37,393 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

KannadaprabhaNewsNetwork |  
Published : Apr 04, 2026, 03:30 AM IST
Abhishek Sriram | Kannada Prabha

ಸಾರಾಂಶ

ಡಾ.ಮನಮೋಹನ ಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವವು ಶನಿವಾರ ವಿವಿಯ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆಯಲಿದ್ದು, ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಪೂರೈಸಿರುವ ಒಟ್ಟು 37,393 ವಿದ್ಯಾರ್ಥಿಗಳು ಪದವಿ ಸ್ವೀಕಾರಕ್ಕೆ ಅರ್ಹರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಡಾ.ಮನಮೋಹನ ಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವವು ಶನಿವಾರ ವಿವಿಯ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆಯಲಿದ್ದು, ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಪೂರೈಸಿರುವ ಒಟ್ಟು 37,393 ವಿದ್ಯಾರ್ಥಿಗಳು ಪದವಿ ಸ್ವೀಕಾರಕ್ಕೆ ಅರ್ಹರಾಗಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ವಿವಿಯ ಕುಲಪತಿ ಪ್ರೊ.ರಮೇಶ್‌ ಬಿ., ಈ ಬಾರಿ ಸ್ನಾತಕೋತ್ತರ ವಿಭಾಗದಲ್ಲಿ ಒಟ್ಟು 7,484 ವಿದ್ಯಾರ್ಥಿಗಳು, ಪದವಿ ವಿಭಾಗದಲ್ಲಿ 29,880 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲು ಅರ್ಹರಾಗಿದ್ದಾರೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11.30ಕ್ಕೆ ಟಿಕೋತ್ಸವ ಆರಂಭವಾಗಲಿದೆ. ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ (ಡಿಆರ್‌ಡಿಒ) ಮಹಾನಿರ್ದೇಶಕ ಡಾ.ವಿನಯ್‌ಕುಮಾರ್‌ ದಾಸ್‌ ಮುಖ್ಯ ಅತಿಥಿಗಳಾಗಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತಿತರ ಗಣ್ಯರು ಭಾಗವಹಿಸುವರು. ಸಾಂಕೇತಿಕವಾಗಿ ಒಂದಷ್ಟು ವಿದ್ಯಾರ್ಥಿಗಳಿಗೆ ಗಣ್ಯರು ಪದವಿ ಪ್ರದಾನ ಮಾಡುವರು. ನಂತರ ಉಳಿದೆಲ್ಲಾ ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುವುದು ಎಂದರು.

71 ರ್‍ಯಾಂಕ್‌ ವಿದ್ಯಾರ್ಥಿಗಳಿಗೆ 64 ಚಿನ್ನದ ಪದಕ, ನಗದು:

ಈ ಬಾರಿ ವಿವಿಧ ಸ್ನಾತಕೋತ್ತರ ಪದವಿಗಳಲ್ಲಿ 42 ವಿದ್ಯಾರ್ಥಿಗಳು ಹಾಗೂ ಪದವಿಯಲ್ಲಿ 29 ಮಂದಿ ಸೇರಿ ಒಟ್ಟು 71 ಮಂದಿ ರ್‍ಯಾಂಕ್‌ ಪಡೆದಿದ್ದಾರೆ. ಇವರಿಗೆ ವಿಶ್ವವಿದ್ಯಾಲಯ ಮತ್ತು ದಾನಿಗಳು ಸ್ಥಾಪಿಸಿರುವ 64 ಚಿನ್ನದ ಪದಕ ಮತ್ತು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು. ಅಲ್ಲದೆ, ಎಂಟು ವಿಭಾಗಗಳಲ್ಲಿ ಒಟ್ಟು 23 ಸಂಶೋಧನಾರ್ಧಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಆರು ಜನರಿಗೆ ಗೌರವ ಡಾಕ್ಟರೇಟ್‌ ನೀಡಲಾಗುವುದು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ನವೀನ್‌ ಜೋಸೆಫ್‌, ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್‌ ಬಿ.ಕುಡೇನಟ್ಟಿ, ವಿತ್ತಾಧಿಕಾರ ವಿಜಯಲಕ್ಷ್ಮಿ ಮತ್ತಿತರ ಅಧಿಕಾರಿಗಳು ಇದ್ದರು.

