ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಕೆಜಿಎಫ್‌ನಲ್ಲಿ ೭ ಡೆಂಘೀ ಪ್ರಕರಣ ದಾಖಲು

KannadaprabhaNewsNetwork | Published : Jul 8, 2024 12:33 AM

ಸಾರ್ವಜನಿಕರು ಯಾವುದೇ ಕಾರಣಕ್ಕೂ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ತೆರೆದ ಜಾಗಗಳಲ್ಲಿ ನೀರು ಶೇಖರಣೆ ಮಾಡದಂತೆ ಎಚ್ಚರಿಕೆವಹಿಸಬೇಕು. ಜ್ವರ ಬಂದರೆ ಕೂಡಲೇ ರಕ್ತ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆ ಪಡೆಯಿರಿ

ಕನ್ನಡಪ್ರಭ ವಾರ್ತೆ ಕೆಜಿಎಫ್ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಕೆಜಿಎಫ್ ತಾಲೂಕಿನಲ್ಲಿ 7 ಪ್ರಕರಣಗಳು ಪತ್ತೆಯಾಗಿವೆ.ಕಳೆದ ಆರು ತಿಂಗಳ ಅಂಕಿಅಂಶ ಪರಿಗಣಿಸಿ ನೋಡುವುದಾದರೆ ತಾಲೂಕಿನಾದ್ಯಂತ ಯಾವುದೇ ರೀತಿಯ ಗಂಭೀರ ಲಕ್ಷಣಗಳನ್ನೊಳಗೊಂಡ ಡೆಂಘೀ ಪ್ರಕರಣಗಳು ದಾಖಲಾಗಿಲ್ಲ. ಏಳು ಪ್ರಕರಣ ದಾಖಲು

ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಮೇ ತಿಂಗಳಿನಲ್ಲಿ ಒಂದೆರಡು ಪ್ರಕರಣ ದಾಖಲಾಗಿರುವುದು ಸೇರಿದಂತೆ ಇದುವರೆಗೆ ಒಟ್ಟಾರೆ ೭ ಪ್ರಕರಣಗಳು ದಾಖಲಾಗಿದ್ದು, ಎಲ್ಲರೂ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಒಂದು ವಾರದಿಂದ ಈಚೆಗೆ ಜ್ವರದ ಪ್ರಕರಣಗಳು ಪ್ರತಿನಿತ್ಯ ೬೦-೭೦ ಬರುತ್ತಿದ್ದು, ಇವುಗಳಲ್ಲಿ ಯಾವುದೂ ಡೆಂಘೀ ಎಂದು ದೃಢಪಟ್ಟಿಲ್ಲ. ಜನತೆ ಮುನ್ನೆಚ್ಚರಿಕೆ ವಹಿಸಿ

ನಗರಸಭೆ ಪೌರಾಯುಕ್ತ ಪವನ್ ಕುಮಾರ್ ಪ್ರಕಾರ, ಜಿಲ್ಲೆಯಲ್ಲಿಯೇ ನಗರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಫಾಗಿಂಗ್ ಮಾಡುವುದನ್ನು ಮೊಟ್ಟ ಮೊದಲ ಬಾರಿಗೆ ಒಂದು ತಿಂಗಳ ಹಿಂದಿನಿಂದಲೇ ಪ್ರಾರಂಭ ಮಾಡಲಾಗಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ತೆರೆದ ಜಾಗಗಳಲ್ಲಿ ನೀರು ಶೇಖರಣೆ ಮಾಡದಂತೆ ಎಚ್ಚರಿಕೆವಹಿಸಬೇಕು. ಈಗಾಗಲೇ ಎಲ್ಲ ವಾರ್ಡುಗಳಲ್ಲಿ ಫಾಗಿಂಗ್ ಮಾಡಲಾಗಿದ್ದು, ಕೆಲವು ವಾರ್ಡ್‌ಗಳ ಗಾತ್ರ ದೊಡ್ಡದಾಗಿರುವುದರಿಂದ ಸಾರ್ವಜನಿಕರು ಯಾರೇ ಆಗಲಿ ತಾವು ವಾಸಿಸುವ ವಾರ್ಡ್‌ಗಳಲ್ಲಿ ಫಾಗಿಂಗ್ ಮಾಡುವಂತೆ ಮನವಿ ಸಲ್ಲಿಸಿದಲ್ಲಿ ಕೂಡಲೇ ಕ್ರಮ ವಹಿಸಲಾಗುವುದು.

ಜ್ವರ ಬಂದರೆ ಪರೀಕ್ಷೆ ಮಾಡಿಸಿ

ತಾಲೂಕು ಆರೋಗ್ಯಾಧಿಕಾರಿ ಡಾ.ಪದ್ಮಾವತಿ ಅ‍ವರು ಪ್ರತಿಕ್ರಿಯೆ ನೀಡಿದ್ದು, ತಾಲೂಕಿನಲ್ಲಿ ಡೆಂಘೀ ಪ್ರಕರಣಗಳು ಆತಂಕಪಡುವಂತಹ ಮಟ್ಟಕ್ಕೆ ಹೋಗಿಲ್ಲ. ಒಂದು ವೇಳೆ ಪ್ರಕರಣಗಳು ಹೆಚ್ಚಾದಲ್ಲಿ ಚಿಕಿತ್ಸೆ ನೀಡಲು ಈಗಾಗಲೇ ಸಾರ್ವಜನಿಕ ಆಸ್ಪತ್ರೆಯಲ್ಲಿ ೧೦ ಬೆಡ್‌ಗಳನ್ನು ಸಜ್ಜುಗೊಳಿಸಿ ಇಡಲಾಗಿದೆ. ಜ್ವರ ಬಂದ ಕೂಡಲೇ ನಿರ್ಲಕ್ಷ ಮಾಡದೇ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಬಂದು ರಕ್ತ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆದುಕೊಂಡಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದರು.