ಜು.2ರಂದು ಕಳಸಕೊಪ್ಪ ಕೆರೆ ಹಾಗೂ ಬದಾಮಿ ತಾಲೂಕಿನ 7 ಕೆರೆಗಳಿಗೆ ಪ್ರಸಕ್ತ ವರ್ಷ ನೀರು ತುಂಬಲು ಚಾಲನೆ ನೀಡಲಾಗುವುದು
ಕಲಾದಗಿ: ಕಳಸಕೊಪ್ಪ ಕೆರೆ ಸೇರಿದಂತೆ ಬಾದಾಮಿ ತಾಲೂಕಿನ 7 ಕೆರೆಗಳನ್ನು ತುಂಬಿಸಲು ಜು.2ರಂದು ಚಾಲನೆ ನೀಡಲಾಗುವುದು ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಶಾಸಕ ಜೆ.ಟಿ.ಪಾಟೀಲ ತಿಳಿಸಿದರು.
ಜಿಪಂ ಬಾಗಲಕೋಟೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಬಾಗಲಕೋಟೆ, ಬೀಳಗಿ ಮತಕ್ಷೇತ್ರ, ಶಿಕ್ಷಣ ಇಲಾಖೆಗೆ ಮಂಜೂರಾದ ₹10 ಕೋಟಿ ವಿಶೇಷ ಅನುದಾನದಲ್ಲಿ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ 1 ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಹಾಗೂ ಹಿರೇ ಸಂಶಿಕ್ರಾಸ್ನಲ್ಲಿ ನಿರ್ಮಾಣವಾದ ನೂತನ ಬಸ್ ನಿಲ್ದಾಣ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈಗಾಗಲೇ ಆಲಮಟ್ಟಿ ಹಿನ್ನೀರು ಆವರಿಸುತ್ತಿದ್ದು, ಹಿರೇಶೆಲ್ಲಿಕೇರಿ ಬಳಿ ಇರುವ ಕೆರೆ ತುಂಬಿಸುವ ಜಾಕ್ವೆಲ್ ಪಂಪಹೌಸ್ ವರೆಗೂ ನೀರು ಹರಿದು ಬಂದಿದೆ. ಕೆಬಿಜೆಎನ್ಎಲ್ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೆರೆ ತುಂಬಿಸಲು ಚಾಲನೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದ್ದು, ಜು.2ರಂದು ಕಳಸಕೊಪ್ಪ ಕೆರೆ ಹಾಗೂ ಬದಾಮಿ ತಾಲೂಕಿನ 7 ಕೆರೆಗಳಿಗೆ ಪ್ರಸಕ್ತ ವರ್ಷ ನೀರು ತುಂಬಲು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕಲಾದಗಿ ಗ್ರಾಪಂ ಅಧ್ಯಕ್ಷೆ ಖಾತುನಬಿ.ಹ.ರೋಣ, ಉಪಾಧ್ಯಕ್ಷ ಫಕಿರಪ್ಪ ಮಾದರ, ಮುಸ್ಲಿಂ ಧರ್ಮ ಗುರು ಫಯಾಜ್ ಅಹಮ್ಮದ್ ಖಾಜಿ, ಸಂಗಣ್ಣ ಮುಧೋಳ, ಪಾಂಡು ಪೊಲೀಸ್, ಬಂದೇನವಾಜ್ ಸೌದಾಗಾರ್, ಎಂ.ಎ.ತೇಲಿ, ಶ್ಯಾಮ ಕಾಳೆ, ಯಲ್ಲಪ್ಪ ಕುಳಗೇರಿ, ಪಿಡಿಒ ಬಿ.ಎಲ್.ಹವಾಲ್ದಾರ ಇನ್ನಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.