ಹರಪನಹಳ್ಳಿ ತಾಲೂಕಲ್ಲಿ 700 ಎಕರೆ ಬೆಳೆ ಹಾನಿ

KannadaprabhaNewsNetwork | Published : Jul 29, 2024 12:53 AM

ಸಾರಾಂಶ

ತುಂಗಭದ್ರಾ ನದಿ ಉಕ್ಕಿ ಹರಿದ ಪರಿಣಾಮ ಅಂದಾಜು 700 ಎಕರೆ ಬೆಳೆ ಹಾನಿ ಸಂಭವಿಸಿವೆ.

ಹರಪನಹಳ್ಳಿ: ತುಂಗಭದ್ರಾ ನದಿ ಉಕ್ಕಿ ಹರಿದ ಪರಿಣಾಮ ಅಂದಾಜು 700 ಎಕರೆ ಬೆಳೆ ಹಾನಿ ಸಂಭವಿಸಿವೆ. ರಸ್ತೆ ಬಂದ್‌ ಆಗಿ ಅನೇಕ ಮನೆಗಳು ಜಖಂಗೊಂಡಿವೆ.ತಾವರಗೊಂದಿಯಲ್ಲಿ 250 ಎಕರೆ ಭತ್ತ, ನಂದ್ಯಾಲ ಗ್ರಾಮದಲ್ಲಿ 200 ಎಕರೆ ಭತ್ತ, ತೆಂಗು, ಅಡಿಕೆ, ನಿಟ್ಟೂರು-ಬಸ್ಸಾಪುರ ಗ್ರಾಮದಲ್ಲಿ 150-200 ಎಕರೆ ಭತ್ತ ಹೀಗೆ ಅಂದಾಜು ಏಳು ನೂರಕ್ಕೂ ಹೆಚ್ಚು ಬೆಳೆಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ನಂದ್ಯಾಲ ಗ್ರಾಮದಲ್ಲಿ 3, ಕಡತಿಯಲ್ಲಿ 4 ಮನೆಗಳು ಜಖಂಗೊಂಡಿವೆ. ಹಲುವಾಗಲು -ಗರ್ಭಗುಡಿ ಗ್ರಾಮಗಳ ರಸ್ತೆ ಎರಡು ಕಡೆ ಬಂದ್‌ ಆಗಿದೆ. ನಂದ್ಯಾಲ ಗ್ರಾಮದಲ್ಲಿ ನದಿಗೆ ಹೋಗುವ ದಾರಿ ಅಸ್ತವ್ಯಸ್ತಗೊಂಡಿದೆ.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಭಾನುವಾರ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಅವರು ಗರ್ಭಗುಡಿ -ಹಲುವಾಗಲು ಗ್ರಾಮಗಳ ರಸ್ತೆ ಎತ್ತರಿಸಲು ಕ್ರಿಯಾ ಯೋಜನೆ ರೂಪಿಸುವಂತೆ ಲೋಕೋಪಯೋಗಿ ಇಲಾಖೆ ಎಇಇ ಅವರಿಗೆ ಸೂಚಿಸಿದರು.

ಹಾನಿಗೀಡಾದ ಬೆಳೆಗಳಿಗೆ ಪರಿಶೀಲಿಸಿ ಸೂಕ್ತ ಪರಿಹಾರ ಸಿಗುವ ಹಾಗೆ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಕೃಷಿ, ತೋಟಗಾರಿಕಾ ಹಾಗೂ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ನದಿ ತೀರದ ಗ್ರಾಮಗಳಲ್ಲಿ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಡಂಗೂರ ಸಾರಿ, ಅಗತ್ಯ ಬಿದ್ದರೆ ಕಾಳಜಿ ಕೇಂದ್ರ ತೆರೆಯಿರಿ. ಒಟ್ಟಿನಲ್ಲಿ ಪ್ರವಾಹ ಎದುರಿಸಲು ಸಿದ್ಧತೆಯಲ್ಲಿರಿ ಎಂದು ಸಂಬಂಧಪಟ್ಟ ನೋಡಲ್‌ ಅಧಿಕಾರಿಗಳಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಚಿದಾನಂದಗುರುಸ್ವಾಮಿ, ತಹಶೀಲ್ದಾರ ಬಿ.ವಿ. ಗಿರೀಶಬಾಬು, ತಾಪಂ ಇಒ ಚಂದ್ರಶೇಖರ, ಸಹಾಯಕ ಕೃಷಿ ನಿರ್ದೇಶಕ ಉಮೇಶ, ಬಿಇಒ ಬಸವರಾಜಪ್ಪ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ತೋಟಗಾರಿಕೆ ಅಧಿಕಾರಿ ರವೀಂದ್ರ ಹಿರೇಮಠ, ಮತ್ತೂರು ಬಸವರಾಜ, ಶಿವರಾಜ ಇತರರು ಶಾಸಕರ ಜೊತೆ ನದಿ ಭಾಗದ ಪರಿಸ್ಥಿತಿ ಅವಲೋಕಿಸಿದರು.

Share this article