ಬಯಲುಸೀಮೆ ಜಿಲ್ಲೆಗಳ ನೀರಿನ ಕೊರತೆ ಪರಿಹರಿಸಲು ವರ್ಷದೊಳಗೆ 16 ಟಿಎಂಸಿ ಎತ್ತಿನಹೊಳೆ ನೀರು

KannadaprabhaNewsNetwork |  
Published : Feb 04, 2025, 12:34 AM ISTUpdated : Feb 04, 2025, 11:47 AM IST
ವಿಜೆಪಿ ೦೩ವಿಜಯಪುರ ಹೋಬಳಿ ಗೊಡ್ಲುಮುದ್ದೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನವೀಕರಣ ಹಾಗೂ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿದರು. | Kannada Prabha

ಸಾರಾಂಶ

 ಬಯಲುಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನೀರಿನ ಕೊರತೆ ಪರಿಹರಿಸಲು ಒಂದು ವರ್ಷದೊಳಗೆ ಎತ್ತಿನಹೊಳೆ ಯೋಜನೆಯಿಂದ 16 ಟಿಎಂಸಿ ನೀರು ಬಂದೇ ಬರುತ್ತದೆ.  

ವಿಜಯಪುರ: ಬಯಲುಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನೀರಿನ ಕೊರತೆ ಪರಿಹರಿಸಲು ಒಂದು ವರ್ಷದೊಳಗೆ ಎತ್ತಿನಹೊಳೆ ಯೋಜನೆಯಿಂದ 16 ಟಿಎಂಸಿ ನೀರು ಬಂದೇ ಬರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಭರವಸೆ ನೀಡಿದರು.

ಹೋಬಳಿಯ ಗೊಡ್ಲುಮುದ್ದೇನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನವೀಕರಣ ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಳೆ ಹೆಚ್ಚಾದಾಗ 20 ಟಿಎಂಸಿ ಹೆಚ್ಚಿನ ನೀರು ಈ ಪ್ರದೇಶಕ್ಕೆ ಸಿಗಲಿದ್ದು, ಅದು ಕೋಲಾರದವರೆಗೂ ಹರಿಯಲಿದೆ ಎಂದು ಹೇಳಿದರು.

ನಾನು ಕೇಂದ್ರ ಸಚಿವನಿದ್ದಾಗ ಜಲಸಂವರ್ಧನೆ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ವರ್ಲ್ಡ್ ಬ್ಯಾಂಕ್ ಮೂಲಕ ೧೨೫೦ ಕೋಟಿ ರು. ಸಾಲ ಪಡೆದು ಅನುಷ್ಠಾನ ಮಾಡಲಾಯಿತು. ಈಗಲೂ ಶುದ್ಧೀಕರಿಸಿದ ನೀರನ್ನೇ ಬಯಲುಸೀಮೆ ಪ್ರದೇಶಕ್ಕೆ ಬಿಡುವಂತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಡಾ.ಪರಮಶಿವಯ್ಯ ವರದಿಯಂತೆ ಪೋಲಾಗುತ್ತಿರುವ ನೀರು ಸಮುದ್ರಕ್ಕೆ ಹರಿಯದಂತೆ ತಡೆದು ಸುಮಾರು ೫೦೦ ಟಿಎಂಸಿ ನೀರನ್ನು ತರಬಹುದು ಎಂಬ ಮಾಹಿತಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಮುಂದಿನ ದಿನಗಳಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಪೋಡಿ ಮುಕ್ತ ಜಿಲ್ಲೆಯಾಗಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದು, 1263 ರೈತರಿಗೆ ಅವರ ಭೂಮಿ ಪಹಣಿ ಪತ್ರವನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ. ಈ ಭಾಗದಲ್ಲಿ 2500 ಜನರಿಗೆ ಸರ್ಕಾರಿ ಜಮೀನನ್ನು ಗುರುತಿಸಿ ಎಲ್ಲಾ ವರ್ಗದ ಬಡವರಿಗೂ ಖಾಲಿ ನಿವೇಶನಗಳನ್ನು ಹಂಚಲು ಯೋಜನೆ ರೂಪಿಸಿದ್ದು ಇದು ಅನುಕೂಲಕರವಾಗಲಿದೆ ಎಂದು ಹೇಳಿದರು.

ಗುಣಮಟ್ಟದ ಹಾಲು ಪೂರೈಕೆಗೆ ಆದ್ಯತೆ: ಜಿಲ್ಲೆಯಲ್ಲಿ ಬಹುತೇಕ ರೈತರು ಹೈನುಗಾರಿಕೆಯಿಂದಲೇ ಜೀವನ ರೂಪಿಸಿಕೊಂಡಿದ್ದು, ಗುಣಮಟ್ಟದ ಹಾಲು ಉತ್ಪಾದಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಕೇವಲ ಪ್ರಮುಖ ಕೃಷಿಗಳತ್ತಲೇ ಗಮನಹರಿಸದೆ, ಉಪಕಸುಬು ಮಿಶ್ರ ಬೇಸಾಯದತ್ತಲೂ ಗಮನ ಹರಿಸಬೇಕು. ಉಪ ಕಸುಬುಗಳು ರೈತರ ಆರ್ಥಿಕ ಸಮತೋಲನಕ್ಕೆ ಪೂರಕವಾಗಿರುತ್ತವೆ ಎಂದು ಸಲಹೆ ನೀಡಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ರಾಜಣ್ಣ, ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಅನಂತಕುಮಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಮುನಿರಾಜು, ಸಾವಕನಹಳ್ಳಿ ಎಸ್.ಪಿ.ಮುನಿರಾಜು, ಸಂಘದ ಪದಾಧಿಕಾರಿಗಳು, ರೈತರು, ಮತ್ತು ಮುಖಂಡರು ಹಾಜರಿದ್ದರು. 

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