ಕನ್ನಡಪ್ರಭ ವಾರ್ತೆ ಹುಣಸೂರು
ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಸಾವಿರಾರು ಕೋಟಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುತ್ತಿರುವುದನ್ನು ವಿರೋಧಿಸಿ ಮತ್ತು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ಭ್ರಷ್ಟಾಚಾರವನ್ನು ಖಂಡಿಸಿ ದಸಂಸ ಸದಸ್ಯರು ಪ್ರತಿಭಟಿಸಿದರು.ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಸಮಿತಿ ಸದಸ್ಯರು ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ವಾಲ್ಮೀಕಿ ಹಗರಣ ಹಣ ತಿಂದವರು ಕಕ್ಕಲಿ ಎಂಬಿತ್ಯಾದಿ ಘೋಷಣೆಗೆಳನ್ನು ಕೂಗಿದರು.
ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ 25 ಸಾವಿರ ಕೋಟಿ ಹಣವನ್ನು ದಲಿತರ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡದೆ ಗ್ಯಾರಂಟಿಗಳಿಗೆ ಮತ್ತು ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದು ಪ. ಜಾತಿ, ಪಂಗಡದ ಸಮುದಾಯಗಳಿಗೆ ಮಾಡಿರುವ ಘನಘೋರ ಅನ್ಯಾಯವಾಗಿದೆ.ಐದು ಗ್ಯಾರಂಟಿಗಳಿಗೆ ಹಣಕಾಸು ಕೊಡಲಾಗದೆ ದಲಿತರಿಗೆ ಮೀಸಲಿಟ್ಟಿದ್ದ ಹಣವನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಣ ಭ್ರಷ್ಟಾಚಾರ ಮಾಡಲಾಗಿದೆ. ಇಷ್ಟು ದೊಡ್ಡಮಟ್ಟದ ಹಣವನ್ನು ಲೂಟಿ ಮಾಡಿರುವುದರ ಹಿಂದೆ ಬಲವಾದ ರಾಜಕೀಯ ವ್ಯಕ್ತಿಗಳ ಕೈವಾಡವಿದೆ. ಪ. ಪಂಗಡದಲ್ಲಿ ಜೇನು ಕುರುಬ, ಎರವ, ಬೆಟ್ಟಕುರುಬ, ಸೋಲಿಗ, ಡೋಂಗ್ರಿ ಗೆರಾಸಿಯಾ ಮುಂತಾದ ದ್ವನಿಯಿಲ್ಲದ ದಿಕ್ಕಿಲ್ಲದ ಸಮುದಾಯಗಳ ಸ್ಥಿತಿ ಹೇಳತೀರದಾಗಿದೆ. ಇಂತಹ ಪಾಪದ ಜನರ ಅಭಿವೃದ್ಧಿಗೆ ಮೀಸಲಿಟ್ಟ 187 ಕೋಟಿ ಹಣವನ್ನು ಯಾವುದೇ ಭಯ ಭೀತಿಯಿಲ್ಲದೆ ಲೂಟಿ ಮಾಡಿರುವುದು ದಲಿತರ ಸಮುದಾಯಲ್ಲಿ ಆತಂಕ ಮೂಡಿಸಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ತನ್ನ ಈ ಎಲ್ಲ ನಿರ್ಧಾರಗಳನ್ನು ಹಿಂಪಡೆದು ದಲಿತರಿಗೆ ಮೀಸಲಿಟ್ಟ ಹಣವನ್ನು ದಲಿತರ ಅಭ್ಯುದಯಕ್ಕಾಗಿಯೇ ಬಳಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದರು.ಮುಖಂಡರಾದ ದೇವೇಂದ್ರ, ಕೆಂಪರಾಜು, ಗಜೇಂದ್ರ ಮಾತನಾಡಿದರು. ಉಪವಿಭಾಗಾಧಿಕಾರಿ ಎಚ್.ಬಿ. ವಿಜಯಕುಮಾರ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಪ್ರತಿಟನೆಯಲ್ಲಿ ದಲಿತ ಮುಖಂಡರಾದ ಬಸವಲಿಂಗಯ್ಯ, ಪಿರಿಯಾಪಟ್ಟಣ ದಸಂಸ ಮುಖಂಡ ಚಾಮರಾಯ, ಜಗದೀಶ್, ವೇಣುಗೋಪಾಲ್, ನಾಗರಾಜು ಕೆ.ಎಂ. ವಾಡಿ, ದಲಿತ ಮಹಿಳಾ ಒಕ್ಕೂಟದ ಲಕ್ಷ್ಮಿಬಾಯಿ, ಕಮಲಾಬಾಯಿ, ರಾಣಾಬಾಯಿ, ಗೋವಿಂದ, ಸುಶೀಲಾಬಾಯಿ, ಅಂಬೇಡ್ಕರ್ ನಗರದ ವಸಂತ, ಕಣ್ಣಮ್ಮ, ಗೋಪಾಲ, ಬಿ.ಆರ್. ಕಾವಲ್ ಗ್ರಾಮದ ಗೋವಿಂದ, ಎನ್.ಎಸ್. ತಿಟ್ಟಿನ ಲಕ್ಷ್ಮಮ್ಮ, ಕಾಳಮ್ಮ, ನೇತ್ರಾ ಭಾಗವಹಿಸಿದ್ದರು.