5, 8, 9ನೇ ಕ್ಲಾಸ್‌ ಬೋರ್ಡ್‌ ಎಕ್ಸಾಂ ಮಾಹಿತಿ ‘ಗುಪ್ತ್‌ ಗುಪ್ತ್‌’

KannadaprabhaNewsNetwork |  
Published : May 14, 2024, 01:00 AM IST
ಎಕ್ಸಾಂ  | Kannada Prabha

ಸಾರಾಂಶ

5, 8 ಮತ್ತು 9ನೇ ತರಗತಿ ಮಕ್ಕಳಿಗೆ ಕಳೆದ ಎರಡು ವರ್ಷಗಳಿಂದ ಸರ್ಕಾರ ನಡೆಸಿದ ಬೋರ್ಡ್‌ ಪರೀಕ್ಷೆಗೆ ಎಷ್ಟು ಮಕ್ಕಳು ಹಾಜರಾದರು, ಎಷ್ಟು ಪ್ರಶ್ನೆ ಪತ್ರಿಕೆ ಮುದ್ರಿಸಲಾಗಿದೆ, ಎಷ್ಟು ವೆಚ್ಚವಾಗಿದೆ... ಈ ಯಾವ ಯಾವ ಪ್ರಶ್ನೆಗಳಿಗೂ ಉತ್ತರ ನೀಡಲು ಸಾಧ್ಯವಿಲ್ಲ, ಎಲ್ಲವೂ ಗೌಪ್ಯವಂತೆ.

ಲಿಂಗರಾಜು ಕೋರಾಕನ್ನಡಪ್ರಭ ವಾರ್ತೆ, ಬೆಂಗಳೂರು

5, 8 ಮತ್ತು 9ನೇ ತರಗತಿ ಮಕ್ಕಳಿಗೆ ಕಳೆದ ಎರಡು ವರ್ಷಗಳಿಂದ ಸರ್ಕಾರ ನಡೆಸಿದ ಬೋರ್ಡ್‌ ಪರೀಕ್ಷೆಗೆ ಎಷ್ಟು ಮಕ್ಕಳು ಹಾಜರಾದರು, ಎಷ್ಟು ಪ್ರಶ್ನೆ ಪತ್ರಿಕೆ ಮುದ್ರಿಸಲಾಗಿದೆ, ಎಷ್ಟು ವೆಚ್ಚವಾಗಿದೆ... ಈ ಯಾವ ಯಾವ ಪ್ರಶ್ನೆಗಳಿಗೂ ಉತ್ತರ ನೀಡಲು ಸಾಧ್ಯವಿಲ್ಲ, ಎಲ್ಲವೂ ಗೌಪ್ಯವಂತೆ.

ಹೌದು, 2022-23ನೇ ಸಾಲಿನಲ್ಲಿ 5 ಮತ್ತು 8ನೇ ತರಗತಿಗೆ, 2023-24ನೇ ಸಾಲಿನಿಂದ 5, 8 ಮಾತ್ರವಲ್ಲದೆ 9 ಮತ್ತು 11ನೇ ತರಗತಿ ಮಕ್ಕಳಿಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮೂಲಕ ಮೌಲ್ಯಾಂಕನ ಪರೀಕ್ಷೆ ನಡೆಸುತ್ತಿರುವ ಸರ್ಕಾರ ಈ ತರಗತಿಗಳ ಬೋರ್ಡ್‌ ಪರೀಕ್ಷೆಗೆ ಎರಡೂ ಸಾಲಿನಲ್ಲಿ ಎಷ್ಟು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು, ಎಷ್ಟು ವಿದ್ಯಾರ್ಥಿಗಳು ಹಾಜರಾದರು, ತರಗತಿವಾರು ಪ್ರಶ್ನೆ ಪತ್ರಿಕೆಗಳ ಮುದ್ರಣ ಸಂಖ್ಯೆ ಎಷ್ಟು? ಈ ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕೆ ಖರ್ಚು ಮಾಡಿದ ಹಣವೆಷ್ಟು ಎಂಬ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲೂ ಮಾಹಿತಿ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಗೌಪ್ಯತೆ ಹೆಸರಲ್ಲಿ ನಿರಾಕರಿಸಿದೆ.

