ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸಿಎಂ ಅನುಮತಿ:
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಪಟ್ಟಣದ ರಸ್ತೆ ಅಗಲೀಕರಣಕ್ಕೆ ಸರ್ಕಾರ ₹60 ಕೋಟಿ ಮಂಜೂರು ಮಾಡಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.
ನರಸಿಂಹರಾಜಪುರ ಪಟ್ಟಣದ ಬಸ್ಸು ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ರಸ್ತೆ ಕಿರಿದಾಗಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಶಾಲೆ ಮಕ್ಕಳು, ವೃದ್ಧರು ರಸ್ತೆಯಲ್ಲಿ ನಡೆದಾಡಲು ಕಷ್ಟವಾಗಿತ್ತು. ಪರಿಹಾರ ನೀಡಿ ರಸ್ತೆ ಅಗಲೀರಣ ಮಾಡಬೇಕು ಎಂದು ಸಾರ್ವಜನಿಕರು ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಮೈಸೂರು ಮಹಾ ರಾಜರು ನರಸಿಂಹರಾಜಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಸ್ತೆ ಅಭಿವೃದ್ಧಿ ಆಗಿತ್ತು. ನಂತರ ಮುಖ್ಯ ರಸ್ತೆ ಅಭಿವೃದ್ಧಿ ಕಾಣಲಿಲ್ಲ. ನಾನು ನರಸಿಂಹರಾಜಪುರದಲ್ಲೇ ಹುಟ್ಟಿ ಬೆಳೆದಿದ್ದರಿಂದ ರಸ್ತೆ ಅಗಲೀಕರಣ ಮಾಡಬೇಕು ಎಂಬುದು ನನ್ನ ಕನಸು ಸಹ ಆಗಿತ್ತು. ನಾನು ಈ ಬಗ್ಗೆ ತುಂಬಾ ಶ್ರಮ ಹಾಕಿ ಮುಖ್ಯಮಂತ್ರಿಗಳನ್ನು ಭೇಟಿ ₹60 ಕೋಟಿಗೆ ಮನವಿ ಸಲ್ಲಿಸಿದ್ದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.ನನ್ನ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ₹60 ಕೋಟಿ ರು. ಮಂಜೂರು ಮಾಡಿದ್ದಾರೆ. ನರಸಿಂಹರಾಜಪುರ ಜನರ ಪರವಾಗಿ ಶುಕ್ರವಾರ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸಿದ್ದೇವೆ ಎಂದು ತಿಳಿಸಿದ್ದಾರೆ.
-- ಬಾಕ್ಸ್ --ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ರಸ್ತೆ ಅಗಲೀಕರಣ ಮಾಡಿಸಿಕೊಡುತ್ತೇನೆ ಎಂದು ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಅದರಂತೆ ಮುಖ್ಯಮಂತ್ರಿಗಳಿಂದ ₹60 ಕೋಟಿ ಮಂಜೂರು ಮಾಡಿಸಿ ಕೊಂಡು ಬಂದಿದ್ದು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಎಂದು ಪಪಂತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ತಿಳಿಸಿದರು.
ಎಂ.ಶ್ರೀನಿವಾಸ್ ಅವರು ಹುಟ್ಟೂರಿನ ಪ್ರೀತಿಗಾಗಿ ಈಗಾಗಲೇ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ನರಸಿಂಹರಾಜಪುರ ತಾಲೂಕಿಗೆ ₹35 ಕೋಟಿ ಮಂಜೂರು ಮಾಡಿದ್ದಾರೆ. ಭದ್ರಾ ಡ್ಯಾಂ ಆದ ಮೇಲೆ ನರಸಿಂಹರಾಜಪುರ ಅರ್ಧ ಮುಳುಗಡೆ ಯಾಗಿತ್ತು. ಎಂ.ಶ್ರೀನಿವಾಸ್ ತಾಲೂಕಿನ ಅಭಿವೃದ್ಧಿ ಗಾಗಿ ಕೋಟ್ಯಾಂತರ ರು. ಮಂಜೂರು ಮಾಡಿಸಿದ್ದು ನರಸಿಂಹ ರಾಜಪುರಕ್ಕೆ ಈಗ ಜೀವ ಕಳೆ ಬಂದಿದೆ ಎಂದರು.-- ಬಾಕ್ಸ್--
ರಸ್ತೆ ಅಗಲೀಕರಣ ಅವಶ್ಯಕವಾಗಿದ್ದು ಹಲವಾರು ವರ್ಷಗಳಿಂದಲೂ ವರ್ತಕರ ಸಂಘ ರಸ್ತೆ ಅಗಲೀಕರಣಕ್ಕೆ ಬೇಡಿಕೆ ಇಟ್ಟಿತ್ತು ಎಂದು ವರ್ತಕರ ಸಂಘದ ಅಧ್ಯಕ್ಷ ಎಸ್.ಎಸ್.ಜಗದೀಶ್ ತಿಳಿಸಿದ್ದಾರೆ.ರಸ್ತೆ ಅಗಲೀಕರಣಕ್ಕೆ ₹60 ಕೋಟಿ ಮಂಜೂರು ಮಾಡಿಸಿಕೊಂಡು ಬಂದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅವರನ್ನು ವರ್ತಕರ ಸಂಘದಿಂದ ಅಭಿನಂದಿಸುತ್ತೇವೆ ಎಂದು ತಿಳಿಸಿದ್ದಾರೆ.