- ರಸಗೊಬ್ಬರ, ಕೀಟನಾಶಕ ಅಗತ್ಯ ದಾಸ್ತಾನು: ಕೃಷಿ ಇಲಾಖೆ- - - ಚನ್ನಗಿರಿ: ತಾಲೂಕಿನಲ್ಲಿ 15 ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸೋಮವಾರ ಮತ್ತು ಮಂಗಳವಾರ ಸುರಿದ ಮಳೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ 22 ಮನೆಗಳು ಭಾಗಶಃ ಬಿದ್ದಿವೆ. ರಾತ್ರಿ-ಬೆಳಗ್ಗೆ ಎನ್ನದೇ ಮಳೆ ಮುಂದುವರಿದಿದೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ಉಬ್ರಾಣಿ ಹೋಬಳಿಯು ಮಲೆನಾಡಿನ ಸೆರಗಿನಲ್ಲಿದ್ದು, ಹೆಚ್ಚು ಮಳೆ ಸುರಿಯುವ ಪ್ರದೇಶವಾಗಿದೆ. ಈ ಭಾಗದ ಉಬ್ರಾಣಿ, ಮುಗಳಿಹಳ್ಳಿ, ಶಂಕರಿಪುರ, ದುರ್ವಿಗೆರೆ, ಬಸವಾಪುರ, ಕೊಡಕಿಕೆರೆ, ವಡ್ನೇರಿ, ತಾವರೆಕೆರೆ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಜನರು ಜಮೀನುಗಳ ಕೆಲಸದಲ್ಲಿ ನಿರತರಾಗಿದ್ದಾರೆ.ತಾಲೂಕಿನಲ್ಲಿ ಮೆಕ್ಕೆಜೋಳ, ಊಟದ ಜೋಳ, ರಾಗಿ, ಹತ್ತಿ, ಮೆಣಸಿನಕಾಯಿ ಮುಂತಾದ ಬೆಳೆಗಳ ಬಿತ್ತನೆ ಕಾರ್ಯ ಶೇ.70ರಷ್ಟು ಮುಗಿದಿದೆ. ಪ್ರಸ್ತುತ ರಾಗಿ ಬಿತ್ತನೆ ಮುಂದುವರಿದಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ.
ಇದೇ ರೀತಿ ಮಳೆ ಮುಂದುವರಿದರೆ ಬೆಳವಣಿಗೆ ಹಂತಗಳಲ್ಲಿರುವ ಬೆಳೆಗಳಿಗೆ ಶೀತ ಹರಡುವ ಸಾಧ್ಯತೆಗಳಿವೆ. ತಾಲೂಕಿನಲ್ಲಿ ರಸಗೊಬ್ಬರಕ್ಕಾಗಲಿ, ಕೀಟ ನಾಶಕಗಳಿಗೆ ಯಾವುದೇ ಕೊರತೆ ಆಗದಂತೆ ಖಾಸಗಿ ಅಂಗಡಿಗಳಲ್ಲಿ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯ ಇರುವುದಾಗಿ ತಿಳಿಸಿದ್ದಾರೆ.ತಾಲೂಕಿನ 9 ಮಳೆ ಮಾಪನ ಕೇಂದ್ರಗಳಲ್ಲಿ ಮಂಗಳವಾರ ದಾಖಲಾಗಿರುವಂತೆ, ಚನ್ನಗಿರಿ ಕೇಂದ್ರದಲ್ಲಿ 10.0 ಮೀ.ಮೀ. ಮಳೆ, ದೇವರಹಳ್ಳಿ- 8.4, ಕತ್ತಲಗೆರೆ- 6.1, ತ್ಯಾವಣಿಗೆ- 3.0, ಬಸವಾಪಟ್ಟಣ- 3.9, ಜೋಳದಾಳ್- 6.0, ಸಂತೆಬೆನ್ನೂರು- 5.0, ಉಬ್ರಾಣಿ- 16.6, ಕೆರೆಬಿಳಚಿ- 4.2 ಮೀ.ಮೀ. ಮಳೆಯಾಗಿದೆ. ಒಟ್ಟು ಶೇ.63.2ರಷ್ಟು ಮಳೆಯಾಗಿದೆ.
- - - -23ಕೆಸಿಎನ್ಜಿ2: ಮಳೆಯಿಂದ ಹಾನಿಗೆ ಒಳಗಾಗಿರುವ ಮನೆ.