ಖಾಸಗಿ ಪ್ರಮುಖ ಶಾಲಾ ಸಂಘಟನೆಯಾದ ‘ಅವರ್‌ ಸ್ಕೂಲ್ಸ್‌’ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಶಿಕ್ಷಣ ಇಲಾಖೆಯಡಿ ಬರುವ ಕೆಎಸ್‌ಕ್ಯುಎಎಸಿಗೆ ಈ ಮೂರೂ ತರಗತಿ ಬೋರ್ಡ್‌ ಪರೀಕ್ಷೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೇಳಿದೆ. ಈ ಪೈಕಿ ಮಕ್ಕಳ ನೋಂದಣಿ ಕುರಿತ ಒಂದು ಪ್ರಶ್ನೆ ಹೊರತುಪಡಿಸಿ ಉಳಿದೆಲ್ಲ ಪ್ರಶ್ನೆಗಳಿಗೂ ‘ಪರೀಕ್ಷಾ ಗೌಪ್ಯತೆ’ಯಿಂದಾಗಿ ಮಾಹಿತಿ ನೀಡಲು ಬರುವುದಿಲ್ಲ ಎಂಬ ಉತ್ತರ ನೀಡಲಾಗಿದೆ. ವಿಶೇಷವೆಂದರೆ ಪರೀಕ್ಷೆಗೆ ಎಷ್ಟು ಮಕ್ಕಳು ಹಾಜರಾದರು ಎಂಬ ಮಾಹಿತಿಯನ್ನೂ ಸರ್ಕಾರ ನೀಡಿಲ್ಲ.

ಪ್ರಶ್ನೆಗಳೇನು?

ಅವರ್‌ ಸ್ಕೂಲ್ಸ್‌ ಪ್ರಧಾನ ಕಾರ್ಯದರ್ಶಿ ಪ್ರಭಾಕರ್‌ ಅರಸ್‌ ಅವರು, ಆರ್‌ಟಿಐ ಅಡಿ ಕೇಳಿರುವ ಮೊದಲ ಪ್ರಶ್ನೆ, 2023-24ನೇ ಸಾಲಿನಲ್ಲಿ 5, 8, 9 ಮತ್ತು 11ನೇ ತರಗತಿಯ ಮೌಲ್ಯಾಂಕನ ಪರೀಕ್ಷೆಗೆ (ಬೋರ್ಡ್‌ ಪರೀಕ್ಷೆ) ನೋಂದಾಯಿಸಿದ್ದ ಮಕ್ಕಳ ಸಂಖ್ಯೆ ಎಷ್ಟು ಎಂಬುದು. ಈ ಪ್ರಶ್ನೆಗೆ ಮಾತ್ರ ಕೆಎಸ್‌ಕ್ಯುಎಎಸಿ 5ನೇ ತರಗತಿಗೆ 9,26,358 ಮಕ್ಕಳು, 8ನೇ ತರಗತಿಗೆ 9,25,894 ಮಕ್ಕಳು, 9ನೇ ತರಗತಿಗೆ 9,35,346 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. 11ನೇ ತರಗತಿಗೆ ಕೆಎಸ್‌ಕ್ಯುಎಎಸಿ ಯಿಂದ ಮೌಲ್ಯಾಂಕನ ನಡೆಸಿರುವುದಿಲ್ಲ ಎಂಬ ಮಾಹಿತಿ ನೀಡಲಾಗಿದೆ.

ಆದರೆ, ಉಳಿದಂತೆ ಈ ಮಕ್ಕಳಲ್ಲಿ ಎಷ್ಟು ಜನ ಪರೀಕ್ಷೆಗೆ ಹಾಜರಾಗಿದ್ದರು, ಆ ಮಕ್ಕಳಿಗೆ ತರಗತಿವಾರು ಎಷ್ಟು ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಿ ನೀಡಲಾಗಿದೆ, ಆ ಪ್ರಶ್ನೆಪತ್ರಿಕೆಗಳ ಮುದ್ರಣಕ್ಕೆ ಎಷ್ಟು ಹಣ ವೆಚ್ಚ ಮಾಡಲಾಗಿದೆ ಎಂಬ ಇನ್ನಿತರೆ ಪ್ರಶ್ನೆಗಳಿಗೆ ‘ಪ್ರಶ್ನೆ ಪತ್ರಿಕೆ ಮುದ್ರಣದ ವಿಷಯವು ಗೌಪ್ಯವಾಗಿದ್ದು, ಆ ಮಾಹಿತಿಯನ್ನು ನೀಡಲು ಬರುವುದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ 2022-23ನೇ ಸಾಲಿನಲ್ಲಿ ನಡೆದ 5, 8ನೇ ತರಗತಿ ಬೋರ್ಡ್‌ ಪರೀಕ್ಷೆ ಬಗ್ಗೆಯೂ ಕೇಳಿರುವ ಇದೇ ಪ್ರಶ್ನೆಗಳಿಗೂ ಇದೇ ಮಾದರಿಯಲ್ಲಿ ಉತ್ತರ ನೀಡಲಾಗಿದೆ.

