ತುಮಕೂರಿನಲ್ಲಿ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಆತಿಥ್ಯ: ಶಿವಾನಂದ ತಗಡೂರು

KannadaprabhaNewsNetwork | Published : Feb 5, 2024 1:45 AM

ಸಾರಾಂಶ

ಮುಂದಿನ ಬಾರಿ ನಡೆಯಲಿರುವ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ನಡೆಸಲು ತುಮಕೂರು, ಶಿವಮೊಗ್ಗ, ಗಡಿಭಾಗದ ಜಿಲ್ಲೆಯಾದ ರಾಯಚೂರಿನಲ್ಲಿ ಮುಂದಿನ ಪತ್ರಕರ್ತರ ಸಮ್ಮೇಳನ ನಡೆಸಲು ಭಾರೀ ಬೇಡಿಕೆ ಬಂದಿದ್ದು, ಗಡಿ ಜಿಲ್ಲೆಗಳಾದ ಕಲಬುರಗಿ, ವಿಜಯಪುರ ಮತ್ತು ಕರಾವಳಿಯಲ್ಲೂ ನಾವು ಸಮ್ಮೇಳನ ಮಾಡಿದ್ದೇವೆ. ಈಗ ಶಿವಮೊಗ್ಗ, ತುಮಕೂರು ಮತ್ತು ರಾಯಚೂರು ಜಿಲ್ಲೆಗಳಿಂದ ಸಾಕಷ್ಟು ಪೈಪೋಟಿ ಬಂದಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಂದಿನ ಬಾರಿ ನಡೆಯಲಿರುವ ರಾಜ್ಯಮಟ್ಟದ 39ನೇ ಪತ್ರಕರ್ತರ ಸಮ್ಮೇಳನ ಕಲ್ಪತರು ನಾಡು ತುಮಕೂರು ಜಿಲ್ಲೆಗೆ ನೀಡಲು ಪ್ರತಿನಿಧಿಗಳ ಸಭೆಯಲ್ಲಿ ನಿರ್ಣಯಿಸಲಾಯಿತು. ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಭಾನುವಾರ ನಡೆದ ಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಣಯವನ್ನು ರಾಜ್ಯಾಧ್ಯಕ್ಷರು ಘೋಷಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆದ 38ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಈ ಹಿಂದೆ ನಡೆದ ಎಲ್ಲಾ ಸಮ್ಮೇಳನಕ್ಕಿಂತ ಹೆಚ್ಚು ಅದ್ಧೂರಿಯಾಗಿ ನಡೆದಿದೆ. ಈ ಯಶಸ್ವಿಗೆ ಜಿಲ್ಲಾ ಘಟಕಕ್ಕೆ ಅಭಿನಂದನೆ ಸಲ್ಲಿಸಿದರು.

ಮುಂದಿನ ಬಾರಿ ನಡೆಯಲಿರುವ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ನಡೆಸಲು ತುಮಕೂರು, ಶಿವಮೊಗ್ಗ, ಗಡಿಭಾಗದ ಜಿಲ್ಲೆಯಾದ ರಾಯಚೂರಿನಲ್ಲಿ ಮುಂದಿನ ಪತ್ರಕರ್ತರ ಸಮ್ಮೇಳನ ನಡೆಸಲು ಭಾರೀ ಬೇಡಿಕೆ ಬಂದಿದ್ದು, ಗಡಿ ಜಿಲ್ಲೆಗಳಾದ ಕಲಬುರಗಿ, ವಿಜಯಪುರ ಮತ್ತು ಕರಾವಳಿಯಲ್ಲೂ ನಾವು ಸಮ್ಮೇಳನ ಮಾಡಿದ್ದೇವೆ. ಈಗ ಶಿವಮೊಗ್ಗ, ತುಮಕೂರು ಮತ್ತು ರಾಯಚೂರು ಜಿಲ್ಲೆಗಳಿಂದ ಸಾಕಷ್ಟು ಪೈಪೋಟಿ ಬಂದಿದೆ. ಮೊದಲು ಸಮ್ಮೇಳನ ನಡೆಸಲು ಮುಂದೆ ಬನ್ನಿ ಎಂದರೆ ನೂರು ಕಿ.ಮೀ. ದೂರ ಓಡುತ್ತಿದ್ದರು. ಈಗ ನಮಗೆ ಕೊಡಿ ಎಂದು ಪೈಪೋಟಿ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಎಲ್ಲರೂ ಒಪ್ಪಿಗೆ ಮೇರೆಗೆ ಮುಂದಿನ ಬಾರಿ 39ನೇ ರಾಜ್ಯ ಮಟ್ಟದ ಸಮ್ಮೇಳನ ನಡೆಸಲು ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ನಡೆಸಲು ಪ್ರತಿನಿಧಿಗಳ ಸಭೆ ನಿರ್ಣಯಿಸಿದೆ ಎಂದು ಘೋಷಣೆ ಮಾಡಿದರು.

ಸಭೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಭವಾನಿ ಸಿಂಗ್ ಟಾಕೂರ್, ಅಜ್ಜಮಾಡ ರಮೇಶ್ ಪುಟ್ಟಪ್ಪ, ಪುಂಡಲಿಕ ಪಿ.ಬಾಲಾಜಿ, ಮತ್ತಿಕೆರೆ ಜಯರಾಂ, ಸೋಮಶೇಖರ್ ಕೆರೆಗೋಡು, ನಿಂಗಪ್ಪ ಚೌವಡಿ, ವಸುದೇವ ಹೊಳ್ಳ ಸೇರಿದಂತೆ ರಾಜ್ಯ ಸಮಿತಿ ಪದಾಧಿಕಾರಿಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.

ಬಾಕ್ಸ್..

ಪ್ರತಿನಿಧಿಗಳ ಸಭೆಯ ನಿರ್ಣಯಗಳೇನು?

* ಮೊದಲ ನಿರ್ಣಯವಾಗಿ ಎಲ್ಲಾ ಕಾರ್ಯನಿರತ ಪತ್ರಕರ್ತರಿಗೂ ಬಸ್ ಪಾಸ್ ನೀಡಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.

* ಮುಂದಿನ ಸಮ್ಮೇಳನ ನಡೆಸಲು ₹50 ಲಕ್ಷ ನೀಡಬೇಕು ಎಂಬ ಹಕ್ಕೋತ್ತಾಯ ಮಂಡಿಸಿದರು.

* ಸಮ್ಮೇಳನದಲ್ಲಿ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಿದ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಂಘಕ್ಕೆ ಅಭಿನಂದನಾ ನಿರ್ಣಯ, ಕ್ರಿಕೆಟ್ ಟೂರ್ನಿಯನ್ನು ನಡೆಸಿದ ಮಂಗಳೂರು ಸಂಘಕ್ಕೆ ಅಭಿನಂದನಾ ನಿರ್ಣಯಿಸಲಾಗಿದೆ.

* ಪತ್ರಕರ್ತರಿಗೂ ಆರೋಗ್ಯ ಕ್ಷೇಮಾಭಿವೃದ್ಧಿ ಯೋಜನೆ ಪ್ರಾರಂಭ, ತಾಲೂಕು ಮಟ್ಟದಲ್ಲಿ ಕಾರ್ಯನಿರತ ಪತ್ರಕರ್ತರ ಘಟಕ ಸ್ಥಾಪಿಸಬೇಕು.

* ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡಬೇಕು. ಪಿಯುಸಿ, ಪದವಿ ಓದುತ್ತಿರುವ ಪತ್ರಕರ್ತರ ಮಕ್ಕಳಿಗೆ ಲ್ಯಾಪ್‌ಟಾಪ್ ನೀಡಬೇಕು.

* ಪತ್ರಕರ್ತರು ಮೃತಪಟ್ಟರೆ 2 ಲಕ್ಷ ರು. ಸಹಾಯಧನ ನೀಡಬೇಕು. ಟೋಲ್‌ನಲ್ಲಿ ಉಚಿತ ಪ್ರವೇಶ ಒದಗಿಸಬೇಕು.

Share this article