- ಕನ್ನಡಪ್ರಭ ವರದಿ ಪ್ರತಿಫಲ । ಹೊನ್ನಾಳಿ ಪುರಸಭೆಯಿಂದ ಬಾಕಿ ಬಿಲ್ ಪಾವತಿ - - - ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ಕಳೆದ ಶನಿವಾರ ಮತ್ತು ಭಾನುವಾರ ಹೊನ್ನಾಳಿ ಖಾಸಗಿ ಬಸ್ ನಿಲ್ದಾಣ ಹಾಗೂ ನಿಲ್ದಾಣದಲ್ಲಿನ ಹತ್ತಾರು ಮಳಿಗೆಗಳಿಗೆ ಸ್ಥಳೀಯ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಪುರಸಭೆಯವರು ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಕಡಿತಗೊಳಿಸಲಾಗಿತ್ತು. ಇದರಿಂದ ಪ್ರಯಾಣಿಕರು, ಸಾರ್ವಜನಿಕರು ಹಾಗೂ ಅಂಗಡಿ ಮಳಿಗೆಗಳ ವ್ಯಾಪಾರಿಗಳಿಗೆ ತೀವ್ರ ಸಮಸ್ಯೆಯಾಗಿತ್ತು. ಈ ಬಗ್ಗೆ ಕನ್ನಡಪ್ರಭ ವರದಿ ಪ್ರಕಟಿಸಿ ಗಮನ ಸೆಳೆದ ಮೇರೆಗೆ ಎಚ್ಚೆತ್ತ ಅಧಿಕಾರಿಗಳು ವಿದ್ಯುತ್ ಸೌಲಭ್ಯ ಕಲ್ಪಿಸಿದ್ದಾರೆ.ಇಡೀ ಖಾಸಗಿ ಬಸ್ ನಿಲ್ದಾಣ ಮತ್ತು ನಿಲ್ದಾಣ ಸಂಕೀರ್ಣದಲ್ಲಿನ ವಾಣಿಜ್ಯ ಮಳಿಗೆಳಿಗೆ ಎರಡು ದಿನ-ರಾತ್ರಿ ವಿದ್ಯುತ್ ಸಂಪರ್ಕ ತಪ್ಪಿಸಲಾಗಿತ್ತು. ಇದರಿಂದ ಬಸ್ ನಿಲ್ದಾಣ ಸಂಪೂರ್ಣ ಕತ್ತಲಲ್ಲಿ ಮುಳುಗಿಹೋಗಿತ್ತು. ಪರಸ್ಥಳಗಳಿಗೆ ತೆರಳುವ ಪ್ರಯಾಣಿಕರು ಮತ್ತು ವ್ಯಾಪಾರ ವಹಿವಾಟು ಮಾಡಲಾಗದೇ ವಾಣಿಜ್ಯ ಸಂಕೀರ್ಣದಲ್ಲಿನ ಮಳಿಗೆಗಳ ವ್ಯಾಪಾರಸ್ಥರು ಕತ್ತಲಿನಿಂದಾಗಿ ತೀವ್ರ ತೊಂದರೆ ಅನುಭವಿಸುಸುತ್ತಿದ್ದರು. ಈಗ ಈ ಅವ್ಯವಸ್ಥೆ ತಪ್ಪಿದಂತಾಗಿದೆ.
ಕನ್ನಡಪ್ರಭ ಸೋಮವಾರದ ಸಂಚಿಕೆಯಲ್ಲಿ ವಿದ್ಯುತ್ ಅವ್ಯವಸ್ಥೆ ಕುರಿತು ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಸೋಮವಾರ ತಪ್ಪದೇ ವಿದ್ಯುತ್ ಬಿಲ್ ಪಾವತಿಸುವುದಾಗಿ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಬೆಸ್ಕಾಂ ಸಾರ್ವಜನಿಕರಿಗೆ ತೊಂದರೆ ತಪ್ಪಿಸುವ ಉದ್ದೇಶದಿಂದ ಪುನಃ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.ಅನಂತರ ಪುರಸಭೆಯವರು ಸೋಮವಾರ ಬೆಸ್ಕಾಂಗೆ ಚೆಕ್ ಮೂಲಕ ₹83,107.00 ಹಣ ಸಂದಾಯ ಮಾಡಿದ್ದಾರೆಂದು ಬೆಸ್ಕಾಂ ಅಧಿಕಾರಿ ಜಯಪ್ಪ ಪತ್ರಿಕೆಗೆ ತಿಳಿಸಿದ್ದಾರೆ.
- - --2ಎಚ್.ಎಲ್.ಐ2ಃ:
ವಿದ್ಯುತ್ ಬಿಲ್ ಬಾಕಿ ಹಿನ್ನೆಲೆ ಖಾಸಗಿ ಬಸ್ ನಿಲ್ದಾಣಕ್ಕೆ ಕಡಿತಗೊಳಿಸಿದ್ದ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಅಧಿಕಾರಿಗಳು ಬಿಲ್ ಪಾವತಿ ಬಳಿಕ ಪುನಃ ಸೌಲಭ್ಯ ಕಲ್ಪಿಸಿರುವುದು.