಲ್ಲೆಗೆ ಆಗಮಿಸಿದ ಅಧಿಕಾರಿಗಳ ತಂಡ ಮೊದಲಿಗೆ ಜಿಲ್ಲಾ ಪಂಚಾಯತ್ ಮತ್ತು ನಗರಸಭೆಗೂ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು.