ಭೂ ದಾಖಲೆಗಳ ಇಲಾಖೆ ಕೆಲಸದ ಒತ್ತಡದ ನಡುವೆಯೂ ಸರ್ವೆ ಕಾರ್ಯವನ್ನು ಮಾಡುತ್ತಿದೆ. ಸರ್ವೆ ಪೂರ್ಣಗೊಂಡ ಕೆರೆಗಳ ಒತ್ತುವರಿದಾರರ ವಿರುದ್ಧ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. ಈ ಹಿಂದೆಯೇ ಕೆರೆ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಸರ್ಕಾರದ ಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಸೂಚನೆಯನ್ನು ಸಹ ನೀಡಿದ್ದರು.
ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸಿರುವ ಜಿಲ್ಲಾಡಳಿತ ಈವರೆಗೆ 1,496 ಕೆರೆಗಳ ಪೈಕಿ 1,226 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಳಿಸಿದ್ದು, 529 ಕೆರೆಗಳ ಒತ್ತುವರಿ ತೆರವುಗೊಳಿಸಿದೆ.
ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸೆಲೆ ಅಲ್ಲಿನ ಕೆರೆ ಕಟ್ಟೆಗಳೇ ಆಗಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಇವುಗಳ ಒತ್ತುವರಿ ಹೆಚ್ಚಾದ ಕಾರಣ ತೆರವು ಕಾರ್ಯದ ಆಗ್ರಹ ಕೇಳಿ ಬರುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದಲೂ ಕೆರೆಗಳ ಒತ್ತುವರಿ ತೆರವಿಗೆ ಪ್ರಯತ್ನ ನಡೆಯುತ್ತಿದ್ದು, ಇದರ ಪರಿಣಾಮ ಇರುವ ಕೆರೆಗಳ ಸರ್ವೆ ಕಾರ್ಯ ನಡೆಯುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 1,496 ಕೆರೆಗಳು ಇವೆ. ಇವುಗಳಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ 110, ಜಿಲ್ಲಾ ಪಂಚಾಯಿತಿಗೆ ಸೇರಿದ 1322, ಸ್ಥಳೀಯ ಸಂಸ್ಥೆಗಳಿಗೆ ಸೇರಿದ 61 ಮತ್ತು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ 3 ಕೆರೆಗಳು ಸೇರಿವೆ. ಬಹುತೇಕ ಎಲ್ಲ ಕೆರೆಗಳು ಒತ್ತುವರಿಯಾಗಿದ್ದು, ಇವುಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಯಾರೂ ಮುಂದಾಗಿರಲಿಲ್ಲ. ಇದರ ಭಾಗವಾಗಿ ಜಿಲ್ಲೆಯಲ್ಲಿ ಒಟ್ಟಾರೆ 1,226 ಕೆರೆಗಳ ಸರ್ವೆ ಕಾರ್ಯವನ್ನು ಭೂದಾಖಲೆಗಳ ಇಲಾಖೆ ಪೂರ್ಣಗೊಳಿಸಿದೆ.
ಬಾಕಿ ಉಳಿದಿರುವ 270 ಕೆರೆಗಳ ಸರ್ವೆ ಕಾರ್ಯವನ್ನು ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಪೂರ್ಣಗೊಳಿಸಬೇಕಿದೆ. ಈಗ 697 ಕೆರೆಗಳ 1,669 ಎಕರೆ ಜಾಗವನ್ನು ಒತ್ತುವರಿ ಗುರುತಿಸಲಾಗಿದ್ದು, 529 ಕೆರೆಗಳ 10,071 ಎಕರೆ ಒತ್ತುವರಿಯಿಂದ ಮುಕ್ತಗೊಂಡಿದೆ. 32 ಕೆರೆಗಳ ಒತ್ತುವರಿ ಜಾಗವನ್ನು ತೆರವು ಮಾಡಲಾಗಿದ್ದು, 665 ಕೆರೆಗಳ 1479 ಎಕರೆ ಒತ್ತುವರಿ ತೆರವಿಗೆ ಬಾಕಿಯಿದೆ.
ಜಿಲ್ಲೆಯ ಐದು ತಾಲೂಕುಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಕೆರೆಗಳ ಮೂಲ ನಕಾಶೆ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಅವುಗಳನ್ನು ಅಳತೆ ಮಾಡುವ ಕಾರ್ಯಕ್ಕೆ ಕಳೆದ ಜುಲೈನಲ್ಲೇ ಚಾಲನೆ ನೀಡಲಾಗಿತ್ತು. ತಾಲೂಕು ಮಟ್ಟದಲ್ಲಿರುವ ಭೂ ಮಾಪಕರು ವಾರದಲ್ಲಿ ಮೂರು ದಿನ ಕೆರೆಗಳನ್ನು ಅಳತೆ ಮಾಡುವ ಕಾರ್ಯದಲ್ಲಿ ತೊಡಗಿದ್ದರು.
ಕೆರೆಗಳ ಅಳತೆಗಾಗಿ ರಾಮನಗರ ತಾಲೂಕಿನಲ್ಲಿ 31, ಚನ್ನಪಟ್ಟಣದಲ್ಲಿ 27, ಮಾಗಡಿಯಲ್ಲಿ 37 ಹಾಗೂ ಕನಕಪುರದಲ್ಲಿ(ಹಾರೋಹಳ್ಳಿ ಒಳಗೊಂಡಂತೆ) 35 ಭೂ ಮಾಪಕರನ್ನು ಒಳಗೊಂಡಂತೆ ಒಟ್ಟು 130 ಜನ ಅಳತೆ ಕಾರ್ಯದಲ್ಲಿ ನಿರತರಾಗಿದ್ದರು ಎಂದು ಜಿಲ್ಲಾ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಬಿ.ಆರ್. ಹನುಮೇಗೌಡ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಅಗತ್ಯ:
ಭೂ ದಾಖಲೆಗಳ ಇಲಾಖೆ ಕೆಲಸದ ಒತ್ತಡದ ನಡುವೆಯೂ ಸರ್ವೆ ಕಾರ್ಯವನ್ನು ಮಾಡುತ್ತಿದೆ. ಸರ್ವೆ ಪೂರ್ಣಗೊಂಡ ಕೆರೆಗಳ ಒತ್ತುವರಿದಾರರ ವಿರುದ್ಧ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. ಈ ಹಿಂದೆಯೇ ಕೆರೆ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಸರ್ಕಾರದ ಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಸೂಚನೆಯನ್ನು ಸಹ ನೀಡಿದ್ದರು. ಆದರೆ ಇದುವರೆಗೂ ಎಷ್ಟು ಪ್ರಕರಣ ದಾಖಲು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಈಗಲಾದರೂ ಸಂಬಂಧಪಟ್ಟ ಇಲಾಖೆಗಳು ತಮ್ಮ ವ್ಯಾಪ್ತಿಯ ಕೆರೆಗಳ ಒತ್ತುವರಿ ತೆರವಿಗೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.