ರೈತನ ಮಗಳಿಗೆ ನಾಲ್ಕು ಚಿನ್ನ

ಡಾ.ಮನಮೋಹನ ಸಿಂಗ್‌ ಬೆಂ.ನಗರ ವಿವಿಯ ವಿದ್ಯಾರ್ಥಿನಿ ಸ್ನೇಹ ಟಿ. ರೈತ ಕುಟುಂಬದ ಮಗಳು. ರಸಾಯನಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ಅತಿ ಹೆಚ್ಚು 4 ಚಿನ್ನ ಪಡೆದಿದ್ದಾರೆ. ಅದೇ ರೀತಿ ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್‌ ಆಫ್‌ ಕಾಮರ್ಸ್‌ ಮತ್ತು ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿ ಅಭಿಷೇಕ್‌ ಶ್ರೀರಾಮ್‌ ಕಾಮರ್ಸ್‌ ಪದವಿಯಲ್ಲಿ ಗರಿಷ್ಠ ಅಂಕ ಗಳಿಸಿ 3 ಚಿನ್ನದ ಪದಕ, ಕೃಪಾನಿಧಿ ಕಾಲೇಜಿನ ವಿದ್ಯಾರ್ಥಿನಿ ದಿವ್ಯಶ್ರೀ ಎಸ್‌. ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌ ಪದವಿಯಲ್ಲಿ ಗರಿಷ್ಠ ಅಂಕ ಪಡೆದು 3 ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ನಾನು ದೇವನಹಳ್ಳಿ ತಾಲೂಕಿನ ದೊಡ್ಡಸನ್ನೆ ಗ್ರಾಮದ ನಿವಾಸಿ. ತಂದೆ ಕೃಷಿಕರು. ಅಮ್ಮ ಗೃಹಿಣಿ. ಅರ್ಧ ದಿನ ಪ್ರಯಾಣದಲ್ಲಿ ಕಳೆದು ಹೋಗುತ್ತಿತ್ತು. ಕಾಲೇಜಿನ ಬೋಧಕ ವರ್ಗದ ಮಾರ್ಗದರ್ಶನ ಮತ್ತು ಪೋಷಕರ ಸಹಕಾರ ದೊಡ್ಡದಿದೆ. ನನ್ನ ಸಾಧನೆಗೆ ಮನೆಯವರೆಲ್ಲರೂ ಬಹಳ ಸಂತೋಷಪಟ್ಟಿದ್ದಾರೆ. ಸದ್ಯ ರಸಾಯನಶಾಸ್ತ್ರ ಎಂಎಸ್‌ಸಿ ಮುಗಿಸಿ ಚಿಕ್ಕಬಳ್ಳಾಪುರದ ಬಿಜಿಎಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

-ಸ್ನೇಹ ಟಿ., ಎಂಎಸ್ಸಿ ರಸಾಯನಶಾಸ್ತ್ರದಲ್ಲಿ 4 ಚಿನ್ನದ ಪದಕ

ನಾನು ದಿನವೂ ಇಷ್ಟು ಗಂಟೆ ಅಂತ ಓದುತ್ತಿರಲಿಲ್ಲ. ತಂದೆ, ತಾಯಿಯೂ ನನಗೆ ಯಾವುದೇ ಒತ್ತಡ ಹೇರುತ್ತಿರಲಿಲ್ಲ. ಆದರೆ ಅಂದಿನ ಪಾಠ ಅಂದೇ ಓದುತ್ತಿದ್ದೆ. ನಂತರ ಪುನರ್‌ ಮನನ ಮಾಡುತ್ತಿದ್ದೆ. ರ್‍ಯಾಂಕ್‌ ಬರಬೇಕೆಂಬ ಗುರಿ ಏನೂ ಇರಲಿಲ್ಲ. ಹಿಂದಿನ ವರ್ಷದ ಫಲಿತಾಂಶಕ್ಕಿಂತ ಇನ್ನಷ್ಟು ಉತ್ತಮ ಫಲಿತಾಂಶ ಬರಬೇಕೆಂದು ಓದುತ್ತಿದ್ದೆ. ಆದರೆ, ರ್‍ಯಾಂಕ್‌ ಜೊತೆಗೆ 3 ಚಿನ್ನದ ಪದಕ ಬಂದಿರುವುದು ಸಂತಸ ತಂದಿದೆ. ಯುಪಿಎಸ್ಸಿ ಪರೀಕ್ಷೆಗೆ ತಯಾರಾಗುತ್ತಿದ್ದೇನೆ.

-ಅಭಿಷೇಕ್‌ ಶ್ರೀರಾಮ್‌, ಕಾಮರ್ಸ್‌ ಪದವಿಯಲ್ಲಿ 3 ಚಿನ್ನದ ಪದಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ಅನಾಹುತ ತಡೆಗೆ ಸನ್ನದ್ಧರಾಗಲು ತಾಕೀತು
ಕರಗದ ಅವಧಿಯಲ್ಲಿ 12 ದಿನಗಳಲ್ಲಿ 455 ಟನ್ ತ್ಯಾಜ್ಯ ವಿಲೇವಾರಿ