ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿಗೆ ನೂತನ ಶ್ರಮಿಕ ವಸತಿ ಶಾಲೆ ಮಂಜೂರಾಗಿದೆ. ತಾಲೂಕಿನ ಬೀರೇಶ್ವರ ಗ್ರಾಮದಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು, ಒಂದು ವರ್ಷದೊಳಗೆ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದ್ದಾರೆ.ಶ್ರಮಿಕ ವಸತಿ ಶಾಲೆಗಾಗಿ 35.75 ಕೋಟಿ ರು. ಮಂಜೂರಾಗಿದೆ. ಇದರಲ್ಲಿ 31 ಕೋಟಿ ರು. ವೆಚ್ಚದಲ್ಲಿ ಕಟ್ಟಡ 1 ಕೋಟಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ, 3 ಕೋಟಿ ವೆಚ್ಚದಲ್ಲಿ ಪೀಠೋಪಕರಣ, 75 ಲಕ್ಷ ರು. ವೆಚ್ಚದಲ್ಲಿ ಲ್ಯಾಬ್ ಉಪಕರಣಗಳ ಪೂರೈಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ 1125.25 ಕೋಟಿ ರು. ವಸತಿ ಶಾಲೆಗಳು ಪ್ರಾರಂಭವಾಗಲಿವೆ.6ನೇ ತರಗತಿಯಿಂದ 12ನೇ ತರಗತಿವರೆಗೆ ವಸತಿ ಶಾಲೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಶಾಲೆಯಲ್ಲಿ ಪ್ರತಿ ತರಗತಿಗೆ ಒಂದರಂತೆ ಏಳು ತರಗತಿ ಕೊಠಡಿಗಳು 5 ಪ್ರಯೋಗಾಲಯಗಳು, ಗ್ರಂಥಾಲಯ ಬಹುಮಹಡಿ ಚಟುವಟಿಕೆ ಕೊಠಡಿ ಹಾಗೂ ಕ್ರೀಡಾ ಸಾಮಗ್ರಿಗಳ ಕೊಠಡಿ, ಕಚೇರಿ ಕೊಠಡಿ, ಸಿಬ್ಬಂದಿ ಕೊಠಡಿ ಸೇರಿದಂತೆ ಹಲವು ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳು, ಭೋಜನಾಲಯ ಹಾಗೂ ಅಡುಗೆ ಮನೆ ಶಿಕ್ಷಕರಿಗೆ ಪ್ರತ್ಯೇಕ ವಸತಿ ಗೃಹಗಳನ್ನು ನಿರ್ಮಾಣ, ಪ್ರಯೋಗಾಲಯ ಉಪಕರಣಗಳು, ಪೀಠೋಪಕರಣಗಳ ಸಮೇತ ಸಂಪೂರ್ಣ ಮೂಲಭೂತ ಸೌಕರ್ಯ ಒದಗಿಸಲಾಗುವುದು.
ಪ್ರತಿ ಶಾಲೆಯ ಒಟ್ಟು ವಿಸ್ತೀರ್ಣ 7720.56 ಚ.ಮೀ(83073.22 ಚದರ ಅಡಿ) ಹೊಂದಿರಲಿದೆ. ಮಂಡ್ಯ ಹಾಗೂ ನಾಗಮಂಗಲ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದ್ದು ಎಲ್ಲಾ ವಲಯದಲ್ಲೂ ಸರ್ವತೋಮುಖ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ನಮ್ಮದು ಅಭಿವೃದ್ಧಿ ಕೆಲಸ, ವಿರೋಧಿಗಳದ್ದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.