ಮಂಗಳೂರು: ನಮ್ಮ ಕಾಲೇಜಿನಲ್ಲಿ ನಿರ್ಮಿಸಿದ ಆಧುನಿಕ ಸೌಲಭ್ಯಗಳು, ಈ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ದೊರಕಿದ ಸ್ವಾಯತ್ತ ಸ್ಥಾನಮಾನ, ನ್ಯಾಕ್ ಮಾನ್ಯತೆ, ಅನೇಕ ಶ್ರೇಣಿಗಳು ಹಾಗೂ ಚಿನ್ನದ ಪದಕ ಇವು ಸಂಸ್ಥೆಯ ಹೆಮ್ಮೆಯ ಸಾಧನೆಗಳು. ಡಿಸೆಂಬರ್ 24, 2025ರಂದು ಜರುಗುವ ಜಾಗತಿಕ ಹಳೆಯ ವಿದ್ಯಾರ್ಥಿ ಸಮಾವೇಶದಲ್ಲಿ ಪ್ರತಿಯೊಬ್ಬ ಪದವೀಧರರೂ ಪಾಲ್ಗೊಳ್ಳಿ, ಸಂಸ್ಥೆಯ ಶಕ್ತಿಯನ್ನು ವಿಶ್ವಮಟ್ಟದಲ್ಲಿ ಪ್ರದರ್ಶಿಸೋಣ ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅಧ್ಯಕ್ಷ ಡಿ.ವಾಸುದೇವ ಕಾಮತ್ ಹೇಳಿದರು.
ಅವರು ಕೆನರಾ ಎಂಜಿನಿಯರಿಂಗ್ ಕಾಲೇಜಿನ 21ನೇ ಪದವಿ ಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.ಕಾರ್ಯದರ್ಶಿ ಎಂ. ರಂಗನಾಥ್ ಭಟ್ ಮಾತನಾಡಿ, ಜೀವನದಲ್ಲಿ ಬರುವ ವಿಫಲತೆಯಿಂದ ಕುಗ್ಗದೆ ಧೈರ್ಯದಿಂದ ಮುಂದೆ ಸಾಗಬೇಕು. ಕಾಲೇಜು ಪಡೆದಿರುವ ಸ್ವಾಯತ್ತ ಸ್ಥಾನಮಾನ, ನ್ಯಾಕ್ ಮಾನ್ಯತೆ, 10 ವಿ.ಟಿ.ಯು. ಶ್ರೇಣಿಗಳು ಹಾಗೂ ಚಿನ್ನದ ಪದಕ ಇವು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.
ಪದವಿ ಪ್ರದಾನ ಸಮಾರಂಭದಲ್ಲಿ ವಿಭಾಗವಾರು ಶ್ರೇಷ್ಠ ಸಾಧಕರಾದವರನ್ನು, ಕ್ಲಾಸ್ ಪ್ರತಿನಿಧಿಗಳು ಹಾಗೂ ಕ್ಲಬ್ ಸಲಹೆಗಾರರನ್ನು ಪೋಷಕರ ಸಮೇತ ಸನ್ಮಾನಿಸಲಾಯಿತು. ವಿವಿಧ ಶಾಖೆಗಳ ಪದವೀಧರರಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.ಹೊಸ ಪರೀಕ್ಷಾ ವಿಭಾಗ, 60 ಕಿಲೋವ್ಯಾಟ್ ಸೌರಶಕ್ತಿ ಘಟಕ (ಸಂಸ್ಥೆಯ ಹಸಿರು ಬದ್ಧತೆಯ ಸಂಕೇತ),ವಿದ್ಯಾರ್ಥಿಗಳಿಗೆ ಆಧುನಿಕ ವಸತಿ ಸೌಲಭ್ಯ ಒದಗಿಸುವ ‘ನಂದಿನಿ ಹಾಸ್ಟೆಲ್’ನ್ನು ಉದ್ಘಾಟಿಸಲಾಯಿತು.
ಕೆನರಾ ವಿಕಾಸ್ ಸಂಸ್ಥೆಯ ಸಂಯೋಜಕ ಬಸ್ತಿ ಪುರುಷೋತ್ತಮ್ ಶೆಣೈ, ಆಡಳಿತ ಕೌನ್ಸಿಲ್ ಸದಸ್ಯ ವಿನಾಯಕ್ ಕಾಮತ್, ಪ್ರಾಂಶುಪಾಲ ಡಾ. ನಾಗೇಶ್ ಎಚ್. ಆರ್., ಉಪಪ್ರಾಂಶುಪಾಲ ಡಾ. ಡೆಮಿಯನ್ ಆಂಟೋನಿ ಡಿ’ಮೆಲ್ಲೊ ಮತ್ತಿತರರಿದ್ದರು.ಸ್ಟೂಡೆಂಟ್ಸ್ ವೆಲ್ಫೇರ್ ಡೀನ್ ಡಾ. ಪ್ರಿಯಾ ವಿ. ಫ್ರಾಂಕ್ ವಂದಿಸಿದರು. ಕ್ಯಾರೋಲ್ ಡಿ’ಮೆಲ್ಲೊ ನಿರ್ವಹಿಸಿದರು.