ಎಚ್‌.ವಿ. ರಾಜೀವ್‌ ಬಳಗದಿಂದ ಸಸಿ ನೆಟ್ಟು ಪರಿಸರ ದಿನಾಚರಣೆ

KannadaprabhaNewsNetwork | Updated : Jun 17 2025, 12:10 AM IST

ಪರಿಸರವು ನಮ್ಮ ಬದುಕಿನ ಮೂಲಾಧಾರ. ಶುದ್ಧ ನೀರು, ಗಾಳಿ, ಬೆಳಕು ಹಾಗೂ ಹಸಿರು ಪರಿಸರ ಇಲ್ಲದೆ ಮಾನವ ಜೀವನ ಅಸಾಧ್ಯ

ಕನ್ನಡಪ್ರಭ ವಾರ್ತೆ ಮೈಸೂರುಎಚ್.ವಿ. ರಾಜೀವ್ ಸ್ನೇಹ ಬಳಗ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರ್ ಮಿಟ್ಟೋನ್ ಸಂಯುಕ್ತ ಆಶ್ರಯದಲ್ಲಿ ಅಶೋಕಪುರಂ ರೈಲ್ವೆ ನಿಲ್ದಾಣ ಮುಂಭಾಗದ ಉದ್ಯಾನವನದಲ್ಲಿ 30 ಗಿಡಗಳನ್ನು ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಅತಿಥಿಯಾಗಿ ಪಾಲ್ಗೊಂಡಿದ್ದ ಲಕ್ಷ್ಮೀ ರಾಜೀವ್‌ ಮಾತನಾಡಿ, ಪರಿಸರವು ನಮ್ಮ ಬದುಕಿನ ಮೂಲಾಧಾರ. ಶುದ್ಧ ನೀರು, ಗಾಳಿ, ಬೆಳಕು ಹಾಗೂ ಹಸಿರು ಪರಿಸರ ಇಲ್ಲದೆ ಮಾನವ ಜೀವನ ಅಸಾಧ್ಯ. ನಾವು ಇಂದು ಇಲ್ಲಿ ಗಿಡ ನೆಡುವ ಮೂಲಕ ಭವಿಷ್ಯ ಪೀಳಿಗೆಗೆ ಹಸಿರು ಹಾದಿಯನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬರೂ ಪರಿಸರ ಉಳಿಸುವ ಜವಾಬ್ದಾರಿ ಹೊಂದಿದ್ದೇವೆ. ಗಿಡಗಳು ನಮಗೆ ಆಮ್ಲಜನಕ, ನೆರಳು, ಹಣ್ಣು, ಹೂವುಗಳನ್ನು ನೀಡುತ್ತವೆ. ಹಕ್ಕಿಗಳು, ಪ್ರಾಣಿಗಳು ಹಾಗೂ ಮಾನವರಿಗೆ ಗಿಡಗಳು ಆಶ್ರಯವಾಗುತ್ತದೆ ಎಂದರು.ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ, ಜಲದ ಅಭಾವ, ಗಾಳಿಯ ಮಾಲಿನ್ಯ ಹೆಚ್ಚುತ್ತಿದೆ. ಇದಕ್ಕೆ ಕಾರಣ ನಾವು ಪ್ರಕೃತಿಯನ್ನು ನಿರ್ಲಕ್ಷ್ಯ ಮಾಡುತ್ತಿರುವುದು. ಗಿಡ ನೆಡುವುದು, ನೀರನ್ನು ಸಂರಕ್ಷಿಸುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ನಮ್ಮ ಕರ್ತವ್ಯ.ನಾವು ಇಂದು ನೆಡುವ ಈ ಗಿಡಗಳು ನಮ್ಮ ಮಕ್ಕಳು, ಮಕ್ಕಳ ಮಕ್ಕಳಿಗೆ ಹಸಿರು ವಾತಾವರಣವನ್ನು ನೀಡಲಿ. ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ ಒಂದು ಗಿಡವನ್ನು ನೆಟ್ಟು, ಅದನ್ನು ಬೆಳೆಸೋಣ. ನಮ್ಮ ಸುತ್ತಲೂ ಸ್ವಚ್ಛತೆ, ಹಸಿರು ಮತ್ತು ಆರೋಗ್ಯಕರ ಪರಿಸರ ನಿರ್ಮಿಸೋಣ ಎಂದು ಅವರು ಆಶಿಸಿದರು.ಬಳಗದ ಸದಸ್ಯರಾದ ಆರ್. ಕುಮಾರ್, ರಘು, ಕಾರ್ತಿಕ್, ಗೌತಮ್, ವಿವೇಕ್ ಹಾಗೂ ಇನ್ನರ್ ವ್ಹೀಲ್ ಕ್ಲಬ್‌ಸದಸ್ಯರಾದ ಲಕ್ಷ್ಮಿ ರಾಜೀವ್, ಎಸ್‌. ಸಂಧ್ಯಾ, ಲಾವಣ್ಯ, ಯು. ಸಂಧ್ಯಾ, ಲಕ್ಷ್ಮೀ, ಸವಿತಾ, ಸಮಿತಾ, ವಿಜಯ ಪಾಲ್ಗೊಂಡಿದ್ದರು.