ವಿಜಯೋತ್ಸವ ವೇಳೆ ಬಿಜೆಪಿಗರಿಗೆ ಇರಿತ: ಐವರ ಬಂಧನ

KannadaprabhaNewsNetwork |  
Published : Jun 11, 2024, 01:33 AM IST
ಬೋಳಿಯಾರಿನಲ್ಲಿ ಹಲ್ಲೆ ಪ್ರಕರಣಕ್ಕೂ ಮುನ್ನ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ. | Kannada Prabha

ಸಾರಾಂಶ

ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಭಾನುವಾರ ರಾತ್ರಿ ಉಳ್ಳಾಲ ತಾಲೂಕಿನ ಬೋಳಿಯಾರಿನಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಕೊಣಾಜೆ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಭಾನುವಾರ ರಾತ್ರಿ ಉಳ್ಳಾಲ ತಾಲೂಕಿನ ಬೋಳಿಯಾರಿನಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಕೊಣಾಜೆ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಶಾಕೀರ್ (28), ಅಬ್ದುಲ್ ರಜಾಕ್ (40), ಅಬೂಬಕರ್‌ ಸಿದ್ದಿಕ್ (35), ಸವಾದ್ (18) ಹಾಗೂ ಹಫೀಝ್(24) ಬಂಧಿತರು. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಇವರನ್ನು ಬಂಧಿಸಲಾಗಿದೆ. ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರ್ ಬಾರ್‌ ಮುಂಭಾಗದಲ್ಲಿ ಭಾನುವಾರ ತಡರಾತ್ರಿ ಚೂರಿ ಇರಿತ ಪ್ರಕರಣ ನಡೆದಿತ್ತು. ಮೋದಿ ಪದಗ್ರಹಣ ಬಳಿಕದ ವಿಜಯೋತ್ಸವದ ನಂತರ ಮೂವರು ಬಿಜೆಪಿ ಕಾರ್ಯಕರ್ತರು ಬೋಳಿಯಾರ್ ಮಸೀದಿ ಮುಂದೆ ಹೋಗುವಾಗ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವೇಳೆ ಕೆಲ ಬೈಕ್‌ಗಳಲ್ಲಿ 20-25 ಮುಸ್ಲಿಂ ಯುವಕರ ತಂಡ ಅವರನ್ನು ಹಿಂಬಾಲಿಸಿಕೊಂಡು ಬಂದು ಬೋಳಿಯಾರ್ ಬಾರ್‌ಗೆ ಬಂದಿದ್ದರು. ಬಾರ್ ಬಳಿ ವಾಗ್ವಾದ ನಡೆದು ಮೂವರು ಯುವಕರನ್ನು ಥಳಿಸಿದ್ದರು. ಇವರಲ್ಲಿ ಹರೀಶ್ (41) ಹಾಗೂ ನಂದಕುಮಾರ್ (24) ಅವರಿಗೆ ಇರಿದಿದ್ದರು. ಘಟನೆ ಸಂಬಂಧ ಇನ್ನೂ ಹಲವರ ಪತ್ತೆಗಾಗಿ ಬಲೆ ಬೀಸಲಾಗಿದೆ.

-------------

ಪ್ರತಿದೂರು: ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತ ಪ್ರಕರಣದಲ್ಲಿ ಬೋಳಿಯಾರು ಮಸೀದಿ ಎದುರು ಘೋಷಣೆ ಕೂಗಿದ ಆರೋಪದಲ್ಲಿ ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧವೂ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಸೀದಿ ಎದುರು ಪ್ರಚೋದನಕಾರಿ ಘೋಷಣೆ ಕೂಗಿದ ಆರೋಪದಡಿ ಸುರೇಶ್, ವಿನಯ್, ಸುಭಾಷ್, ರಂಜಿತ್ ಹಾಗೂ ಧನಂಜಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬೋಳಿಯಾರ್ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಕೆ.ಅಬ್ದುಲ್ಲ ನೀಡಿದ ದೂರಿನಡಿ ಎಫ್ಐಆರ್‌ ದಾಖಲಾಗಿದೆ.

ಭಾನುವಾರ ರಾತ್ರಿ 8.50 ರ ಸುಮಾರಿಗೆ ಕೆಲ ಯುವಕರು ಮಸೀದಿ ಎದುರು ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆಂದು ದೂರು ದಾಖಲಿಸಿದ್ದು, ಮಸೀದಿ ಬಳಿ ನಿಂತಿದ್ದವರಿಗೂ ಕೆಟ್ಟ ಶಬ್ದಗಳಲ್ಲಿ ನಿಂದಿಸಿದ್ದಾರೆಂದು ಆರೋಪಿಸಲಾಗಿತ್ತು. ಈ ಸಂಬಂಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿ ಟಿವಿ ದೃಶ್ಯ ಲಭ್ಯ: ಘಟನೆಗೂ ಮುನ್ನ ಬೋಳಿಯಾರು ಮಸೀದಿ ಮುಂಭಾಗ ನಡೆದ ಗಲಾಟೆ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಮಸೀದಿ ಮುಂದೆ ಸಾಗಿದ ವಿಜಯೋತ್ಸವ ಮೆರವಣಿಗೆಯಲ್ಲಿ ಘೋಷಣೆ ಕೂಗಿದ್ದಾರೆ. ಅಲ್ಲಿಂದ ಮತ್ತೆ ಮಸೀದಿ ಬಳಿ ಬೈಕ್ ನಲ್ಲಿ ಬಂದ ಮೂವರು ಬಿಜೆಪಿ ಕಾರ್ಯಕರ್ತರು ಮಸೀದಿ ಎದುರು ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಹೇಳಿದ್ದಾರೆ.

ಈ ವೇಳೆ ಆಕ್ರೋಶಗೊಂಡ ಮಸೀದಿ ಮುಂಭಾಗದಲ್ಲಿದ್ದ ಯುವಕರು ಅವರನ್ನು ಅಟ್ಟಾಡಿಸಿಕೊಂಡು ಹೋಗಿರುವುದು ಸಿ.ಸಿ. ಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