ಕನ್ನಡಪ್ರಭ ವಾರ್ತೆ ಧಾರವಾಡ
ಭಾನುವಾರ ಮಬ್ಬುಕತ್ತಲಿನಲ್ಲಿ ಮರಾಠಾ ಕಾಲನಿ ರಸ್ತೆಯಲ್ಲಿ ಬರ್ಬರ ಹತ್ಯೆಯೊಂದು ನಡೆಯಿತು. ಓರ್ವ ವೃದ್ಧನಿಗೆ ನಾಲ್ಕೈದು ಜನರು ಮಚ್ಚಿನಿಂದ ಕತ್ತಿನ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದರು.
ಮೂಲತಃ ಹೆಬ್ಬಳ್ಳಿಯ, ಧಾರವಾಡ ಮರಾಠಾ ಕಾಲನಿ ನಿವಾಸಿ ನಿಂಗಪ್ಪ ಹಡಪದ (65) ಅನಾಥ ಶವವಾಗಿ ಬಿದ್ದಿದ್ದರು.ಈ ಘಟನೆ ನೋಡಿದ ಕೆಲವರು ಮೊಬೈಲ್ನಲ್ಲಿ ಕೊಲೆಯ ದೃಶ್ಯವನ್ನು ಸಹ ಸೆರೆ ಹಿಡಿದಿದ್ದರು. ಕೊಲೆಯಾದ ವ್ಯಕ್ತಿ ಯಾರೆಂದು ಗೊತ್ತಾದರೂ ಕೊಲೆ ಮಾಡಿದವರು ಯಾರೆಂದು ತಕ್ಷಣಕ್ಕೆ ಗೊತ್ತಾಗಿರಲಿಲ್ಲ.
ಸ್ವತಃ ನಿಂಗಪ್ಪನ ತಮ್ಮ ಕಲ್ಲಪ್ಪ ಹಾಗೂ ಆತನ ಮೂವರು ಮಕ್ಕಳು ಕೊಲೆ ಮಾಡಿದವರು. ಇದಕ್ಕೆ ಕಾರಣ ಆಸ್ತಿ. ನಿಂಗಪ್ಪನಿಗೆ ಅವರ ಹಿರಿಯರಿಂದ 34 ಎಕರೆ ಭೂಮಿ ಬಂದಿತ್ತು. ಆದರೆ, ನಿಂಗಪ್ಪನಿಗೆ ಮದುವೆಯಾಗಿರಲಿಲ್ಲ. ಅಲ್ಲದೇ ನಿಂಗಪ್ಪ ಸರ್ಕಾರಿ ನೌಕರಿ ಮಾಡಿದ್ದರಿಂದ ಪಿಂಚಣಿ ಕೂಡಾ ಬರುತ್ತಿತ್ತು. ಕುಟುಂಬದ ಯಾವುದೇ ಜಂಜಾಟ ಇರದೇ ಧಾರವಾಡದಲ್ಲಿ ಮನೆ ಮಾಡಿ ತನ್ನಷ್ಟಕ್ಕೆ ತಾನಿದ್ದ. ಸಹೋದರ ಕಲ್ಲಪ್ಪನಿಗೆ ಮೂವರು ಗಂಡು ಮಕ್ಕಳು. ಇಷ್ಟೊಂದು ಆಸ್ತಿ ಇಟ್ಟುಕೊಳ್ಳೋದಕ್ಕಿಂತ ಮೂವರಲ್ಲಿ ಓರ್ವನನ್ನು ದತ್ತು ಪಡೆದು, ಆತನಿಗೆ ಒಂದಷ್ಟು ಆಸ್ತಿ ಕೊಡು ಎನ್ನುವುದು ಕಲ್ಲಪ್ಪನ ವಾದವಾಗಿತ್ತು. ಆದರೆ, ತನ್ನವರೊಂದಿಗೆ ಯಾವುದೇ ಭಾವನಾತ್ಮಕ ಸಂಬಂಧ ಹೊಂದಿರದ ನಿಂಗಪ್ಪ ಎಂಟು ಎಕರೆ ಹೊಲವನ್ನು ಮಾರಲು ನಿರ್ಧರಿಸಿದ್ದ. ಅಲ್ಲದೆ ತಾನು ಸಾಯುವ ವರೆಗೂ ತನ್ನ ಹೆಸರಿನಲ್ಲಿರುವ ಒಂದಿಂಚು ಭೂಮಿಯನ್ನು ಯಾರಿಗೂ ಕೊಡುವುದಿಲ್ಲ ಎಂದೂ ಸವಾಲು ಹಾಕಿದ್ದನು.
ಹಾಗೆಯೇ ಬಿಟ್ಟರೆ ಎಲ್ಲ ಭೂಮಿ ಮಾರಾಟ ಮಾಡುತ್ತಾನೆ ಅಂದುಕೊಂಡ ಕಲ್ಲಪ್ಪ ಹಾಗೂ ಆತನ ಮಕ್ಕಳಾದ ಮಲ್ಲಿಕಾರ್ಜುನ, ಶ್ರೀಕಾಂತ್, ಕಿರಣ ಹಾಗೂ ಅಳಿಯ ಅಶೋಕ ಸೇರಿಕೊಂಡು ನಿಂಗಪ್ಪನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ.
ನಿಂಗಪ್ಪನ ಸಮಾಜದವರಿಗೆ ಫೋನ್ ಮಾಡಿ ಪೊಲೀಸರು ಮನವಿ ಮಾಡಿಕೊಂಡರೂ ನಿಂಗಪ್ಪ ಸಮಾಜಕ್ಕೂ ಏನೂ ಮಾಡಿಲ್ಲ. ಆತನ ಉಸಾಬರಿ ನಮಗೇಕೆ ಎಂದು ಸಮಾಜದವರೇ ದೂರ ಸರಿದಿದ್ದಾರೆ.