ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಯಲಬುರ್ಗಾ ಕ್ಷೇತ್ರಕ್ಕೆ 3 ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು

KannadaprabhaNewsNetwork | Published : Jun 12, 2024 12:30 AM

ಯಲಬುರ್ಗಾ ಕ್ಷೇತ್ರದ ಮೂರು ಗ್ರಾಮಗಳಲ್ಲಿ ಆರೋಗ್ಯ ಸೇವೆ ತ್ವರಿತವಾಗಿ ಸಿಗಲು ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಂಜೂರು ಆಗಿವೆ.

ಕಟ್ಟಡ, ವೇತನಕ್ಕೆ ಕೆಕೆಆರ್‌ಡಿಬಿಯಿಂದ ಅನುದಾನ ।ಪ್ರಸ್ತಾವನೆ ಸಲ್ಲಿಸಿದ್ದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ

ಕನ್ನಡಪ್ರಭ ವಾರ್ತೆ ಕುಕನೂರು

ಯಲಬುರ್ಗಾ ಕ್ಷೇತ್ರದ ಮೂರು ಗ್ರಾಮಗಳಲ್ಲಿ ಆರೋಗ್ಯ ಸೇವೆ ತ್ವರಿತವಾಗಿ ಸಿಗಲು ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಂಜೂರು ಆಗಿವೆ.

ಆರೋಗ್ಯ ಸೇವೆಗಳು ತ್ವರಿತವಾಗಿ ಸಿಗಬೇಕು ಎಂದು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕೇಂದ್ರಗಳನ್ನು ತೆರೆಯಲು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆ ನಿಟ್ಟಿನಲ್ಲಿ ಯಲಬುರ್ಗಾ ಕ್ಷೇತ್ರದ ಗ್ರಾಮಗಳಾದ ಕುಕನೂರು ತಾಲೂಕಿನ ಬಳಗೇರಾ ಗ್ರಾಮ, ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮಗಳಿಗೆ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಆಯುಷ್ ಆಸ್ಪತ್ರೆಯನ್ನು ಪ್ರಾ.ಆ.ಕೇಂದ್ರವನ್ನಾಗಿ ಪರಿವರ್ತಿಸಿ ಕ್ಷೇತ್ರದ ಮೂರು ಗ್ರಾಮಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಿಸಿದ್ದಾರೆ.

ಈ ಮೂರು ಗ್ರಾಮದ ವ್ಯಾಪ್ತಿಯಲ್ಲಿ ಯಾವುದೇ ವೈದ್ಯಕೀಯ ಕಾಲೇಜಾಗಲಿ, ಅತೀ ತುರ್ತು ಸಂದಂರ್ಭಗಳಲ್ಲಿ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆ ಇಲ್ಲ. ಇದರಿಂದಾಗಿ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾರ್ವಜನಿಕರು ವೈದ್ಯಕೀಯ ಸೇವೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿರುತ್ತದೆ. ಜೊತೆಗೆ ಗರ್ಭಿಣಿಯರು ಸಹ ಹೆರಿಗೆಗೆ ದೂರದ ಊರಿನ ಆಸ್ಪತ್ರೆಗೆ ತೆರಳುವ ಪ್ರಮೇಯ ಇತ್ತು. ಸದ್ಯ ಗ್ರಾಮೀಣ ಪ್ರದೇಶದಲ್ಲಿಯೇ ಜನರಿಗೆ ಆರೋಗ್ಯ ಸೇವೆ ಒದಗಲಿವೆ.

ಹುದ್ದೆ ಸಮೇತ ಮಂಜೂರು:

ಬಳಗೇರಿ ಮತ್ತು ಚಿಕ್ಕಮ್ಯಾಗೇರಿ ಗ್ರಾಮಗಳಿಗೆ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬಂಡಿ ಗ್ರಾಮದ ಆಯುಷ್ ಆಸ್ಪತ್ರೆಯನ್ನು ಪ್ರಾ.ಅ.ಕೇಂದ್ರವನ್ನಾಗಿ ಪರಿವರ್ತಿಸಿ ಹುದ್ದೆಗಳನ್ನು ಸೃಜಿಸಲು ಅಧಿಕಾರಿ, ಸಿಬ್ಬಂದಿಗೆ ಒಂದು ಪ್ರಾ.ಆ. ಕೇಂದ್ರಕ್ಕೆ ವರ್ಷಕ್ಕೆ ₹35.52 ಲಕ್ಷ ವೆಚ್ಚವಾಗಲಿದ್ದು, ಮೂರು ವರ್ಷಕ್ಕೆ ಮೂರು ಆರೋಗ್ಯ ಕೇಂದ್ರಗಳಿಗೆ ₹3.2 ಕೋಟಿ ವೇತನ ಹಾಗೂ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ ₹ 3 ಕೋಟಿಯಂತೆ ಒಟ್ಟು ಮೂರು ಆರೋಗ್ಯ ಕೇಂದ್ರಕ್ಕೆ 9 ಕೋಟಿಯನ್ನು ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯಡಿಯಲ್ಲಿ ಭರಿಸಲು ಮಂಜೂರಾತಿ ಪಡೆದಿದ್ದಾರೆ.

ಗ್ರಾಮೀಣ ಭಾಗದಲ್ಲಿ ತ್ವರಿತವಾಗಿ ಜನರಿಗೆ ಆರೋಗ್ಯ ಸೇವೆಗಳು ದೊರಬೇಕು. ಆರೋಗ್ಯ ಸಂಪತ್ತು ಬಹಳ ಮುಖ್ಯ. ಜನರ ಆರೋಗ್ಯದ ದೃಷ್ಠಿಯಿಂದ ಕ್ಷೇತ್ರದ ಮೂರು ಗ್ರಾಮಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ವೈದ್ಯರ, ಸಿಬ್ಬಂದಿಯವರ ಹುದ್ದೆ ಜೊತೆ ಮಂಜೂರಾತಿ ಪಡೆಯಲಾಗಿದೆ. ಅಲ್ಲದೆ ಕಟ್ಟಡಕ್ಕೆ ಸಹ ಅನುದಾನ ಸಹ ಭರಿಸಲು ಅನುಮತಿ ಪಡೆಯಲಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.