ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹೇಮಾವತಿ ಬಡಾವಣೆಯ ನಿವೇಶನಗಳ 2ನೇ ಹಂತದ ಅಕ್ರಮ-ಸಕ್ರಮಕ್ಕೆ ಅಗತ್ಯ ಕ್ರಮ ವಹಿಸುವಂತೆ ಪುರಸಭಾ ಸದಸ್ಯರು ಆಗ್ರಹಿಸಿದರು.ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಸದಸ್ಯರು ಪಟ್ಟಣದ ವಿವಿಧ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದರು.
ಸಭೆ ಆರಂಭದಲ್ಲಿಯೇ ಹೇಮಾವತಿ ಬಡಾವಣೆ ಮತ್ತು ಟಿ.ಬಿ ಬಡಾವಣೆಯ ಬಗ್ಗೆ ಪ್ರಸ್ತಾಪಿಸಿದ ಸದಸ್ಯರಾದ ಕೆ.ಸಿ. ಮಂಜುನಾಥ್ ಮತ್ತು ಡಿ.ಪ್ರೇಂಕುಮಾರ್ ಹೇಮಾವತಿ ಬಡಾವಣೆಯ 1276 ನಿವೇಶನಗಳಲ್ಲಿ ಮೊದಲ ಹಂತದಲ್ಲಿ 694 ನಿವೇಶನಗಳ ಸಕ್ರಮಾತಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಉಳಿದ 582 ನಿವೇಶನಗಳ ಸಕ್ರಮವಾಗಬೇಕು. ಇದರಿಂದ ಪುರಸಭೆಯ ಆದಾಯದಲ್ಲಿ ಹೆಚ್ಚಳವಾಗಿ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.ಬಡವರಿಗೆ ನಿವೇಶನ ಹಂಚಿಕೆ ಮಾಡುವ ಸದುದ್ದೇಶದಿಂದ ವಶಪಡಿಸಿಕೊಂಡಿರುವ ಟಿ.ಬಿ.ಬಡಾವಣೆಯಲ್ಲಿನ ಪುರಸಭೆಯ ಜಾಗ ಅತಿಕ್ರಮಕ್ಕೆ ಒಳಗಾಗಿದೆ. ಸದರಿ ಜಾಗದ ಅಳತೆ ಮಾಡಿಸಿ ಗಡಿ ಗುರುತಿಸಬೇಕು. ಪಟ್ಟಣದ ಪಾಲಿಟೆಕ್ನಿಕ್ ಆವರಣದೊಳಗಿದ್ದ ಸಾರ್ವಜನಿಕ ರಸ್ತೆ ಮುಚ್ಚಿ ಹೋಗಿದೆ. ಮುಚ್ಚಿಹೋಗಿರುವ ಸರ್ಕಾರಿ ರಸ್ತೆಯನ್ನು ಬಿಡಿಸ ಕೊಡಬೇಕು ಎಂದರು.
