ಮುನವಳ್ಳಿ : ಶಿಕ್ಷಣ, ಯೋಗ, ಸಾಮಾಜಿಕ ಕಾರ್ಯದಲ್ಲಿ ಶ್ರೀಸೋಮಶೇಖರ ಮಠ ಮುಂಚೂಣಿಯಲ್ಲಿದೆ. ಈ ಸಂಸ್ಥೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಪ್ರಸಕ್ತ ವರ್ಷದಲ್ಲಿ ₹50 ಲಕ್ಷ ಸಹಾಯ ಮಾಡುವುದಾಗಿ ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಶ್ರೀ ಸೋಮಶೇಖರ ಮಠದ ಮುರುಘೇಂದ್ರ ಶ್ರೀಗಳ 51ನೇ ಜನ್ಮದಿನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿದರು. ಮಠವು ಇನ್ನು ಹೆಚ್ಚಿನ ರೀತಿಯಲ್ಲಿ ಬೆಳೆವಣಿಗೆ ಹೊಂದಲಿ ಹಾಗೂ ಪೂಜ್ಯರ ಹೆಸರು ರಾಷ್ಟ್ರಾದ್ಯಂತ ಪಸರಿಸಲಿ ಎಂದರು.
ಕುಂದರಗಿ ಅಮರಸಿದ್ದೇಶ್ವರ ಶ್ರೀ ಮಾತನಾಡಿ, ಮುರುಘೇಂದ್ರ ಶ್ರೀಗಳ ಶಕ್ತಿಯಿಂದ ಹಾಗೂ ಭಕ್ತರ ಸಹಕಾರದಿಂದ ಮಠವು ನಾಡಿನಾದ್ಯಂತ ಹೆಸರುವಾಸಿಗಿದೆ. ಮುರುಘೇಂದ್ರ ಶ್ರೀಗಳು ಭಕ್ತರನ್ನೆಲ್ಲ ಒಗ್ಗೂಡಿಸಿಕೊಂಡು ಸಮಾಜಕ್ಕೆ ಉಪಯುಕ್ತವಾಗುವಂತಹ ಕೆಲಸ ಮಾಡುತ್ತಿದ್ದಾರೆ. ಯೋಗ ಹಾಗೂ ಶಿಕ್ಷಣ ಸಂಸ್ಥೆ ಹುಟ್ಟುಹಾಕಿ ಹಲವಾರು ಬಡಮಕ್ಕಳಿಗೆ ಉಚಿತವಾಗಿ ಶಿಕ್ಷಣ ಜೊತೆಗೆ ಮಕ್ಕಳಿಗೆ ಶಾಲಾ ಸಲಕರಣೆಗಳನ್ನು ವಿತರಿಸುತ್ತಿರುವದು ಶ್ಲಾಘನೀಯ ಎಂದರು.
ಮುರುಘೇಂದ್ರ ಶ್ರೀಗಳು ಮಾತನಾಡಿ, ಜಾತ್ಯಾತೀತ, ಪಕ್ಷಾತೀತ ಶ್ರೀಮಠವು ಆಧ್ಯಾತ್ಮೀಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆಯಲು ಹಾನಗಲ್ ಕುಮಾರೇಶ್ವರರ ಶಕ್ತಿ ಪ್ರೇರಕವಾಗಿದೆ. ಭಕ್ತರೇ ಶ್ರೀಮಠದ ಶಕ್ತಿಯಾಗಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಪಂಚನಗೌಡ ದ್ಯಾಮನಗೌಡರ ಮಾತನಾಡಿದರು. ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಉಪ್ಪಿನಬೆಟಗೇರಿ ಕುಮಾರ ವಿರೂಪಾಕ್ಷ ಶ್ರೀ ಆಶೀರ್ವಚನ ನೀಡಿದರು. ಅಮೀನಗಡದ ಪ್ರಭುಶಂಕರಾಜೇಂದ್ರ ಶ್ರೀ, ಚೀಕಲಪರ್ವಿ ಸದಾಶಿವ ಶ್ರೀ, ಬೈಲಹೊಂಗಲದ ಪ್ರಭುನೀಲಕಂಠ ಶ್ರೀ, ಸತ್ಸಂಗ ಆಶ್ರಮದ ನಿತ್ಯಾನಂದ ಶ್ರೀ, ಗೊರವನಕೊಳ್ಳದ ಶಿವಾನಂದ ಶ್ರೀ ಸೇರಿ ಅನೇಕ ಶ್ರೀಗಳು ಉಪಸ್ಥಿತರಿದ್ದರು.
ರವೀಂದ್ರ ಯಲಿಗಾರ, ಚಂದ್ರು ಜಂಬ್ರಿ, ವಿರೂಪಾಕ್ಷ ಮಾಮನಿ, ಅರುಣಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಸೋಮಶೇಖರ ಯಲಿಗಾರ, ಶ್ರೀಕಾಂತ ನೇಗಿನಾಳ, ಈರಣ್ಣ ಸಂಕಣ್ಣವರ, ಡಾ.ಎಂ.ಬಿ.ಅಷ್ಟಗಿಮಠ, ಮಂಜುನಾಥ ಭಂಡಾರಿ, ಶೇಖರ ಮುಪ್ಪಿನವರಮಠ, ಎಂ.ಎಚ್.ಪಾಟೀಲ್, ಕೆ.ಬಿ.ನಲವಡೆ ಸೇರಿದಂತೆ ಸರ್ವ ಸಂಘಗಳ ಸದಸ್ಯರು, ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
ವಿಶೇಷಚೇತನ 61 ಹಿರಿಯರಿಗೆ ಉರುಗೋಲು, ಜೇವೂರು ಶಿಕ್ಷಣದ ಕಿವುಡು ಹಾಗೂ ಮೂಕ ಮಕ್ಕಳಿಗೆ ಹಾಗೂ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಶಾಲಾ ಸಲಕರಣೆ ವಿತರಿಸಲಾಯಿತು. ಶಿಕ್ಷಕ ಬಿ.ಬಿ.ಹೂಲಿಗೊಪ್ಪ, ಸ್ವಾಗತಿಸಿ ವಂದಿಸಿದರು. ಗಂಗಾದರ ಗೊರಾಬಾಳ ನಿರೂಪಿಸಿದರು.