ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆಯ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಜಯಚಾಮಚರಾಜೇಂದ್ರ ಒಡೆಯರ್ ವೃತ್ತದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ೨ ಕೋಟಿ ರು., ಪ್ರಮುಖ ವೃತ್ತಗಳ ಅಭಿವೃದ್ಧಿ, ಕನ್ನಡಭವನ ನಿರ್ಮಾಣಕ್ಕೆ ೧ ಕೋಟಿ ರು. ಮುಖ್ಯ ರಸ್ತೆಗಳ ಫುಟ್ಪಾತ್ ಅಭಿವೃದ್ಧಿ, ನಗರ ಸೌಂದರ್ಯೀಕರಣ, ತಾಪಂ ಕಟ್ಟಡ ಕಾಮಗಾರಿಗೆ ೨.೫೦ ಕೋಟಿ ರು., ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣಕ್ಕೆ ೨ ಕೋಟಿ ರು., ಕೆರಗೋಡು ಶ್ರೀ ಪಂಚಲಿಂಗೇಶ್ವರಸ್ವಾಮಿ ದೇಗಲ ಅಭಿವೃದ್ಧಿಗೆ ೧ ಕೋಟಿ ರು. ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಿರುವುದಾಗಿ ತಿಳಿಸಿದರು.
ಉದ್ದೇಶಿತ ಕನ್ನಡ ಭವನ ನಿರ್ಮಾಣ ಜಾಗದಿಂದ ಬ್ಯಾಸ್ಕೆಟ್ ಬಾಲ್ ಕ್ರೀಡೆಗೆ ತೊಂದರೆಯಾಗುವ ವಿಷಯ ನನಗೆ ತಿಳಿದಿಲ್ಲ. ಚಿಕ್ಕಮಂಡ್ಯ ಬಳಿ ಕನ್ನಡ ಭವನ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ನಗರದಿಂದ ದೂರವಿರುವ ಕಾರಣ ಅಲ್ಲಿಗೆ ಯಾರೂ ಹೋಗುವುದಿಲ್ಲವೆಂದು ನಗರದೊಳಗೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದರು.ಮಂಡ್ಯ ನಗರದ ಬನ್ನೂರು ರಸ್ತೆ ಅಭಿವೃದ್ಧಿಗೆ ೬.೪೦ ಕೋಟಿ ರು. ಡಲ್ಫ್ ವತಿಯಿಂದ ಯೋಜನೆ ಮಂಜೂರಾಗಿದೆ. ಫುಟ್ಪಾತ್ ನಿರ್ಮಾಣ ಹಾಗೂ ಸೈಕಲ್ ಪಾಥ್, ವಿದ್ಯುತ್ ದೀಪಗಳ ಅಳವಡಿಕೆಗೆ ಕ್ರಮ ವಹಿಸಲಾಗುವುದು. ೨ ಕೋಟಿ ರು. ವೆಚ್ಚದಲ್ಲಿ ಎಪಿಎಂಸಿ ರಸ್ತೆ ಅಭಿವೃದ್ಧಿ ಪೌರಾಡಳಿತ ಇಲಾಖೆಯಿಂದ ೧೦ ಕೋಟಿ ರು. ವೆಚ್ಚದಲ್ಲಿ ನಗರವ್ಯಾಪ್ತಿಯ ಮೂಲ ಸೌಕರ್ಯಗಳ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ ಎಂದರು.
ಬಿಜೆಪಿಯವರಿಗೆ ಅರಿಶಿನ-ಕುಂಕುಮವೇ ಮುಖ್ಯವಾಗಿದೆ. ಗಲಾಟೆ ನಡೆದಾಗ ಶಾಂತಿ ಬಯಸುವುದಕ್ಕಿಂದಲೂ ಪ್ರಚೋದನೆ ನೀಡುವುದು ಅವರ ಕೆಲಸ. ಧರ್ಮದ ವಿಚಾರದಲ್ಲಿ ಅಡ್ಡಿಪಡಿಸುವುದೇ ಬಿಜೆಪಿಯ ಧರ್ಮವಾಗಿದೆ ಎಂದು ಕುಟುಕಿದರು.
ಮಂಡ್ಯ ನಗರದ ಸುತ್ತಮುತ್ತಲಿನ ಪಂಚಾಯ್ತಿಗಳನ್ನು ನಗರಸಭೆಗೆ ಸೇರಿಸಿಕೊಂಡು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಬೇಕಿದೆ. ಪಂಚಾಯ್ತಿಗಳನ್ನು ಸೇರಿಸಿಕೊಳ್ಳುವ ಸಂಬಂಧ ಸರ್ಕಾರದ ಹಂತದಲ್ಲಿ ಮಾತುಕತೆ ನಡೆಯುತ್ತಿರುವುದಾಗಿ ಹೇಳಿದರು.