ಪಟ್ಟಣದ ನಾಲ್ಕು ದಿಕ್ಕುಗಳಲ್ಲೂ ಪಟ್ಟಣದ ಹೆಸರು ಸೂಚಿಸುವ ಯಾವುದೇ ರೀತಿಯ ಸ್ವಾಗತ ಕಮಾನುಗಳನ್ನು ನಿರ್ಮಿಸಿಲ್ಲ. ಇದರಿಂದ ಪಟ್ಟಣಕ್ಕೆ ಬರುವ ದಾರಿ ಹೋಕರಿಗೆ ಇದು ಯಾವ ಪಟ್ಟಣ ಎನ್ನುವುದೇ ಗೊತ್ತಾಗುತ್ತಿಲ್ಲ. ದಯಮಾಡಿ ಪುರಸಭೆಯ ನಾಲ್ಕು ದಿಕ್ಕುಗಳಲ್ಲಿಯೂ ಸ್ವಾಗ ಆರ್ಚ್ಗಳನ್ನು ನಿರ್ಮಿಸುವಂತೆ ಸದಸ್ಯರು ಒತ್ತಾಯಿಸಿದರು.ಪಾದಚಾರಿ ರಸ್ತೆ ಸುಗಮಗೊಳಿಸಿ:
ಸಭೆಯಲ್ಲಿ ಮಾತನಾಡಿದ ಬಹುತೇಕ ಸದಸ್ಯರು ಪಟ್ಟಣ ವ್ಯಾಪ್ತಿಯ ನಾಲ್ಕು ದಿಕ್ಕಿನ ಪ್ರಮುಖ ರಸ್ತೆಗಳಲ್ಲಿ ಪೆಟ್ಟಿಗೆ ಅಂಗಡಿಗಳು, ಗೋಬಿ ಮತ್ತಿತರ ತಿನಿಸು ಮಾರಾಟಗಾರರು, ಹಣ್ಣು, ತರಕಾರಿ, ಹೂವು ಮತ್ತಿತರ ಸಾಮಗ್ರಿಗಳ ಮಾರಾಟಗಾರರು ಫುಟ್ ಪಾತ್ ಅತಿಕ್ರಮಿಸಿದ್ದು ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿದೆ ಎಂದರು.ಎಪಿಎಂಸಿ ಮಾರುಕಟ್ಟೆ ಬಳಿ ಅಂಗಡಿ ಮಾಲೀಕರುಗಳೇ ಸುಮಾರು 15 ಅಡಿಯಷ್ಟು ಜಾಗ ಅತಿಕ್ರಮಿಸಿರೆ. ಫುಟ್ ಪಾತ್ ತೆರವುಗೊಳಿಸಿ ವ್ಯಾಪಾರಿಗಳಿಗೆ ಎಂ.ಡಿ.ಸಿ.ಸಿ ಬ್ಯಾಂಕ್ ಹಿಂಭಾಗ ಮಾರಾಟಕ್ಕೆ ಅವಕಶ ಕೊಡಿ. ಇದರಿಂದ ಪುರಸಭೆಗೂ ಆದಾಯ ಬರುತ್ತದೆ. ಅಲ್ಲದೇ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುತ್ತದು ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್. ಲೋಕೇಶ್ ಮಾತನಾಡಿ, ಪಟ್ಟಣದ ಒಳಚರಂಡಿ ಯೋಜನೆ ಪೂರ್ಣಗೊಂಡಿಲ್ಲ. ಆದರೂ ಕೆಲವರು ಅಕ್ರಮವಾಗಿ ಒಳಚರಂಡಿ ಸಂಪರ್ಕ ಮಾಡಿಕೊಂಡಿದ್ದಾರೆ. ಅಕ್ರಮ ಸಂಪರ್ಕ ಪಡೆದವರಿಂದ ಒಳಚರಂಡಿ ಶುಲ್ಕ ವಸೂಲಿಗೆ ಕ್ರಮ ವಹಿಸಲಾಗುವುದು ಎಂದರು.ಸರ್ಕಾರಿ ಕಚೇರಿಗಳು ಮತ್ತು ಕೆಲವು ಬೃಹತ್ ಕಟ್ಟಡದಾರರು ಕಂದಾಯ ಬಾಕಿ ಉಳಿಸಿಕೊಂಡಿದ್ದಾರೆ. ಇದೆಲ್ಲವನ್ನೂ ವಸೂಲಿ ಮಡಲು ಕ್ರಮ ವಹಿಸದರೆ ಪುರಸಭೆಯ ಆದಾಯದಲ್ಲಿ ಹೆಚ್ಚಳವಾಗಲಿದೆ. ಈ ನಿಟ್ಟಿನಲ್ಲಿ ಪುರಸಭೆಯ ಸಿಬ್ಬಂದಿ ಕ್ರಮ ವಹಿಸುವಂತೆ ಸೂಚಿಸಿದರು.
ಸಭೆಗೆ ಆಡಳಿತಾಧಿಕಾರಿ ಹಾಗೂ ಎಸಿ ನಂದೀಶ್ ಸೇರಿದಂತೆ ಬಹುತೇಕ ಪುರಸಭಾ ಸದಸ್ಯರು ಇಂದಿನ ಸಭೆಗೆ ಗೈರು ಹಾಜರಾಗಿದ್ದರು.