ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೭೫,೦೦೦ ಜನರ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ತಿಳಿಸಿದರು.ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಕ್ಷೇತ್ರದಲ್ಲಿ ಈವರೆಗೆ ೬೦೦೦ಕ್ಕೂ ಹೆಚ್ಚು ಮಂದಿಯನ್ನು ನೋಂದಾಯಿಸಲಾಗಿದೆ. ನಿರಂತರ ಕಾರ್ಯಕ್ರಮದ ಮೂಲಕ ಕಾಲಮಿತಿಯೊಳಗೆ ಸದಸ್ಯತ್ವ ನೋಂದಣಿಯಲ್ಲಿ ಗುರಿ ತಲುಪಲಾಗುವುದು ಎಂದರು.ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಮಾತ್ರವಲ್ಲದೆ ಇಡೀ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯು ತನ್ನದೇ ಆಸ್ತಿತ್ವ ಪಡೆದುಕೊಂಡಿದೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಾಗುತ್ತಿದೆ. ಶ್ರೀರಂಗಪಟ್ಟಣ ಕ್ಷೇತ್ರದಲ್ಲೂ ಪಕ್ಷವನ್ನು ಹೆಚ್ಚು ಸದೃಢಗೊಳಿಸಲು ಶ್ರಮ ವಹಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಜೆಪಿ ಸದಸ್ಯತ್ವ ಪಡೆದು, ದೇಶ ಸೇವಾ ಕರ್ಯದಲ್ಲಿ ತೊಡಬೇಕೆಂದು ಮನವಿ ಮಾಡಿದರು.
ಬಿಜೆಪಿ ಮುಖಂಡರಾದ ಬೇಲೂರು ಮಾಯಿಗಯ್ಯ, ಯತ್ತಗದಹಳ್ಳಿ ಸಂಜು, ಕಬ್ಬನಹಳ್ಳಿ ರಾಮಚಂದ್ರು, ಹನಿಯಂಬಾಡಿ ಸತೀಶ್, ಮಂಗಲ ರಮೇಶ್, ಹಳುವಾಳು ಪ್ರಮೋದ್ ಹಾಗೂ ಗ್ರಾಮದ ಮುಖಂಡರಾದ ಕಾಳೇಗೌಡ, ಜವರೇಗೌಡ, ರಕ್ಷಿತ್, ಪ್ರಸನ್ನ, ಸಿದ್ದೇಗೌಡ, ಮೋನಿಷ್ ಇತರರು ಭಾಗವಹಿಸಿದ್ದರು.ಕಬ್ಬು ಕಟಾವಿನಲ್ಲೂ ರಾಜಕೀಯ:
ಮಂಡ್ಯದ ಮೈಷುಗರ್ ವ್ಯಾಪ್ತಿಗೆ ನಮ್ಮ ಗ್ರಾಮವೂ ಸೇರಿದಂತೆ ೪೬ ಹಳ್ಳಿಗಳು ಬರುತ್ತವೆ. ಆದರೆ, ಎಲ್ಲೂ ಸಮರ್ಪವಾಗಿ ಕಬ್ಬು ಕಟಾವು ಮಾಡುತ್ತಿಲ್ಲ. ಕಬ್ಬು ಕಟಾವು ವಿಚಾರದಲ್ಲೂ ರಾಜಕಾರಣ ಮಾಡಲಾಗುತ್ತಿದೆ.ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವವರ ಕಬ್ಬನ್ನು ಮಾತ್ರ ಪ್ರಥಮ ಅದ್ಯತೆಯಲ್ಲಿ ಕಟಾವು ಮಾಡಲಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ನೊಂದಿಗೆ ಗುರುತಿಸಿಕೊಂಡಿರುವ ರೈತರ ಕಬ್ಬು ಕಟಾವಿಗೆ ವಿಳಂಬ ಮಾಡಲಾಗುತ್ತಿದೆ ಎಂಬುದನ್ನು ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಇಂಡುವಾಳು, ಈ ವಿಚಾರವಾಗಿ ಕಾರ್ಖಾನೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿ ಸಮರ್ಪಕ ಕಬ್ಬು ಕಟಾವಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.