------

ಕೋಟ್‌ಆರ್‌ಟಿಐ ಅಡಿ ಪ್ರಶ್ನೆ ಕೇಳಿದರೆ ಉತ್ತರ ಕೊಡಲು ಬರುವುದಿಲ್ಲ. ದಾಖಲೆಗಳನ್ನು ನೀಡಬಹುದಷ್ಟೆ. ಇನ್ನು ಪ್ರಶ್ನೆ ಪತ್ರಿಕೆ ಮುದ್ರಣದ ವಿಚಾರದಲ್ಲಿ ಮುದ್ರಕರ ಹೆಸರು ನೀಡಬೇಕಾಗುತ್ತದೆ, ವೆಚ್ಚದ ವಿಚಾರ ಬಂದಾಗ ವರ್ಕ್‌ ಆರ್ಡರ್‌ ಮಾಹಿತಿ ನೀಡಬೇಕಾಗುತ್ತದೆ. ಇದೆಲ್ಲವೂ ಬಹಳ ಗೌಪ್ಯ ಮಾಹಿತಿ. - ಮಂಜುಶ್ರೀ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷರು

---------

ಕೋಟ್‌

ಇಲಾಖೆ ನಡೆ ಸಂಶಯಕ್ಕೆ ಎಡೆ

5, 8, 9ನೇ ತರಗತಿ ಪಬ್ಲಿಕ್‌ ಪರೀಕ್ಷೆ ನಡೆಸಿದಾಗ ಅದರ ಮಾಹಿತಿ ಮಾತ್ರ ಗೌಪ್ಯತೆ ಹೇಗಾಗುತ್ತದೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ಶಿಕ್ಷಕರು ಯಾರು, ಅವರಿಗೆ ಎಷ್ಟು ಗೌರವಧನ ನೀಡಿದಿರಿ ಎಂಬಂತಹ ಪ್ರಶ್ನೆಗಳನ್ನು ಕೇಳಿದರೆ ಗೌಪ್ಯತೆ ಆಗುತ್ತದೆ ನಿಜ. ಆದರೆ, ಪರೀಕ್ಷೆ ಬರೆದ ಮಕ್ಕಳೆಷ್ಟು, ಮಕ್ಕಳಿಂದಲೇ ಪಡೆದ ಪರೀಕ್ಷಾ ಶುಲ್ಕದಲ್ಲಿ ಎಷ್ಟು ಪ್ರಶ್ನೆ ಪತ್ರಿಕೆ ಮುದ್ರಿಸಲಾಗಿದೆ, ಎಷ್ಟು ಹಣ ಖರ್ಚಾಗಿದೆ ಎಂದು ಕೇಳಿದರೆ ಅದಕ್ಕೆ ಉತ್ತರ ಕೊಡಬೇಕಾದ್ದು ಸರ್ಕಾರದ ಜವಾಬ್ದಾರಿ. ಆದರೆ, ಇಂತಹ ಪ್ರಶ್ನೆಗಳಿಗೂ ಮಾಹಿತಿ ನೀಡಲು ಹಿಂದೇಟು ಹಾಕಿರುವುದು ಒಟ್ಟು ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆಯೇ ಜನಸಾಮಾನ್ಯರಲ್ಲಿ ಸಂಶಯಕ್ಕೆ ಎಡೆಮಾಡಿಕೊಡುತ್ತದೆ.

- ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ

----

ಕೋಟ್‌

ಸರ್ಕಾರದ ಜವಾಬ್ದಾರಿ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನೇ ಸರ್ಕಾರ ನೀಡುವಾಗ 5, 8, 9ನೇ ತರಗತಿ ಮೌಲ್ಯಾಂಕನ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ನಿರಾಕರಿಸುತ್ತಿದೆ ಎಂದರೆ ಏನರ್ಥ. ಪರೀಕ್ಷೆ ಬರೆದ ಮಕ್ಕಳ ಸಂಖ್ಯೆ, ಮುದ್ರಿಸಿದ ಪ್ರಶ್ನೆ ಪತ್ರಿಕೆ ಸಂಖ್ಯೆ, ಅದಕ್ಕಾದ ವೆಚ್ಚ ಇದ್ಯಾವುದೂ ಗೌಪ್ಯತೆ ಅಡಿ ಹೇಗೆ ಬರುತ್ತದೆ. ಪರೀಕ್ಷೆಗೆ ಶುಲ್ಕ ಕಟ್ಟಿದ, ಮಕ್ಕಳು ಹಾಗೂ ಅವರ ಪೋಷಕರಿಗೆ ಈ ಬಗ್ಗೆ ಮಾಹಿತಿ ಕೇಳುವ ಅಧಿಕಾರ ಇದೆ, ಅದಕ್ಕೆ ಉತ್ತರ ನೀಡಬೇಕಾದ್ದು ಸರ್ಕಾರದ ಜವಾಬ್ದಾರಿ.

- ಡಿ.ಶಶಿಕುಮಾರ್‌, ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